ಎಡಕುಮೇರಿ ರೈಲು ಹಳಿ ಮೇಲೆ ಗುಡ್ಡ ಕುಸಿತ; ಬೆಂಗಳೂರು- ಮಂಗಳೂರು ರೈಲು ಸಂಚಾರ ವ್ಯತ್ಯಯ

| Published : Jun 22 2025, 01:18 AM IST

ಎಡಕುಮೇರಿ ರೈಲು ಹಳಿ ಮೇಲೆ ಗುಡ್ಡ ಕುಸಿತ; ಬೆಂಗಳೂರು- ಮಂಗಳೂರು ರೈಲು ಸಂಚಾರ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ಕಿಲೋಮೀಟರ್ ಸಂಖ್ಯೆ 74 ಮತ್ತು 75ರ ನಡುವಿನ ಅರೆಬೆಟ್ಟ ಮತ್ತು ಎಡಕುಮೇರಿ ಮಧ್ಯ ಭಾಗದಲ್ಲಿ ರೈಲು ಹಳಿ ಮೇಲೆ ಭೂಕುಸಿತವಾಗಿದೆ. ಭಾರೀ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ನಾಲ್ಕುವರೆ ಗಂಟೆಗಳಲ್ಲಿ ಯಶಸ್ವಿ ತೆರವು ಕಾರ್ಯ, ಮತ್ತೆ ರೈಲು ಸಂಚಾರ ಶುರುಕನ್ನಡಪ್ರಭ ವಾರ್ತೆ ಮಂಗಳೂರು

ಭಾರೀ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಘಟನೆ ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ಶನಿವಾರ ನಸುಕಿನ ಜಾವ ಸಂಭವಿಸಿದೆ. ಇದರಿಂದಾಗಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿತ್ತು. ಕಿಲೋಮೀಟರ್ ಸಂಖ್ಯೆ 74 ಮತ್ತು 75ರ ನಡುವಿನ ಅರೆಬೆಟ್ಟ ಮತ್ತು ಎಡಕುಮೇರಿ ಮಧ್ಯ ಭಾಗದಲ್ಲಿ ರೈಲು ಹಳಿ ಮೇಲೆ ಭೂಕುಸಿತವಾಗಿದೆ. ಭಾರೀ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಇದೇ ಮಾರ್ಗದಲ್ಲಿ ಮಂಗಳೂರಿಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಸ್ವಲ್ಪ ದೂರಕ್ಕೆ ಬಂದು ನಿಂತಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.‌‌ ನಸುಕಿನ 4.30 ಗಂಟೆಗೆ ಹಳಿಗೆ ಬಂಡೆ ಬಿದ್ದಿರುವುದು ಗೋಚರಿಸಿದೆ.

ರೈಲು ಸಂಚಾರ ಸ್ಥಗಿತಗೊಂಡ ಕಾರಣ ನೂರಾರು ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಕಾಲ ಕಳೆಯುವಂತಾಯಿತು. ರೈಲ್ವೆ ಅಧಿಕಾರಿಗಳು ಎಲ್ಲ ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಮಳೆಗಾಲದಲ್ಲಿ ಈ ಘಾಟ್‌ ಪ್ರದೇಶದಲ್ಲಿ ತುರ್ತು ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ಕೂಡಲೇ ಹಳಿ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಯಿತು. ಬೆಳಗ್ಗೆ 9 ಗಂಟೆ ಸುಮಾರಿಗೆ ಬಂಡೆಯನ್ನು ತೆರವುಗೊಳಿಸಿ ಹಳಿಯನ್ನು ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸಕಲೇಶಪುರ ಭಾಗದಿಂದ ಸುಬ್ರಹ್ಮಣ್ಯ ಕಡೆಗೆ ಬರುವ ಎಲ್ಲ ರೈಲಗಳನ್ನು ಆಯಾಯ ರೈಲು ನಿಲ್ದಾಣಗಳಲ್ಲಿ ತಡೆ ಹಿಡಿಯಲಾಯಿತು. ಇದರಿಂದಾಗಿ ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಕಡಗರವಳ್ಳಿಗೆ ನಸುಕಿನ 3.40 ಗಂಟೆಗೆ ಆಗಮಿಸಿದ್ದು, 4 ಗಂಟೆ 10 ನಿಮಿಷ ತಡವಾಗಿ ಸಂಚರಿಸಿದೆ. ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಸಕಲೇಶಪುರಕ್ಕೆ ಬೆಳಗ್ಗೆ 3.10 ಕ್ಕೆ ಆಗಮಿಸಿದ್ದು, 3 ಗಂಟೆ 50 ನಿಮಿಷ ತಡವಾಗಿ ಸಂಚರಿಸಿದೆ. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6.26 ಕ್ಕೆ ಆಗಮಿಸಿದ್ದು, 2 ಗಂಟೆ 48 ನಿಮಿಷ ತಡವಾಗಿ ಸಂಚರಿಸಿದೆ. -------------

ಬಂಡೆ ತೆರವು, ರೈಲು ಸಂಚಾರಕ್ಕೆ ಮುಕ್ತ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ ಎಡಕುಮಾರಿ ಮತ್ತು ಸಿರಿಬಾಗಿಲು ನಿಲ್ದಾಣಗಳ ನಡುವೆ ಬೆಳಗ್ಗೆ 4.30 ರ ಸುಮಾರಿಗೆ ಹಳಿಯ ಮೇಲೆ ಮಣ್ಣು ಹಾಗೂ ಬಂಡೆಗಳು ಬಿದ್ದ ಕಾರಣ ಕೆಲವು ರೈಲು ಸಂಚಾರ ಸ್ಥಗಿತವಾಗಿತ್ತು. ತಕ್ಷಣವೇ ಬಂಡೆ ತೆರವು ಕಾರ್ಯ ನಡೆಸಲಾಗಿದೆ. ಬೆಳಗ್ಗೆ 9 ಗಂಟೆಯ ನಂತರ 20 ಕಿ.ಮೀ. ವೇಗದ ಮಿತಿಯೊಂದಿಗೆ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಎಲ್ಲ ರೈಲುಗಳು ಮುಂದಿನ ಪ್ರಯಾಣವನ್ನು ಮುಂದುವರಿಸುತ್ತವೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.