ಕಾರಟಗಿ ಪಟ್ಟಣದ ಶ್ರೀ ವೀರಸಾರ್ವಕರ್ ಯುಥ್ಸ್ ಸೇವಾ ಟ್ರಸ್ಟ್ ಮತ್ತು ಹಿಂದೂ ಮಹಾ ಮಂಡಳ ಗಣೇಶೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾವೇಶದಲ್ಲಿ ವಿಜಯಪುರದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ದಿಕ್ಸೂಚಿ ಭಾಷಣ ಮಾಡಿದರು.
ಕಾರಟಗಿ: ಮುಂದಿನ ಚುನಾವಣೆಗಳಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಹಿಂದೂಗಳು ಯಾರೂ ಓಟು ಹಾಕಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕರೆನೀಡಿದರು.
ಪಟ್ಟಣದ ವೀರಸಾರ್ವಕರ್ ಯುಥ್ಸ್ ಸೇವಾ ಟ್ರಸ್ಟ್ ಮತ್ತು ಹಿಂದೂ ಮಹಾ ಮಂಡಳ ಗಣೇಶೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ನಮ್ಮ ಹಿಂದೂ ಧರ್ಮದಲ್ಲಿ ಹುಟ್ಟಿ ಮಠಕ್ಕೆ, ದೇವಸ್ಥಾನಕ್ಕೆ ಹೋಗಲ್ಲ, ಮುಸ್ಲಿಂ ಧರ್ಮ ಶ್ರೇಷ್ಠ ಎನ್ನುವ ರಾಯರೆಡ್ಡಿಗೆ ಹಿಂದೂಗಳು ಮುಂದಿನ ಚುನಾವಣೆಯಲ್ಲಿ ಓಟು ಹಾಕಬಾರದು ಎಂದು ನೇರವಾಗಿ ಹೇಳಿದರು.ವಂದೇಮಾತರಂ ಸಂಪೂರ್ಣ ಹಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಎಂದು ಈ ಜಿಲ್ಲೆಯ ಇನ್ನೊಬ್ಬ ಮಂತ್ರಿ ಶಿವರಾಜ ತಂಗಡಗಿ ಹೇಳಿದ್ದಾರೆ. ವಂದೇ ಮಾತರಂ ಹಾಡು ಹೇಳುವಂತೆ ಸಾಬರಿಗೆ ಹೇಳುವ ಧೈರ್ಯ ಈ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ಅವರಿಗೆ ಇದೆಯಾ? ಎಂದು ಯತ್ನಾಳ ಆಕ್ರೋಶದಿಂದ ಪ್ರಶ್ನಿಸಿದರು.ಹಿಂದೂಗಳು ಜಾಗ್ರತ: ರಾಜ್ಯದಲ್ಲಿ ಈಗ ಹಿಂದೂ ಧರ್ಮ ಜಾಗೃತಿಯಾಗುತ್ತಿದೆ, ಧರ್ಮ ವಿರೋಧಿಗಳು ನಾಶವಾಗುತ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಬುಲ್ಡೋಜರ್ ಸಂಸ್ಕೃತಿ ಜಾರಿಗೆ ತಂದು, ಪರವಾನಗಿ ಇಲ್ಲದೇ ಗಣೇಶ ಮೂರ್ತಿ ಸ್ಥಾಪಿಸುವ ನಿಯಮ ಜಾರಿ ಮಾಡಲಾಗುವುದು ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಯಾವುದೇ ದರ್ಗಾ, ಉರೂಸ್ಗಳಿಗೆ ಕಲ್ಲು ಬೀಳುವುದಿಲ್ಲ. ಆದರೆ, ನಮ್ಮ ಗಣೇಶ ಮೂರ್ತಿಗೆ, ದುರ್ಗಾದೇವಿ ಜಾತ್ರೆಗೆ ಕಲ್ಲು ಬೀಳುತ್ತವೆ. ಹಾಗಿದ್ದರೆ ನಾವು ಯಾವ ದೇಶದಲ್ಲಿ ಇದ್ದೇವೆ. ಮಸೀದಿ, ಮುಸ್ಲಿಮರ ಏರಿಯಾದಲ್ಲಿ ಮೆರವಣಿಗೆ ಮಾಡಬೇಡಿ ಎಂದು ಪೊಲೀಸರು ತಾಕೀತು ಮಾಡುತ್ತಾರೆ, ರಾಜ್ಯದಲ್ಲಿ ಇಂಥ ಪರಿಸ್ಥಿತಿ ಇದ್ದರೆ ನಾವು ಹಿಂದೂಗಳೆಲ್ಲ ಎಲ್ಲಿಗೆ ಹೋಗಬೇಕು ಎಂದು ಯತ್ನಾಳ ಪ್ರಶ್ನೆ ಮಾಡಿದರು.