ಉಡುಪಿ ನಗರ ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಒಳಕಾಡು ವಾರ್ಡ್ ಮತ್ತು ತೆಂಕಪೇಟೆ ವಾರ್ಡ್ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮ

ಉಡುಪಿ: ಉಡುಪಿ ನಗರ ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಒಳಕಾಡು ವಾರ್ಡ್ ಮತ್ತು ತೆಂಕಪೇಟೆ ವಾರ್ಡ್ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮವು ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದ ಶೇರಿಗಾರ್ ಕುಟಂಬಸ್ಥರ ಗದ್ದೆಯಲ್ಲಿ ನಡೆಯಿತು.ಈ ಕಾರ್ಯಕ್ರಮದ ಅಂಗವಾಗಿ ಒಳಕಾಡಿನ ಸರಸ್ಪತಿ ಸಭಾ ಭವನದಲ್ಲಿ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾರತಮಾತೆಯ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಮ್ಮ ಮನೆಯಲ್ಲಿ ನಾದ, ಭಜನೆ, ದೇವರ ಸ್ಮರಣೆ ಇದ್ದಲ್ಲಿ ಸನಾತನ ಸಂಸ್ಕೃತಿ ಇರುತ್ತದೆ, ಮಕ್ಕಳಿಗೆ ಪಠ್ಯದ ಜೊತೆಗೆ ಆಚಾರ - ವಿಚಾರಗಳನ್ನು ಕಲಿಸಿಕೊಡಬೇಕು, ಸನಾತನ ಹಿಂದೂ ಧರ್ಮದ ರಕ್ಷಣೆ ನಮ್ಮೆಲ್ಲರ ಜವಾಬ್ಧಾರಿಯಾಗಿದ್ದು, ಹಿಂದೂ ಸಮಾಜ ಭಾಂದವರು ಒಟ್ಟಾಗಿ ಕೆಲಸಮಾಡಿ ರಾಮ ರಾಜ್ಯ ನಿರ್ಮಾಣ ಮಾಡೋಣ ಎಂದು ಶುಭ ಹಾರೈಸಿದರು ಮತ್ತು ಸಾಮೂಹಿಕ ಶ್ರೀ ಕೃಷ್ಣ ಮಂತ್ರ ಭೋಧಿಸಿ ಪಠಣ ಮಾಡಿಸಿದರು.

ಶೋಭಾ ಯಾತ್ರೆಗೆ ಮೆರಗು ನೀಡಿದ ಭಾರತಮಾತೆಯ ಸ್ತಬ್ಧಚಿತ್ರ, ನಾಸಿಕ್ ಬ್ಯಾoಡ್, ಕಲಶ ಹಿಡಿದ ನೂರಾರು ಮಾತೆಯರು, ಮಹಿಳಾ ಚಂಡೆ ತಂಡ, ಕುಣಿತಾ ಭಜನಾ ತಂಡಗಳು, ಸಿಂಗಾರಿ ಮೇಳ, ಚೆಂಡೆ ವಾದನದೊಂದಿಗೆ ಬೈಕ್ ವಾಹನ ಜಾಥಾವೂ ನಡೆಯಿತು. ಶೋಭಾಯಾತ್ರೆಯು ಒಳಕಾಡು ಮುಖ್ಯರಸ್ತೆಯಾಗಿ ಸೌತ್ ಶಾಲೆ, ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ರಥ ಬೀದಿ, ವಿದ್ಯೋದಯ ಶಾಲೆಯಾಗಿ ಪಾರ್ಕಿಂಗ್ ಏರಿಯಾದ ಸೇರಿಗಾರ ಗದ್ದೆಯವರೆಗೆ ಬಂದು, ಅಲ್ಲಿ ಹಿಂದೂ ಸಂಗಮದ ಧಾರ್ಮಿಕ ಸಭೆ ನೆಡೆಯಿತು.

ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಚಿಂತಕರಾದ ಮೋಹನ ಕುಮಾರ್ ಕುಂಬೈಕರ್ ಧರ್ಮ ರಕ್ಷಣೆ ಕುರಿತು ಮಾತನಾಡಿದರು, ಅಧ್ಯಕ್ಷತೆಯನ್ನು ಯುವ ಉದ್ಯಮಿ ಅಜಿತ್ ಕುಡ್ವ ವಹಿಸಿದ್ದರು. ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ವಾರ್ಡಿನ ಸಮಿತಿಯ ಸದಸ್ಯರು ಉಪಸ್ಥರಿದ್ದರು. ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿದರು. ಶೈಲೇಶ್ ವಂದಿಸಿದರು.