ಕ್ರೀಡಾ ಕ್ಷೇತ್ರದಲ್ಲಿ ಒಲವು ಹೊಂದಿರುವ ಯುವಕ ಯುವತಿಯರಿಗೆ ಕೊಡಗು ಎಜುಕೇಶನಲ್‌ ಮತ್ತು ಸೋಷಿಯಲ್‌ ಸರ್ವಿಸ್‌ ಟ್ರಸ್ಟ್‌ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮಂದಪಂಡ ಚಂಗಪ್ಪ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸೇನೆಗೆ ಸೇರುವ ಆಸಕ್ತಿ ಹೊಂದಿರುವ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಒಲವು ಹೊಂದಿರುವ ಯುವಕ ಯುವತಿಯರಿಗೆ ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಂದಪಂಡ ಚಂಗಪ್ಪ ಭರವಸೆ ನೀಡಿದರು. ದಿ. ಪೊನ್ನಂಚಂಡ ನೀರಜ್ ಕುಶಾಲಪ್ಪ ಜ್ಞಾಪಕಾರ್ಥ ಕುಶಾಲನಗರದಲ್ಲಿ ನಡೆದ ನಾಲ್ಕನೇ ವರ್ಷದ ಗುಡ್ಡಗಾಡು ಓಟ ಸ್ಪರ್ಧೆಯ ಯುವಕರ ವಿಭಾಗದ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮುಂದಿನ ವರ್ಷಗಳಲ್ಲಿ ಈ ಸ್ಪರ್ಧೆಗೆ ಮತ್ತಷ್ಟು ಸ್ಪರ್ಧಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಬಾಲಕಿಯರ ವಿಭಾಗದ ವಿಜೇತರಿಗೆ ಬಹುಮಾನ ವಿತರಿಸಿದ ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಮೇ.ಜ. ಕೊಡಂದೇರ ಅರ್ಜುನ್ ಮುತ್ತಣ್ಣ ಮಾತನಾಡಿ ಮುಂದಿನ ವರ್ಷದಿಂದ ಯುವತಿಯರಿಗೂ ಯುವಕರಿಗೆ ನೀಡಲಾಗುವ ಮೊತ್ತದ ನಗದು ಬಹುಮಾನ ಕೊಡಲಾಗುವುದು. ಓಟದ ದೂರವನ್ನೂ ಅಷ್ಟೇ ನಿಗದಿ ಮಾಡಲಾಗುವುದು. ಕೂಡಿಗೆಯ ಕೊಡಗು ಸೈನಿಕ ಶಾಲೆಯಿಂದ ಈ ವರ್ಷ 23 ವಿದ್ಯಾರ್ಥಿಗಳು ಎನ್‌ಡಿಎ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಯುವಕರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲಿ ಎಂದು ಆಶಯ ವ್ಯಕ್ತಪಡಿಸಿದರು. ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ನ ಟ್ರಸ್ಟಿ ಕ್ಯಾ. ಪಟ್ಟಡ ಕಾರ್ಯಪ್ಪ ಮಾತನಾಡಿ, ಸೇನೆ ಸೇರಲು ಬಯಸುವವರಿಗೆ ತಮ್ಮ ಟ್ರಸ್ಟ್ನಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಅಗ್ನಿವೀರ್ ದೈಹಿಕ ಪರೀಕ್ಷೆ ತರಬೇತಿ ಜತೆಗೆ ಲಿಖಿತ ಪರೀಕ್ಷೆಗೂ 45 ದಿನಗಳ ಉಚಿತ ತರಬೇತಿ ನೀಡಲಾಗುವುದು. ಇಲ್ಲಿಯ ತನಕ ತಮ್ಮ ಟ್ರಸ್ಟ್ ಮೂಲಕ ತರಬೇತಿ ಪಡೆದ 83 ಮಂದಿ ಯುವಕರು ಸೇನೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಕಾರ್ಯಕ್ರಮ ಸಂಘಟಕರಾದ ಹವಾಲ್ದಾರ್ ಅಮೆ, ಜನಾರ್ದನ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ, ಖಜಾಂಚಿ ಪಂದ್ಯಂಡ ಸೂರಜ್ ಮಾಚಯ್ಯ, ಬೊಪ್ಪಂಡ ಸುಬ್ರಹ್ಮಣ್ಯ, ಪಟ್ಟಡ ಧನು ಉತ್ತಯ್ಯ, ಜೂನಿಯರ್ ಕಾಲೇಜು ಉಪಪ್ರಾಂಶುಪಾಲ ಎ.ಸಿ. ಮಂಜುನಾಥ್, ಕಾರ್ತಿಕ್ ಗೌಡ, ಬೈತಡ್ಕ ಲೀಲಾವೇಣಿ ಮತ್ತಿತರರು ಇದ್ದರು. ---------ಬಾಕ್ಸ್-------------------------------8 ಕಿಮೀ ದೂರದ ಯುವಕರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಚನ್ನಬಸವ ಪ್ರಥಮ, ಉಜಿರೆ ಎಸ್‌ಡಿಎಂ ಕಾಲೇಜಿನ ಯು.ಎನ್. ನಿತಿನ್ ದ್ವಿತೀಯ, ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ಡೆಲ್ಸನ್ ಜಾಯ್ ತೃತೀಯ, ಚೇರಂಬಾಣೆ ಅರುಣ ಪಿಯು ಕಾಲೇಜಿನ ದಿಲನ್ ಪೊನ್ನೇಟಿ ನಾಲ್ಕು, ಕೂಡಿಗೆ ಕ್ರೀಡಾ ಶಾಲೆಯ ಮೋನಿಶ್ ಐದು ಹಾಗೂ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಜಿ.ಎಸ್. ಸುಧಾ 6ನೇ ಸ್ಥಾನ ಗಳಿಸಿದರು.5 ಕಿಮೀ ದೂರದ ಯುವತಿಯರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಾದ ಡಿ.ಕೆ. ಭವಿಷ್ಯ ಪ್ರಥಮ, ಸಿ.ಡಿ. ನೇಕ್ಷಾ ದ್ವಿತೀಯ, ಡಿ.ಡಿ. ತನ್ವಿ ತೃತೀಯ, ಮೈಸೂರು ಟೆರೆಷಿಯನ್ ಕಾಲೇಜಿನ ಅಶ್ವಿನಿ ನಾಲ್ಕು, ಸಿದ್ದಾಪುರ ಗೇಟ್ ಸರ್ಕಾರಿ ಪಿಯು ಕಾಲೇಜಿನ ರಶ್ಮಿಕಾ ಐದು ಹಾಗೂ ಬೆಂಗಳೂರು ಎಸ್‌ಜಿಎಂನ ಪ್ರಕೃತಿ ಬೋಪಯ್ಯ 6ನೇ ಸ್ಥಾನ ಗಳಿಸಿದರು.

ಮ್ಯಾರಾಥಾನ್‌ನಲ್ಲಿ ಮಕ್ಕಳು ಸೇರಿದಂತೆ 150ಕ್ಕೂ ಅಧಿಕ ಯುವಕರು, 50ಕ್ಕೂ ಅಧಿಕ ಯುವತಿಯರು ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು.