ಸಾರಾಂಶ
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು ಪಟ್ಟಣದಲ್ಲಿ ಶೀಘ್ರದಲ್ಲೇ ಮಹಿಳೆಯರ ಗ್ರಾಮಸಭೆ ನಡೆಸಿ ಅವರ ಕುಂದುಕೊರತೆ ಆಲಿಸಿ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಉದ್ಘಾಟಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕುಗಳು ಇದ್ದು, ಉದ್ಯೋಗ, ಶಿಕ್ಷಣ, ಅಧಿಕಾರ ಎಲ್ಲವೂ ಸಮಾನವಾಗಿ ದೊರಕಬೇಕಿದೆ. ಆದರೆ ಇಂದು ಮಾಹಿತಿಗಳ ಕೊರತೆಯಿಂದ ಮಹಿಳೆಯರಿಗೆ ಸರ್ಕಾರದ ಹಲವು ಸವಲತ್ತು ಸಮರ್ಪಕವಾಗಿ ತಲುಪುತ್ತಿಲ್ಲ. ಅಧಿಕಾರಿ ಗಳು ಕೂಡ ತಮಗೆ ಇರುವ ಕರ್ತವ್ಯ ಮರೆತಿದ್ದು, ಸರ್ಕಾರದಿಂದ ಯಾವ ಸವಲತ್ತು ದೊರೆಯುತ್ತವೇ ಎಂದು ತಿಳಿದಿಲ್ಲ.ಮಹಿಳೆಯರಿಗೆ ಸಮಸ್ಯೆಗಳಾದಲ್ಲಿ ಗ್ರಾಮಮಟ್ಟದಲ್ಲಿ ಸಮಸ್ಯೆ ಆಲಿಸಲು ಕಾವಲು ಸಮಿತಿಯನ್ನು ಪ್ರತೀ ಗ್ರಾಪಂಗಳಲ್ಲಿ ರಚನೆ ಮಾಡಬೇಕಿದೆ. ಆದರೆ ಹಲವು ಕಡೆಗಳಲ್ಲಿ ಅದು ಆಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ೧೦೦ ದಿನದ ಉದ್ಯೋಗವನ್ನು ಕಾರ್ಡ್ ಹೊಂದಿರುವವರಿಗೆ ಕಡ್ಡಾಯವಾಗಿ ನೀಡಬೇಕಿದೆ. ಆದರೆ ಇದು ಆಗುತ್ತಿಲ್ಲ. ಸರ್ಕಾರದ ಹಲವು ವೇತನಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದರು.
ಇಂತಹ ಹಲವಾರು ಸಮಸ್ಯೆಗಳು ವಿವಿಧೆಡೆ ಇದೆ. ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನಲ್ಲಿ ಶೀಘ್ರದಲ್ಲಿ ತಹಸೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ , ಗ್ರಾಪಂ, ಪೊಲೀಸ್ , ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆಗಳ ಪರಿಶೀಲಿಸಿ ಕೂಡಲೇ ಆಯೋಗಕ್ಕೆ ವರದಿ ನೀಡಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.ಇಂದು ಧರ್ಮ, ಧರ್ಮಗಳ ಮಧ್ಯೆ ಬೆಂಕಿ ಹಚ್ಚಿ ಓಟಿನ ರಾಜಕಾರಣವನ್ನು ಹಲವರು ಮಾಡುತ್ತಾರೆ. ಆದರೆ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಬದುಕುವ ಹಕ್ಕು ನೀಡಿದ್ದಾರೆ. ಅಂಬೇಡ್ಕರ್ ಅವರ ಪ್ರಕಾರ ಸಮಾಜ ಆಳಲು ರಾಜನ ಕುಟುಂಬದಿಂದ ರಾಜಕುಮಾರ ಬರಬಾರದು. ಮತಪೆಟ್ಟಿಗೆಗಳ ಮೂಲಕ ಪ್ರತಿಯೊಬ್ಬ ಪ್ರಜೆಯೂ ಸಮಾಜ ಆಳುವ ಕೆಲಸ ಮಾಡಬೇಕಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಶಾಸನಕ ಮಕ್ಕಳೇ ಶಾಸಕರು, ಮಂತ್ರಿಯ ಮಕ್ಕಳೇ ಮಂತ್ರಿಗಳಾಗುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಲ್ಲಬಾರದು. ನಮ್ಮ ತಿಳುವಳಿಕೆ, ಜ್ಞಾನದ ಮೂಲಕ ಅಂಬೇಡ್ಕರ್ ಅವರನ್ನು ಬದುಕಿಸಬೇಕು. ಇಲ್ಲದಿದ್ದರೆ ಅವರು ಸತ್ತಂತೆ ಆಗಲಿದೆ ಎಂದು ಹೇಳಿದರು.ಶಿಕ್ಷಣ, ಸಂಘಟನೆ, ಹೋರಾಟ ಇಂದು ಅಗತ್ಯವಾಗಿದ್ದು, ಶಿಕ್ಷಣವಿದ್ದರೆ ತಿಳುವಳಿಕೆ, ಸಂಘಟನೆಯಿದ್ದರೆ ಹೋರಾಟ ನಡೆಯಲಿದೆ ಎಂದರು.
ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ಕುಮಾರ್ ಮುರೊಳ್ಳಿ ಮಾತನಾಡಿ, ಭಾರತಕ್ಕೆ ಆಧುನಿಕ ಮನುವಾಗಿ ಹುಟ್ಟಿ ಬಂದ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಅವರ ಸಂವಿಧಾನದ ಪ್ರತಿಫಲವಾಗಿ ಇಂದು ದ್ರೌಪದಿ ಮುರ್ಮು ಅವರಂತಹ ಮಹಿಳೆ ರಾಷ್ಟ್ರಪತಿಯಾಗಲು ಸಾಧ್ಯವಾಯಿತು. ಪೂಜನೀಯ ಸ್ಥಾನದಲ್ಲಿದ್ದ ಹೆಣ್ಣಿನಿಂದ ಪೂಜೆ ಮಾಡಿಸಿದ್ದು ಅಂಬೇಡ್ಕರ್ ಅವರ ಸಂವಿಧಾನವಾಗಿದೆ. ಇಂದು ಸಮಾಜದಲ್ಲಿ ಮೀಸಲಾತಿ, ಸಂವಿಧಾನ ವಿರೋಧಿಗಳು ಇರಬಹುದು. ಆದರೆ ಎಲ್ಲರಿಗೂ ಸಮಾನ ಹಕ್ಕು ನೀಡಿದ್ದು ಅಂಬೇಡ್ಕರ್. ಅವರ ಕುರಿತು ಚರ್ಚೆಗಳು ನಡೆಯಬೇಕಿದೆ. ಇಂದಿನ ದಿನದಲ್ಲಿ ಕೆಲವು ಮನುವಾದಿ ಗಳು ಅಂಬೇಡ್ಕರ್ ಅವರನ್ನು ಹೆಚ್ಚಾಗಿ ಅಪ್ಪಿಕೊಳ್ಳಲು ಹೊರಟಿದ್ದು, ಇಂತಹವರಿಂದ ಸಂವಿಧಾನ ಬದಲಿಸುವ ಕೆಲಸ ವಾಗಬಹುದು ಎಂಬ ಆತಂಕವಿದೆ ಎಂದರು.ಭೀಮ್ ಆರ್ಮಿ ಅಧ್ಯಕ್ಷ ಎನ್.ಉಮೇಶ್, ತಹಸೀಲ್ದಾರ್ ತನುಜಾ ಸವದತ್ತಿ, ಪ್ರಮುಖರಾದ ಪವಿತ್ರ, ಗಿರೀಶ್, ಎಂ.ಎಸ್. ಅರುಣೇಶ್, ಹೊನ್ನೇಶ್, ಅಂಬುಜಾ, ಕೃಷ್ಣ, ರಾಘವೇಂದ್ರ, ಮಹಮ್ಮದ್ ಹನೀಫ್, ಇಬ್ರಾಹಿಂ ಶಾಫಿ, ಶ್ರೀಕಾಂತ್, ರಂಜಿತಾ ಶಿವಕುಮಾರ್, ಜಾನಕಿ ಸುರೇಶ್, ಲಲಿತಮ್ಮ ಮತ್ತಿತರರು ಹಾಜರಿದ್ದರು.
--೧೫ಬಿಹೆಚ್ಆರ್ ೨: ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಆಯೋಜಿ ಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಾತನಾಡಿದರು.೧೫ಬಿಹೆಚ್ಆರ್ ೩:ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.