ವಸತಿ ನಿಲಯದಿಂದ ವಿದ್ಯಾರ್ಥಿಗಳನ್ನು ಹೊರಗಡೆ ಕಳಿಸುವಾಗ ಖುದ್ದಾಗಿ ಪಾಲಕರೇ ಬಂದು ಕರೆದುಕೊಂಡು ಹೋಗುವಂತ ವ್ಯವಸ್ಥೆಯಾಗಬೇಕು.

ಯಲಬುರ್ಗಾ: ಸತಿ ನಿಲಯಗಳ ಮೇಲ್ವಿಚಾರಕರು ವಿದ್ಯಾರ್ಥಿನಿಯರ ಆರೋಗ್ಯ ಕಾಳಜಿ ಜವಾಬ್ದಾರಿಯಿಂದ ನಿಭಾಯಿಸಬೇಕು. ಯಾವುದೇ ಘಟನೆ ಸಂಭವಿಸಿದರೆ ಮೇಲ್ವಿಚಾರಕರೆ ಹೊಣೆಯಾಗಬೇಕಾಗುತ್ತದೆ ಎಂದು ಜಿಪಂ ಉಪಕಾರ್ಯದರ್ಶಿ ಹಾಗೂ ತಾಪಂ ಆಡಳಿತಾಧಿಕಾರಿ ಟಿ.ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.

ವಸತಿ ನಿಲಯದಿಂದ ವಿದ್ಯಾರ್ಥಿಗಳನ್ನು ಹೊರಗಡೆ ಕಳಿಸುವಾಗ ಖುದ್ದಾಗಿ ಪಾಲಕರೇ ಬಂದು ಕರೆದುಕೊಂಡು ಹೋಗುವಂತ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿಗಳು ನಿಲಯಕ್ಕೆ ಪ್ರವೇಶ ಪಡೆಯುವಾಗ ಕುಟುಂಬದ ಜತೆ ಇರುವ ಫೋಟೋ ಪಡೆಯುವುದು ಕಡ್ಡಾಯಗೊಳಿಸಬೇಕು. ಸಕಾಲದಲ್ಲಿ ತಪ್ಪದೇ ಆರೋಗ್ಯ ತಪಾಸಣೆ ನಡೆಸಬೇಕು. ವಿದ್ಯಾರ್ಥಿಗಳ ಚಲನವಲನದ ಬಗ್ಗೆ ಗಮನ ಹರಿಸಬೇಕು. ಸಾಧ್ಯವಾದರೇ ಕನಿಷ್ಟ ಮೂರು ತಿಂಗಳಿಗೊಮ್ಮೆ ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿ ಪಾಲಕರ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು.

೨೦೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾಹರಣೆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಸಕಾಲದಲ್ಲಿ ವಿಷಯ ಪೂರ್ಣಗೊಳಿಸಬೇಕು. ಪ್ರತಿ ವಿಷಯಕ್ಕೆ ಪೂರಕವಾಗಿ ಕಿರು ಪರೀಕ್ಷೆ ನಡೆಸುವ ಮೂಲಕ ಫಲಿತಾಂಶದ ಸುಧಾರಣೆಗೆ ಕ್ರಮ ವಹಿಸಬೇಕು. ಜಿಲ್ಲೆ ಟಾಪ್‌ ಟೆನ್ ಲಿಸ್ಟ್‌ನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.

ಕುಕನೂರು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಮಾತನಾಡಿ, ಬೀದಿ ನಾಯಿಗಳ ಉಪಟಳ ತಪ್ಪಿಸಲು ಸಾರ್ವಜನಿಕ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕಚೇರಿ ಒಳಗಡೆ ನಾಯಿಗಳು ಪ್ರವೇಶಿಸದಂತೆ ರಕ್ಷಣೆಗೆ ಸೂಕ್ತ ಕಾಂಪೌಂಡ್ ನಿರ್ಮಿಸಿಕೊಳ್ಳಬೇಕು. ಇಲಾಖೆಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಬಳಸದೇ ಉಳಿದ ಆಹಾರ ಬೇಕಾ ಬಿಟ್ಟಿಯಾಗಿ ಬಿಸಾಡದೆ, ನಿರ್ದಿಷ್ಟ ತೊಟ್ಟಿಯಲ್ಲೇ ವಿಲೇವಾರಿ ಮಾಡಬೇಕು. ಹೀಗೆ ಮಾಡಿದಲ್ಲಿ ನಾಯಿ ಕಡಿತ ಪ್ರಕರಣ ಗಣನೀಯವಾಗಿ ತಗ್ಗಿಸಬಹುದು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ೧೫೦೦ಕ್ಕೂ ಹೆಚ್ಚು ಬೀದಿನಾಯಿಗಳು ಇರುವುದು ಕಂಡು ಬಂದಿದೆ. ಮುಂಬರುವ ದಿನಗಳಲ್ಲಿ ಯಾರಿಗಾದರೂ ಬೀದಿನಾಯಿಗಳು ಕಚ್ಚಿದ ಬಗ್ಗೆ ವರದಿಯಾದರೆ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧವೇ ಅಪರಾಧ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ಕೋರ್ಟ್ ತನ್ನ ಆದೇಶದಲ್ಲಿ ಪ್ರಸ್ತಾಪಿಸಿದೆ ಎಂದರು.

ನಾನಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಪ್ರಗತಿ ವರದಿ ಮಂಡಿಸಿದರು.ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ತಾಪಂ ಇಒ ನೀಲಗಂಗಾ ಬಬಲಾದ, ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್,ಫಕೀರಪ್ಪ ಕಟ್ಟಿಮನಿ, ಉಪ ತಹಸೀಲ್ದಾರ ಮುರಳಿಧರರಾವ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.