ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿಯ ಮರಗೋಡು ಮಂಡಲ ವತಿಯಿಂದ ಫೆ.21ರಂದು ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಪಿ.ವೈ.ಆನಂದ ರಘು ತಿಳಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭೂಮಿ, ಹಿಂದೂಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಹಿಂದೂ ಸಂಘಟಿತನಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ. ಮಾತೃಭೂಮಿ ರಕ್ಷಣೆಯಾಗುತ್ತದೆ. ಈ ಮಹತ್ವದ ಉದ್ದೇಶದಿಂದ ಮರಗೋಡು ಮಂಡಲ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಮರಗೋಡು ಮಂಡಲ ಖಜಾಂಚಿ ಜನಾರ್ದನ ಮಾತನಾಡಿ, ಅಂದು ಬೆಳಗ್ಗೆ 9.30ಗಂಟೆಗೆ ಮರಗೋಡು ಪದವಿ ಪೂರ್ವ ಕಾಲೇಜು ಮೈದಾನದಿಂದ ಶೋಭಯಾತ್ರೆ ಆರಂಭವಾಗಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಮಾಪ್ತಿಗೊಳ್ಳಲಿದೆ. ಮೆರವಣಿಗೆಯಲ್ಲಿ ಭಾರತಾಂಭೆ, ರಾಮ, ಕಾವೇರಿಯ ಭಾವಚಿತ್ರವಿರುವ ಮಂಟಪ ಸೇರಿದಂತೆ ಚಂಡೆ ವಾಧ್ಯಗಳು ಇರಲಿದೆ. ನಂತರ 11 ಗಂಟೆಗೆ ಗ್ರಾಮದ ಪ್ರಮುಖರಾದ ಚೆರಿಯಮನೆ ಉದಯ್‌ಕುಮಾರ್ ಅಧ್ಯಕ್ಷತೆಯಲ್ಲಿ ಭೌದ್ಧಿಕ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ರವಿಭೂತನಕಾಡು ಅವರಿಂದ ಭಜನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಕಟ್ಟೆಮಾಡು, ಅರೆಕಾಡು, ಮರಗೋಡು ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.ಮರಗೋಡು ಮಂಡಲದ ಉಪಾಧ್ಯಕ್ಷ ಪಿ.ಆರ್.ಲಕ್ಷ್ಮಿಪತಿ, ಕಾರ್ಯದರ್ಶಿ ಬೆಳ್ಯಪ್ಪ, ಸದಸ್ಯರಾದ ಸನತ್‌ಕುಮಾರ್, ಮುಕ್ಕಾಟಿ ಚಿದಂಬರ ಸುದ್ದಿಗೋಷ್ಠಿಯಲ್ಲಿದ್ದರು.