ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಲವ್ ಜಿಹಾದ್ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಟ್ಟುಕೊಂಡು ಮತಾಂತರ ಮಾಡುವ ಕೆಲಸಕ್ಕೆ ಒಂದು ಸಮುದಾಯ ಮುಂದಾಗಿದ್ದು, ನಮ್ಮ ಹೆಣ್ಣುಮಕ್ಕಳು ಜಾಗೃತಿ ವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ್ಯ ಕಾರ್ಯಕಾರಣಿ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೇಲೂರು ತಾಲೂಕು ಘಟಕದಿಂದ ವಿಜಯದಶಮಿ ಅಂಗವಾಗಿ ಪಥ ಸಂಚಲನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ ಮಾತನಾಡಿದ ಅವರು, ಪ್ರೀತಿಯ ಹೆಸರಿನಲ್ಲಿ ಹೆಣ್ಣುಮಕ್ಕಳು ಇತರೆ ಧರ್ಮಗಳ ವ್ಯಾಮೋಹಕ್ಕೆ ಬಲಿಯಾಗಬಾರದು. ನಮ್ಮ ರಾಜ್ಯದ ಬಹುದೊಡ್ಡ ಪಿಡುಗೆಂದರೆ, ಮತಾಂತರದ ಮೂಲಕ ಬಡವರ್ಗ ಹಾಗೂ ಕೂಲಿಕಾರ್ಮಿಕರನ್ನು ಸೆಳೆಯುತ್ತಿರುವುದು. ಹಿಂದೂ ಧರ್ಮ ಜಗತ್ತಿನಲ್ಲಿ ಅತ್ಯಂತ ಜಾತ್ಯತೀತ ಧರ್ಮ. ನಾವು ಪ್ರಕೃತಿಯನ್ನು ದೇವರಂತೆ ಪೂಜಿಸುತ್ತೇವೆ.ಆದರೆ ನಾವು ಪೂಜಿಸುವ ಗೋಮಾತೆಯನ್ನು ವಧಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೊರದೇಶದಿಂದ ನುಸುಳುಕೋರರು ಹೆಚ್ಚಾಗುತ್ತಿರುವುದರಿಂದ ಇದು ಮುಂದಿನ ದಿನದಲ್ಲಿ ಬಹುದೊಡ್ಡ ಗಂಡಾತರವಾಗುವುದರಿಂದ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.
ಭಾರತ ದೇಶ ಧರ್ಮಧಾರಿತ ಹೆಸರಲ್ಲಿ ಮುಂದಿನ ದಿನಗಳಲ್ಲಿ ದೇಶ ವಿಭಜನೆ ಆಗುವ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ತೀವ್ರವಾಗಿ ವಿರೋಧಿಸಿ, ಕರಾಳ ದಿನವನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರ ಮಾತನ್ನು ಕೇಳಿದ್ದರೆ ಇಂದು ಕೋಮು ಸಮಸ್ಯೆ ಹಿಂದೂ ರಾಷ್ಟ್ರದಲ್ಲಿ ಇರುತಿರಲ್ಲಿಲ್ಲ. ಅಂಬೇಡ್ಕರ್ ಅವರ ಪೂರ್ವ ಆಲೋಚನೆ ತೆಗೆದುಕೊಳ್ಳದೆ ಗಾಂಧಿಜಿಯವರು ನೆಹರೂ ಅಂಬೇಡ್ಕರ್ ಅವರ ವಿಚಾರದಧಾರೆಗಳ ಅರಿತುಕೊಳ್ಳದೆ ದೇಶ ವಿಭಜನೆ ದಾರಿ ಮಾಡಿದ್ದು, ಅದರ ಪರಿಣಾಮವನ್ನು ದೇಶ ಈಗ ಎದುರಿಸಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ತಾಯಿಯ ಸ್ಥಾನಕ್ಕೆ ಮಹತ್ವ ನೀಡಿದ ಹಿಂದೂ ರಾಷ್ಟ್ರದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ವಿಶ್ವದಲ್ಲೇ ಭಾರತಕ್ಕೆ ಭವ್ಯವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇಶದಲ್ಲಿನ ಅನ್ಯಕೋಮಿನವರು ಇಲ್ಲಿನ ಸಂಸ್ಕೃತಿಗೆ ಗೌರವ ನೀಡಬೇಕಿದೆ ಹೊರತು ಅದರ ವಿರುದ್ಧ ಮಾತನಾಡುವುದು ಈ ಮಣ್ಣಿಗೆ ದ್ರೋಹ ಬಗೆದಂತೆ. ಇತ್ತೀಚಿನ ದಿನದಂದು ಒಂದು ಕೋಮಿನ ತೃಷ್ಟಿಕರಣದಿಂದ ನಾನು ಹಿಂದೂ ಅಲ್ಲ ಎನ್ನುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚುನಾವಣೆ ಓಟಿಗಾಗಿ ನಾನು ಹಿಂದೂ ನಾನು ಹಿಂದೂ ಎನ್ನುವ ಮಾತುಗಳು ಕೇಳಬರುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಹಿಂದೂ ಎಂದರೆ ಒಂದೇ ಭಾವನೆ ಇರಬೇಕು. ಆದರೆ ಆರ್ಎಸ್ಎಸ್ ಹಿಂದೂ, ಬಿಜೆಪಿ ಹಿಂದೂ, ಕಾಂಗ್ರೆಸ್ ಹಿಂದೂ ಎನ್ನುವ ಭಾವನೆಯನ್ನು ಹುಟ್ಟುಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ರೇಣುಕುಮಾರ್, ಶ್ರೀನಿವಾಸ್, ಮಾಜಿ ಸೈನಿಕ ಇಂದ್ರೇಶ್, ಮುರುಳಿ ರಂಗನಾಥ್, ಶ್ರೀಹರಿ, ರವೀಂದ್ರ, ತೊ.ಚ ಅನಂತ ಸುಬ್ಬರಾಯ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.