ರಾಮನಗರದಲ್ಲಿ ಶುಕ್ರವಾರ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಿತು.

ಕನ್ನಡಪ್ರಭ ವಾರ್ತೆ ರಾಮನಗರ

ವಿಶ್ವ ಶಾಂತಿಯ ಸಂದೇಶ ನೀಡಲು ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಂಜೆ ಶೋಭಾಯಾತ್ರೆಗೆ ರೂಟ್ಸ್ ಆ್ಯಂಡ್ ಬ್ರಾಂಚಸ್ ರಿಸರ್ಚ್ ಫೌಂಡೇಶನ್ ಮುಖ್ಯಸ್ಥ ಜಿ.ಆರ್.ಜಗದೀಶ್ಹಿಂ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜದ ಜಾಗೃತಿಗಾಗಿ ಕರ್ನಾಟಕದಲ್ಲಿ 1500 ಹಿಂದೂ ಸಮಾಜೋತ್ಸವ ಸಮಾವೇಶಗಳು ನಡೆಯುತ್ತಿವೆ. ಭಾರತ ಶಾಂತಿಧೂತ ರಾಷ್ಟ್ರವಾಗಿದ್ದು, ಪ್ರಪಂಚದ ಇತಿಹಾಸದಲ್ಲಿ ಭಾರತ ಇನ್ನೊಂದು ದೇಶ ಮತ್ತು ಮತಗಳ ಮೇಲೆ ಆಕ್ರಮಣ ಮಾಡಿದ ಉದಾಹರಣೆ ಇಲ್ಲ. ಇಂತಹ ದೇಶದಲ್ಲಿ ಜನಿಸಿದ ನಾವೆಲ್ಲರೂ ಸಹೋದರರು ಎಂಬ ಭಾವನೆ ಬೆಳೆಸುವ ಅವಶ್ಯಕತೆಯಿದೆ ಎಂದರು.

ಯೋಗ ಮತ್ತು ಆಯುರ್ವೇದ ಭಾರತದ ದೊಡ್ಡ ಶಕ್ತಿಗಳಾಗಿವೆ. ಈ ಜ್ಞಾನ ಭಂಡಾರಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುವುದು ಮುಖ್ಯ. ಹಿಂದೂಗಳಾದ ನಮ್ಮಲ್ಲಿ ನಮ್ಮ ದೇಶದ, ನಮ್ಮಗಳ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ಪರಿಚಯಿಸಲು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಹಿನ್ನಲೆಯಲ್ಲಿ ಎಲ್ಲೆಡೆ ಹಿಂದೂ ಸಮಾಜೋತ್ಸವ ಆಚರಿಲಾಗುತ್ತಿದೆ. ಮೊದಲು ಹಿಂದೂಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಜಗದೀಶ್ ತಿಳಿಸಿದರು.

ಹಿಂದೂ ಸಂಗಮ ಶೋಭಾಯಾತ್ರೆ ಶ್ರೀರಾಮ ದೇವಾಲಯದಿಂದ ಹೊರಟು ಅಗ್ರಹಾರ, ಕಾಮಣ್ಣನ ಗುಡಿ ವೃತ್ತ, ಎಂ.ಜಿ.ರಸ್ತೆ ಮೂಲಕ ಶೋಭಾ ಹೋಟೆಲ್ ಸರ್ಕಲ್, ಛತ್ರದ ಬೀದಿಯಲ್ಲಿ ಸಾಗಿ ಮತ್ತೆ ರಾಮದೇವಾಲಯ ತಲುಪಿತು. ಶೋಭಾಯಾತ್ರೆ ಅಂಗವಾಗಿ ಪೋಲೀಸರು ಬಂದೂಬಸ್ತ್ ಕಲ್ಪಿಸಿದ್ದರು. ಈ ವೇಳೆ ಗಾಯಕಿ ಝಾನ್ಸಿ ಮತ್ತು ಮಹಿಳಾ ತಂಡದವರು ಭಜನೆ ಪದಗಳನ್ನು ಪಠಿಸಿದರು. ವೀರಗಾಸೆ, ಮಂಗಳವಾಧ್ಯ ಯಾತ್ರೆಯಲ್ಲಿ ಸಾಗಿದವು.

ಚನ್ನಪಟ್ಟಣ ವಿರಕ್ತ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ನಿವೃತ್ತ ಉಪನ್ಯಾಸಕ ಪೂರ್ಣಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ಪ್ರಕಾಶ್, ಬಿಜೆಪಿ ರಾಜ್ಯ ಪರಿಷತ್ತು ಸದಸ್ಯ ಸುರೇಶ್, ನಗರಸಭೆ ಮಾಜಿ ಸದಸ್ಯ ನಾಗೇಶ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗರಾಜು, ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ನರಸಿಂಹಯ್ಯ, ವಕೀಲರಾದ ಕೆಂಪಯ್ಯ, ದರ್ಶನ್, ಬಿಜೆಪಿ ಮುಖಂಡರಾದ ನರಸಿಂಹಯ್ಯ, ಶಿವಾನಂದ್, ಪ್ರವೀಣ್‌ ಗೌಡ, ಮಂಜು, ಅಶೋಕ್, ಚನ್ನಪ್ಪ, ಚಂದ್ರಶೇಖರರೆಡ್ಡಿ, ಚನ್ನಕೇಶವ್, ಚಂದನ್‌ಮೋರೆ, ಸಮಾಜ ಸೇವಕ ಜನತಾ ನಾಗೇಶ್, ಚರಣ್‌ಗೌಡ ಸೇರಿದಂತೆ ಬಿಜೆಪಿಯ ಪ್ರಮುಖರು, ಮಹಿಳೆಯರು, ಯುವಕರು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಭಾರತಾಂಬೆಯನ್ನು ವಿಶ್ವ ಗುರುವಾಗಿ ಮೆರೆಸುವುದು ಮತ್ತು ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವುದು ಹಿಂದೂ ಸಮಾಜೋತ್ಸವದ ಉದ್ದೇಶವಾಗಿದೆ.

-ಶ್ರೀ ಶಿವರುದ್ರಸ್ವಾಮೀಜಿ, ಚನ್ನಪಟ್ಟಣ ವಿರಕ್ತ ಮಠ