ಪುತ್ತೂರು: ಹಿಂದೂ ಧರ್ಮದ ದೇವರ ಕುರಿತು ಪದೇ ಪದೇ ಅವಹೇಳನ ಮಾಡುತ್ತಿರುವ ಪ್ರೊ.ಭಗವಾನ್ ವಿರುದ್ಧ ಸುಮೋಟೋ ಕೇಸು ದಾಖಲಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಒತ್ತಾಯಿಸುವುದಾಗಿ ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.ಭಗವಾನ್ ವಿಚಾರದಲ್ಲಿ ಗೃಹ ಸಚಿವರ ಜತೆ ಮಾತನಾಡಬೇಕು ಎಂಬ ಶ್ರೀರಾಮನ ಭಕ್ತರು ಆಗ್ರಹಿಸಿರುವ ವಿಚಾರದ ಕುರಿತು ಮಾಧ್ಯಮದ ಜತೆ ಮಾತನಾಡಿದ ಅವರು, ನನಗೆ ಯಾರೂ ಮನವಿ ಕೊಟ್ಟಿಲ್ಲ, ಕೊಡದಿದ್ದರೂ ಪರವಾಗಿಲ್ಲ. ಇಂತಹ ವಿಚಾರಗಳು ನಡೆಯಬಾರದು. ಅವರವರ ಧರ್ಮ, ಅವರವರಿಗೆ ನಂಬಿಕೆ. ಅದಕ್ಕೆ ಅವಹೇಳನಕಾರಿಯಾಗಿ ಮಾತನಾಡುವುದು ಖಂಡಿತ ತಪ್ಪು. ಭಗವಾನ್ ನಡೆಯನ್ನು ತಾನೂ ಖಂಡಿಸುವುದಾಗಿ ಹೇಳಿದರು.ಈ ರೀತಿ ಮಾತನಾಡುವವನ್ನು ಕೂಡಲೇ ಬಂಧಿಸಿ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು. ಸುಮೋಟೋ ಕೇಸು ದಾಖಲಿಸಲು ಇಲಾಖೆಗೆ ನಿರ್ದೇಶನ ನೀಡುವಂತೆ ಸಿಎಂ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಒತ್ತಾಯಿಸುತ್ತೇನೆ ಎಂದು ಅಶೋಕ್ ರೈ ತಿಳಿಸಿದ್ದಾರೆ.