ಸಾರಾಂಶ
ಗಲಭೆಗಳನ್ನು ಸೃಷ್ಟಿಸುವ ಘಟನೆಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಹಿಂದೂ ಹಬ್ಬಗಳ ಸಮಯದಲ್ಲಿ ನಿರಂತರವಾಗಿ ಉದ್ದೇಶ ಪೂರ್ವಕವಾಗಿ ಗಲಭೆಗಳನ್ನು ಸೃಷ್ಟಿಸುವ ಘಟನೆಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ತಹಸೀಲ್ದಾರ್ ಕಚೇರಿ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗೃಹಮಂತ್ರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ್ದಾರೆ.ಕರ್ನಾಟಕ, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ, ಉತ್ತರಖಂಡ ಮತ್ತು ಇತರ ರಾಜ್ಯಗಳಲ್ಲಿ ಅನ್ಯಕೋಮಿನ ಜನರಿಂದ ಹಿಂದುಗಳ ಮೇಲೆ ಹಿಂಸಾತ್ಮಕ ದಾಳಿಗಳು ನಡೆಯುತ್ತಿದ್ದು, ರಾಷ್ಟ್ರೀಯ ಭದ್ರತಾ ಕಾಯಿದೆ ಮತ್ತು ಯುಎಪಿಎ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.ದಾಳಿಕೋರರಿಂದ ಸರ್ಕಾರಿ ಆಸ್ತಿಪಾಸ್ತಿಗೆ ಉಂಟಾದ ನಷ್ಟದ ಹಣವನ್ನು ದಾಳಿಕೋರರಿಂದ ವಸೂಲಿ ಮಾಡುವ ಕಾನೂನನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ. ಸೆ.24ರಂದು ದಾವಣಗೆರೆಯಲ್ಲಿ ಅನ್ಯಕೋಮಿನವರು ಹಿಂದೂಗಳ ಮನೆಯ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಗುಜರಾತ್ನ ಗಾಂಧಿನಗರದಲ್ಲೂ ಸಮಾಜಘಾತಕ ಶಕ್ತಿಗಳು ಕಲ್ಲುತೂರಿ ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಇಂತಹ ಘಟನೆಗಳಿಂದಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದ್ದು, ಸೂಕ್ತ ಕಾನೂನು ಕಾಯ್ದೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.ಮನವಿ ಸಲ್ಲಿಸುವ ಸಂದರ್ಭ ಹಿಂದು ಜಾಗೃತಿ ಸಮಿತಿಯ ಪಿ.ಎಚ್.ಪ್ರಸಾದ್, ಬಸವಕುಮಾರ ಶಾಸ್ತ್ರಿ, ಎಂ.ಜಿ.ಸಾವಿತ್ರಿ, ಕೆ.ಜಿ.ರಾಧಕೃಷ್ಣ, ಪ್ರಸನ್ನ ಕುಮಾರ್ ತಾಕೇರಿ, ಜಗದೀಶ್, ಶಂಕರ, ಅಣ್ಣಯ್ಯ ಇದ್ದರು.