ಸಾರಾಂಶ
ಹುಬ್ಬಳ್ಳಿ:
ಇಂದಿನ ದಿನಗಳಲ್ಲಿ ಸಹಕಾರ ಸಂಘಗಳ ಅವಶ್ಯಕತೆ ಹೆಚ್ಚಿದೆ. ಸಹಕಾರ ಸಂಘಗಳ ಕಾರ್ಯ ಯಶಸ್ವಿಯಾಗಲು ಪ್ರಾಮಾಣಿಕತೆ ಅವಶ್ಯವಾದದ್ದು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮದ ನಿರ್ದೇಶಕ ಬಸವರಾಜ ಅರಬಗೊಂಡ ಹೇಳಿದರು.ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಬೆಳಗಾವಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಹಕಾರ ಸಂಘದ ಪದಾಧಿಕಾರಿಗಳ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ವ್ಯವಸ್ಥೆ ನಿಯಂತ್ರಿಸುವ ಸಲುವಾಗಿ ಸಹಕಾರಿ ಸಂಘಗಳು ಅವಶ್ಯವಾಗಿವೆ. ಎಲ್ಲ ರಾಜ್ಯಗಳಲ್ಲಿ ಒಂದು ದೊಡ್ಡ ಪ್ರಮಾಣದಲ್ಲಿ ಸಹಕಾರ ಸಂಘಗಳು ಯಶಸ್ವಿಯಾಗಿ ಹೊರಹೊಮ್ಮಿವೆ. ಸಹಕಾರ ಸಂಘಗಳ ಕಾರ್ಯ ಯಶಸ್ವಿಯಾಗಲು ಪ್ರಾಮಾಣಿಕತೆ ಜತೆಗೆ ಕಠಿಣ ಪರಿಶ್ರಮ, ಅಧಿಕಾರಿಗಳಲ್ಲಿನ ವಿಶ್ವಾಸ, ಪರಸ್ಪರ ಗೌರವ ಪ್ರಮುಖವಾದದ್ದಾಗಿದೆ. ಕಡಿಮೆ ಬಡ್ಡಿಯಲ್ಲಿ ಹಣ ಸಂಗ್ರಹಿಸಿ ಮತ್ತು ಕಡಿಮೆ ಬಡ್ಡಿಯಲ್ಲಿ ಸಾಲ ಕೊಟ್ಟಾಗ ಮಾತ್ರ ಸಹಕಾರ ಸಂಘಗಳು ಉಳಿಯುತ್ತವೆ. ಸೇವೆಯೇ ಪ್ರಥಮ ಗುರಿಯಾಗಿರಬೇಕು ಎಂದರು.ನಿರ್ದೇಶಕ ಜಿ.ಪಿ. ಪಾಟೀಲ್ ಮಾತನಾಡಿ, ತರಬೇತಿ ಎನ್ನುವುದು ನಿಂತ ನೀರಲ್ಲ. ಅದು ಹರಿಯುವ ನೀರಿನಂತೆ ಸಾಗಬೇಕು. ಸಹಕಾರ ಕ್ಷೇತ್ರ ವಿಶ್ವಾಸಕ್ಕೆ ಹೆಸರಾಗಿದೆ. ಸಂಘ-ಸಂಸ್ಥೆಗಳನ್ನು ಮುಖ್ಯವಾಹಿನಿಗೆ ತರಲು ಸಹಾಯಕವಾಗಿದೆ. ಹಾಗೆಯೇ ಈ ತರಬೇತಿಯನ್ನು ಕೇವಲ ಕೇಳಿದರೆ ಸಾಲದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮತ್ತೊಬ್ಬ ನಿರ್ದೇಶಕ ಬಾಪುಗೌಡ ಡಿ. ಪಾಟೀಲ್ ಮಾತನಾಡಿದರು. ಈ ವೇಳೆ ಮಹರ್ಷಿ ವಾಲ್ಮೀಕಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಹಕಾರ ಸಂಘಗಳ ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ, ಸಹಾಯಕ ಯೋಜನಾಧಿಕಾರಿ ಆನಂದ ತಳವಾರ, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಪ್ರಾಚಾರ್ಯ ಡಿ.ಆರ್. ವೆಂಕಟರಾಮ, ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.