ನಾಡಿನ ಒಳಿತಿಗಾಗಿ ಹೋಮಹವನ ಆಯೋಜನೆ

| Published : Nov 30 2024, 12:47 AM IST

ಸಾರಾಂಶ

ನಾಡಿಗೆ ಒಳ್ಳೆಯದಾಗಲಿ, ಕಲ್ಯಾಣವಾಗಲಿ, ಎಲ್ಲಾ ಜನರ ರೋಗ ರುಜಿನಗಳು ದೂರವಾಗಿ ಮನುಷ್ಯರಿಗೆ ಸಕಲ ಕಾರ್ಯ ಸಿದ್ಧಿಸಲಿ, ಮಳೆ ಬೆಳೆ ಚೆನ್ನಾಗಿ ಬಂದು ರೈತರು ಸಂತಸ ಪಡಲಿ... ಹೀಗೆ ಹತ್ತು ಹಲವು ಉದ್ದೇಶಗಳಿಂದ ಹೋಮ ಹವನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ನಾಡಿಗೆ ಒಳ್ಳೆಯದಾಗಲಿ, ಕಲ್ಯಾಣವಾಗಲಿ, ಎಲ್ಲಾ ಜನರ ರೋಗ ರುಜಿನಗಳು ದೂರವಾಗಿ ಮನುಷ್ಯರಿಗೆ ಸಕಲ ಕಾರ್ಯ ಸಿದ್ಧಿಸಲಿ, ಮಳೆ ಬೆಳೆ ಚೆನ್ನಾಗಿ ಬಂದು ರೈತರು ಸಂತಸ ಪಡಲಿ... ಹೀಗೆ ಹತ್ತು ಹಲವು ಉದ್ದೇಶಗಳಿಂದ ಹೋಮ ಹವನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಮಧುರೆ ಸಮೀಪದ ಬ್ರಹ್ಮವಿದ್ಯಾನಗರದಲ್ಲಿನ ಭಗೀರಥ ಗುರುಪೀಠದಲ್ಲಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರ ಜನ್ಮ ದಿನೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ಪೀಠ ಅಲಂಕರಿಸಿದ ನಂತರ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಉಪ್ಪಾರ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ವಿಶ್ವಮಾನವರೆನಿಸಿದ್ದಾರೆ ಎಂದರು.

ಹರಿಹರದ ವಚನಾನಂದ ಸ್ವಾಮೀಜಿ ಮಾತನಾಡಿ, ಭಗೀರಥ ಪೀಠದ ಗುರುಗಳು ಜನ್ಮದಿನದ ಸಂದರ್ಭದಲ್ಲಿ ಮಡಿಲಕ್ಕಿ ನೀಡುತ್ತಿರುವುದು ಸಂತ‌ಸ ತಂದಿದೆ. ಭಗೀರಥ ಮಹರ್ಷಿಗಳು ಗಂಗೆಯನ್ನು ಭೂಮಿಗೆ ಹರಿಸಿದರು‌. ಒಬ್ಬ ಹೆಣ್ಣು ಒಂದು ನದಿಗೆ ಸಮಾನ. ಹಾಗಾಗಿ ಸಾವಿರಾರು ಮಹಿಳೆಯರಿಗೆ ಶ್ರೀಗಳು ಬಾಗಿನ ವಿತರಿಸುತ್ತಿದ್ದಾರೆ ಸಂನ್ಯಾಸಿಗಳ ಬದುಕು ದೀಪದಂತೆ ತಾನು ಉರಿದು ಸಮಾಜಕ್ಕೆ ಬೆಳಕು ನೀಡುತ್ತಿದೆ ಎಂದು ಹೇಳಿದರು.

ಈ ವೇಳೆ ಕನಕಧಾಮದ ಈಶ್ವರಾನಂದಪುರಿ ಶ್ರೀ, ಗದ್ದುಗೇಶ್ವರ ಶ್ರೀ, ಹನುಮಂತನಾಥ ಶ್ರೀ, ಶಿವಲಿಂಗಾನಂದ ಶ್ರೀ, ಕೃಷ್ಣಯಾದವಾನಂದ ಶ್ರೀ, ಜ್ಞಾನಾನಂದಪುರಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು, ಸಮಾಜದ ಮುಖಂಡರಿದ್ದರು.