ನಮ್ಮ ಧರ್ಮದ ಆಚರಣೆಗೆ ಪರವಾನಗಿ ಪಡೆಯಬೇಕು, ಅವರು ಪ್ಯಾಲಿಸ್ತೀನ್ ಧ್ವಜ ಹಾರಿಸುತ್ತಾರೆ. ಅಲ್ಲಿದ್ದವರಿಗೆ ಇಲ್ಲಿನವರಿಗೆ ಏನೂ ಸಂಬಂಧ? ರಾಜ್ಯದಲ್ಲಿ ಶೇ. ೪೦ರಷ್ಟು ಅವರೇ ಆದರೆ, ಯಾವ ಸಿದ್ರಾಮಯ್ಯನೂ, ರಾಯರೆಡ್ಡಿಯನ್ನೂ ಅವರು ಕೇಳುವುದಿಲ್ಲ. ಸಿದ್ದರಾಮಯ್ಯ, ರಾಯರೆಡ್ಡಿ ಅಂಥವರನ್ನೆಲ್ಲ ಚುನಾವಣೆಯಲ್ಲಿ ಸೋಲಿಸಿ, ಬರೀ ಜಮೀರ್ ಅಹಮದ್ರಂಥವರನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ ಎಂದಿಗೂ ಅವರು ನಂಬಲು ಅನರ್ಹರು ಎಂದು ಬಸನಗೌಡ ಪಾಟೀಲ್ ಯತ್ನಾಳ ಎಚ್ಚರಿಸಿದರು.
ಪ್ರತಿ ಪಕ್ಷದವರೂ ಕೇವಲ ನಾಗೇಂದ್ರ ಜಪ ಮಾಡುತ್ತಿದ್ದಾರೆ. ನಾಗೇಂದ್ರ ಅವರ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತ, ಬಿಳಿ ಪಂಚೆ ತೊಟ್ಟು ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ನಾಟಕ ಮಾಡುತ್ತಿದ್ದಾರೆ. ಆಡಳಿತ ಪಕ್ಷದೊಂದಿಗೆ ಹೊಂದಾಣಿಗೆ ಮಾಡಿಕೊಂಡು ನಾಟಕ ಮಾಡ್ತಾ ಇದ್ದಾರೆ ಎಂದು ಬಿ.ವೈ. ವಿಜೇಂದ್ರರ ಹೆಸರನ್ನು ಹೇಳದೆ ಗೇಲಿ ಮಾಡಿದರು. ರಾಜ್ಯದ ಜನರಿಗೆ ನಾಟಕ ಈ ರಾಜಕಾರಣ ನೋಡಿ ಸಾಕಾಗಿದೆ. ರಾತ್ರಿ ಇವರೆಲ್ಲರೂ ಸೇರಿ ಬಿರ್ಯಾನಿ ತಿನ್ನುತ್ತಾರೆ ಎಂದರು.ಸಿಬಿಐಗೆ: ರಾಜ್ಯದ ಕೆಪಿಎಸ್ಸಿ ಹಗರಣದ ಕುರಿತು ಸಿಬಿಐ ತನಿಖೆಗೆ ಕೊಡಬೇಕೆಂದು ನಾನು ಹೈಕೋರ್ಟ್ಗೆ ಹೋಗಿರುವೆ. ಇಷ್ಟರಲ್ಲಿಯೇ ನ್ಯಾಯಾಲಯದ ಆದೇಶ ಬರುವ ನಿರೀಕ್ಷೆ ಇದೆ ಎಂದರು.
ಬೂದುಗುಂಪಾದ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ, ಮರಳುಸಿದ್ದಯ್ಯ ಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿ, ಮಾತನಾಡಿದರು.ಕಾರ್ಯಕ್ರಮದ ಸಂಘಟಕರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಸನ್ಮಾನಿಸಿದರು.