ಹಾನಗಲ್ಲ: ಆರ್‌ಎಸ್‌ಎಸ್ ನೂರು ವರ್ಷದ ಸಂಭ್ರಮಾಚರಣೆ ಅಂಗವಾಗಿ ದೇಶದ 84 ಸಾವಿರ ಕಡೆಗಳಲ್ಲಿ ಹಿಂದೂ ಸಮಾವೇಶಗಳನ್ನು ಆಯೋಜಿಸಲಾಗಿದ್ದು, ಹಾನಗಲ್ಲ ಪಟ್ಟಣದಲ್ಲಿ ಫೆ.22ರಂದು ಹಿಂದು ಸಮ್ಮೇಳನ ಹಾಗೂ ಶೋಭಾ ಯಾತ್ರೆ ನಡೆಯಲಿದ್ದು ಐದು ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸಮ್ಮೇಳನದ ಅಧ್ಯಕ್ಷ ರವಿಕಿರಣ ಪಾಟೀಲ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಡೀ ದೇಶದಲ್ಲಿ ಸಮಾಜಮುಖಿ ಕಾರ್ಯಗಳ ಜೊತೆಗೆ ಹಿಂದೂ ಸಂಘಟನೆ, ರಾಷ್ಟ್ರೀಯ ಚಿಂತನಗಳನ್ನು ಸಮಾಜದಲ್ಲಿ ಬಿತ್ತಿ ಬೆಳೆಯುವ ಸತ್ಕಾರ್ಯದಲ್ಲಿ ಸಕ್ರಿಯವಾಗಿದೆ. ದೇಶದಲ್ಲಿ ಹಿಂದೂಗಳ ಮತಾಂತರ, ಭಯೋತ್ಪಾದನೆ, ಲವ್ ಜಿಹಾದಿ, ಜಾತಿ ವೈಷಮ್ಯಗಳು ಸಾಮಾಜಿಕ ಪಿಡುಗುಗಳಾಗಿದ್ದು ಇವುಗಳ ವಿರುದ್ಧ ಕಟಿಬದ್ಧವಾಗಿ ಆರ್‌ಎಸ್‌ಎಸ್ ಸಮರ್ಥವಾಗಿ ಹೋರಾಡುತ್ತಿದೆ. ಹಿಂದೂ ಸಂಘಟನೆಯನ್ನು ಬಲಿಷ್ಠಗೊಳಿಸುತ್ತಿದೆ ಎಂದರು.ಫೆ. 22ರಂದು ನಡೆಯುವ ಹಿಂದೂ ಸಮ್ಮೇಳನದ ಅಂಗವಾಗಿ ಪಟ್ಟಣದ 42ಕ್ಕೂ ಅಧಿಕ ಹಿಂದೂ ಸಮಾಜದ ಧಾರ್ಮಿಕ ಸಮುದಾಯ ಸಂಘಟನೆಗಳನ್ನು ಭೇಟಿ ಮಾಡಿ ವೀಳ್ಯ ನೀಡಿ ಸಮಾವೇಶಕ್ಕೆ ಸ್ವಾಗತಿಸಲಾಗಿದೆ. ಶೋಭಾ ಯಾತ್ರೆಯಲ್ಲಿ ಮಹಾಪುರುಷರ ಟ್ಯಾಬ್ಲೋ ಸೇರಿದಂತೆ ವಿವಿಧ ಮಹಾಪುರುಷರ ವೇಶಭೂಷಣಗಳನ್ನು ಅಳವಡಿಸಲಾಗಿದೆ. ಸಮ್ಮೇಳನದಲ್ಲಿ ವಿಶೇಷವಾಗಿ ಗದಗ ಜಿಲ್ಲೆ ಹೊಳೆ ಆಲೂರಿನ ಜ್ಞಾನ ಸಿಂಧೂ ಅಂಧ ಮಕ್ಕಳ ವಸತಿ ಶಾಲೆ ಮಕ್ಕಳಿಂದ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನವೂ ನಡೆಯಲಿದೆ ಎಂದು ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎನ್‌ಸಿಜೆಸಿ ಕಾಲೇಜಿನಿಂದ ಟಿಜಿ ರಸ್ತೆ ಮೂಲಕ ಬಿ.ಬಿ.ಪದಕಿ ವೃತ್ತ ಒಳಗೊಂಡು ತಾರಕೇಶ್ವರ ದೇವಸ್ಥಾನದವರೆಗೆ ಶೋಭಾ ಯಾತ್ರೆ ನಡೆಯಲಿದೆ. ನಂತರ ಸಂಜೆ 6 ಗಂಟೆಗೆ ತಾರೇಕೇಶ್ವರ ದೇವಸ್ಥಾನದ ಪಕ್ಕದ ಮೈದಾನದಲ್ಲಿ ನಡೆಯುವ ಧರ್ಮ ಸಭೆಯಲ್ಲಿ ಹಾವೇರಿ ಬಣ್ಣದ ಮಠದ ಅಭಿನವ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯವಹಿಸುವರು. ಬೆಂಗಳೂರಿನ ಪ್ರಶಿಕ್ಷಣ ಭಾರತಿ ರಾಜ್ಯ ಯುವಾ ಬ್ರಿಗೇಡ್ ಪ್ರಕಲ್ಪ ಪ್ರಮುಖ ಹಾಗೂ ಸಂಪನ್ಮೂಲ ವ್ಯಕ್ತಿ ಕಿರಣ ರಆಮ ವಕ್ತಾರರಾಗಿ ಪಾಲ್ಗೊಳ್ಳುವರು. ಹಿಂದೂ ಸಮ್ಮೇಳನ ಅಧ್ಯಕ್ಷ ರವಿಕಿರಣ ಪಾಟೀಲ ಅಧ್ಯಕ್ಷತೆವಹಿಸುವರು.ಬೈಕ್ ರ‍್ಯಾಲಿ: ಗುರುವಾರ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನದ ಅಂಗವಾಗಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.