ಹಿಂದೂ ಯುವಸೇನೆ ಪದವು ಶಾಖೆ, ಶ್ರೀ ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್‌ನಿಂದ ಕುಲಶೇಖರ ಪದವು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಶ್ರೀ ಶನೈಶ್ಚರ ಮಹಾಗಣಪತಿ, ದುರ್ಗಾದೇವಿ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಭಾನುವಾರ ಸಂಭ್ರಮದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಮಂಗಳೂರು: ಹಿಂದೂ ಯುವಸೇನೆ ಪದವು ಶಾಖೆ, ಶ್ರೀ ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್‌ನಿಂದ ಕುಲಶೇಖರ ಪದವು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಶ್ರೀ ಶನೈಶ್ಚರ ಮಹಾಗಣಪತಿ, ದುರ್ಗಾದೇವಿ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಭಾನುವಾರ ಸಂಭ್ರಮದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಬೆಳಗ್ಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೊಕ್ತೇಸರ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶನೀಶ್ವರ ಶಿಲಾಬಿಂಬಗಳು, ನಿತ್ಯೋಪಯೋಗಿ ಪೂಜಾ ಪರಿಕರಗಳು, ಬ್ರಹ್ಮಕಲಶಕ್ಕೆ ಬೇಕಾದ ಪರಿಕರಗಳು, ದಿನಸಿ ವಸ್ತುಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಿದವು. ನಾನಾ ದೇವಸ್ಥಾನ, ದೈವಸ್ಥಾನ, ಹಿಂದೂ ಯುವಸೇನೆಯ ವಿವಿಧ ಘಟಕಗಳು, ವಿವಿಧ ಸಂಘ-ಸಂಸ್ಥೆಗಳಿಂದ ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಣೆಗೊಂಡಿತು.

ಶರವು ದೇವಸ್ಥಾನದಿಂದ ವಾಹನದಲ್ಲಿ ಹೊರಟ ಮೆರವಣಿಗೆ, ಬಿಕರ್ನಕಟ್ಟೆ, ಕೈಕಂಬದ ಪಾಂಡುರಂಗ ಭಜನಾ ಮಂದಿರದಿಂದ ಭಕ್ತ ಸಮೂಹದಲ್ಲಿ ಪಾದಯಾತ್ರೆ ಮೂಲಕ ಸಾಗಿತು. ನೃತ್ಯ ಭಜನಾ, ಕೊಂಬು, ಚೆಂಡೆ ವಾದ್ಯ ತಂಡಗಳು ಮೆರವಣಿಗೆಗೆ ಶೋಭೆ ನೀಡಿತು.ಕ್ಷೇತ್ರದಲ್ಲಿ ನಿರ್ಮಾಣವಾದ ಛಾಯಾನಂದನ ಉಗ್ರಾಣದಲ್ಲಿ ವೇ.ಮೂ.ಎಂ.ಗಿರಿಧರ್‌ ಭಟ್‌ ಅವರು ಪೂಜೆ ನೆರವೇರಿಸಿದರು. ಬಳಿಕ ಹೊರೆಕಾಣಿಕೆ ಮೆರವಣಿಗೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಉಗ್ರಾಣದ ಮೇಲ್ವಿಚಾರಕ ವಿನಯಾನಂದ ಜೋಗಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ, ಗೌರವಾಧ್ಯಕ್ಷ ಉರ್ಮಿಳಾ ರಮೇಶ್‌ ಕುಮಾರ್‌, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ಚಂದ್ರ ಶೆಟ್ಟಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಗಿರಿಧರ್‌ ಶೆಟ್ಟಿ, ಶ್ರೀ ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷೆ ವಿಜಯ ಅರುಣ್‌, ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ನಿಕಟಪೂರ್ವ ಕಾರ್ಪೊರೇಟರ್‌ಗಳಾದ ಭಾಸ್ಕರ್‌ ಕೆ., ಕಿಶೋರ್‌ ಕೊಟ್ಟಾರಿ, ಶಕೀಲಾ ಕಾವ, ಪ್ರಮುಖರಾದ ಕಿರಣ್‌ ರೈ ಬಜಾಲ್‌, ಯಶೋಧರ ಚೌಟ, ವಿಕ್ರಮ್‌ ಚೌಟ, ವಿಠೋಭ ನಾಗುರಿ, ಪ್ರದೀಪ್‌ ಕುಮಾರ್‌ ಕಲ್ಕೂರಾ, ಜಗದೀಶ್‌ ಶೇಣವ, ರಕ್ಷಿತ್‌ ಕೊಟ್ಟಾರಿ, ಶರವು ಗಣೇಶ್‌ ಭಟ್‌, ಪ್ರವೀಣ್‌ ಕುಂಪಲ, ಬೇಬಿ ಕುಮಾರ್‌, ಸತೀಶ್‌ ಪೂಜಾರಿ, ದೇವಿಪ್ರಸಾದ್‌ ಮತ್ತಿತರರು ಇದ್ದರು.