ಕಿಡಿಗೇಡಿಗಳಿಂದ ಹಿಂದೂ ಸಮುದಾಯ ಭಾವನೆಗೆ ಧಕ್ಕೆ: ಶಾಸಕ ಎಸ್‌.ಎನ್‌.ಚನ್ನಬಸಪ್ಪ

| Published : Jan 14 2025, 01:00 AM IST

ಕಿಡಿಗೇಡಿಗಳಿಂದ ಹಿಂದೂ ಸಮುದಾಯ ಭಾವನೆಗೆ ಧಕ್ಕೆ: ಶಾಸಕ ಎಸ್‌.ಎನ್‌.ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಗೋ ಹತ್ಯೆಗೆ ಪ್ರಯತ್ನ ನಡೆದಿರುವುದನ್ನು ಖಂಡನೀಯ.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕಿಡಿಕಾರಿದರು. ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಗೋವುಗಳ ಕೆಚ್ಚಲು ಕೊಯ್ದ ಘಟನೆಗೆ ಖಂಡನೆ । ಕಠಿಣ ಶಿಕ್ಷೆ ವಿಧಿಸಲು ಸಂಸದ ರಾಘವೇಂದ್ರ ಆಗ್ರಹ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಗೋ ಹತ್ಯೆಗೆ ಪ್ರಯತ್ನ ನಡೆದಿರುವುದನ್ನು ಖಂಡನೀಯ.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಗೋವುಗಳ ಕೆಚ್ಚಲು ಕೊಯ್ದ ಘಟನೆ ಅತ್ಯಂತ ಖಂಡನೀಯವಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋವುಗಳ ಸಂರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಆದರೆ ಪ್ರಸ್ತುತ ರಾಜ್ಯದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಗೋವುಗಳ ಕೆಚ್ಚಲನ್ನು ಕೊಯ್ಯುವಂತಹ ನೀಚ ಕೃತ್ಯಕ್ಕೆ ಮುಸ್ಲಿಂ ಕಿಡಿಗೇಡಿಗಳೂ ಇಳಿದಿರುವುದು ಅತ್ಯಂತ ನೋವಿನ ಸಂಗತಿ. ಮುಕ್ಕೋಟಿ ದೇವತೆಗಳು ವಾಸಿಸುವಂತಹ ಗೋಮಾತೆಗೆ ಇಂತಹ ಸ್ಥಿತಿಯನ್ನು ನೀಡುವ ಅವರ ಮಾನಸಿಕತೆ ಎಂತಹದು ಎನ್ನುವುದು ಗೊತ್ತಾಗುತ್ತದೆ ಎಂದರು.

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಆದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು,ಇಲಾಖೆಯ ಭಯವೇ ಇಲ್ಲದಂತಾಗಿದೆ. ಅದರ ಪರಿಣಾಮವೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆಕ್ರೋಶವ್ಯಕ್ತಪಡಿಸಿದರು. ನಾನು ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದವರು ಮುಖ್ಯಮಂತ್ರಿಯಾದ ಪರಿಣಾಮ ಇವತ್ತು ಗೋವುಗಳಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ೭೦ ಗೋ ಶಾಲೆಗಳನ್ನು ತೆರೆಯಬೇಕೆಂದು ಬಜೆಟ್‌ನಲ್ಲಿ ಮಂಜೂರಾತಿಯನ್ನು ನೀಡಲಾಗಿದೆ. ಆದರೆ ಇದುವರೆಗೂ ಗೋಶಾಲೆಯನ್ನು ತೆರೆಯುವಂತಹ ಕಾರ್ಯಕ್ಕೆ ಮುಂದಾಗಿಲ್ಲ. ಗೋಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸರ್ವ ಜನಾಂಗದವರು ವಾಸಿಸುವಂತಹ ರಾಷ್ಟ್ರ ನಮ್ಮದು. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರವನ್ನು ಬಿಟ್ಟುಕೊಟ್ಟಿದ್ದೇವೆ. ಅವರ ಪಾಡಿಗೆ ಅವರು ಬದುಕು ನಡೆಸುವುದಕ್ಕೆ ನಮ್ಮ ರಾಷ್ಟ್ರದಲ್ಲಿ ಅವಕಾಶವಿದೆ. ಆದರೆ ಇಂತಹ ಹೇಯ ಕೃತ್ಯವನ್ನುನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಸ್ಬೂಡ ಮಾಜಿ ಅಧ್ಯಕ್ಷ ನಾಗರಾಜ್,ಬಿಜೆಪಿ ನಗರದ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಇತರರು ಇದ್ದರು.

ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಸಂಸದ ಆಗ್ರಹ

ಬೆಂಗಳೂರಿನ ಚಾಮರಾಜಪೇಟೆ ವಿನಾಯಕ ನಗರದ ಹಳೇ ಪೆನ್ಷನ್ ಮೊಹಲ್ಲಾದ ರಸ್ತೆಯ ಬದಿ ಶೆಡ್ ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ಮಚ್ಚಿನಿಂದ ಕಾಲಿಗೆ ಹೊಡೆದಿರುವುದು ರಾಕ್ಷಸೀಯ, ಅಮಾನವೀಯ ಮತ್ತು ಹೇಯ ಕೃತ್ಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಖಂಡಿಸಿದ್ದಾರೆ.

ಘಟನೆ ನಡೆದ ಬಳಿಕ ದಿನವಿಡೀ ಮೂಕಪ್ರಾಣಿಗಳು ವೇದನೆಯಿಂದ ನರಳಿದ್ದು, ಮಾವನೀಯತೆ ಇಲ್ಲದ ಕ್ರೂರಿಗಳು ಈ ರೀತಿಯ ನೀಚ ಕೃತ್ಯ ಎಸಗಿದ್ದಾರೆ. ಅವರನ್ನು ಕೂಡಲೇ ಪತ್ತೆ ಹಚ್ಚಿ ಅವರಿಗೆ ಕಠಿಣವಾದ ಶಿಕ್ಷೆ ನೀಡಬೇಕು. ಕೆಲವು ನಗರಗಳಲ್ಲಿ ಮಾದಕ ವ್ಯಸನಿಗಳು ಮತ್ತು ಪುಂಡರ ಹಾವಳಿ ಮಿತಿ ಮೀರುತ್ತಿದ್ದು, ಸಮಾಜದಲ್ಲಿ ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.