ಅಕ್ರಮ ವಿದ್ಯುತ್ ಬಳಕೆಗೆ ವಿಧಿಸಲಾಗಿದ್ದ ದಂಡ ಮೊತ್ತ ಕಡಿಮೆ ಮಾಡಲು ಇತ್ತೀಚೆಗೆ 15 ಲಕ್ಷ ರು. ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಬೆಸ್ಕಾಂ ಜಾಗೃತ ದಳದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ(ಎಇಇ) ಬಿ.ಎಸ್.ಬಸವರಾಜಯ್ಯ ಅವರಿಗೆ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್) ಪಕ್ಷದ ಕಾರ್ಯಕರ್ತರು ವಿನೂತನವಾಗಿ ಅವಮಾನದ ಸನ್ಮಾನ ಮಾಡಿ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮ ವಿದ್ಯುತ್ ಬಳಕೆಗೆ ವಿಧಿಸಲಾಗಿದ್ದ ದಂಡ ಮೊತ್ತ ಕಡಿಮೆ ಮಾಡಲು ಇತ್ತೀಚೆಗೆ 15 ಲಕ್ಷ ರು. ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಬೆಸ್ಕಾಂ ಜಾಗೃತ ದಳದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ(ಎಇಇ) ಬಿ.ಎಸ್.ಬಸವರಾಜಯ್ಯ ಅವರಿಗೆ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್) ಪಕ್ಷದ ಕಾರ್ಯಕರ್ತರು ವಿನೂತನವಾಗಿ ಅವಮಾನದ ಸನ್ಮಾನ ಮಾಡಿ ಗಮನ ಸೆಳೆದರು.ಸೋಮವಾರ ರಾಜಾಜಿನಗರದ ಬೆಸ್ಕಾಂ ಕಚೇರಿಗೆ ತೆರಳಿದ ಕೆಆರ್ಎಸ್ ಪಕ್ಷದ ಕಾರ್ಯಕರ್ತರು, ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುವಾಗ ಎಇಇ ಬಸವರಾಜಯ್ಯ ಕುಳಿತ್ತಿದ್ದ ಕುರ್ಚಿ ಮೇಲೆಯೇ ಅವರ ಭಾವಚಿತ್ರ ಇರಿಸಿ, ಶಾಲು ಹೊದಿಸಿ, ಹಾರ ಹಾಕಿ, ಪೇಟ ತೊಡಿಸಿ ಸನ್ಮಾನಿಸುವ ಮುಖಾಂತರ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜಾಗೃತಿ ಮೂಡಿಸಿ ವಿದ್ಯುತ್ ಕಳ್ಳತನ ಮತ್ತು ಅಕ್ರಮ ಬಳಕೆಯನ್ನು ತಡೆಯಬೇಕಾದ ಜಾಗೃತ ದಳದ ಅಧಿಕಾರಿಯೇ ಇಂತಹ ಬೃಹತ್ ಮೊತ್ತದ ಲಂಚ ಸ್ವೀಕರಿಸಿರುವುದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಬಸವರಾಜಯ್ಯ ಅವರ ಅಧಿಕಾರಾವಧಿಯ ಆಸ್ತಿ, ಆದಾಯ ಹಾಗೂ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಕೆಆರ್ಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್, ಬೆಂಗಳೂರು ಪಶ್ಚಿಮ ಜಿಲ್ಲಾ ಅಧ್ಯಕ್ಷ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣಯ್ಯ, ವೆಂಕಟೇಶ್, ವಾಸುದೇವನ್, ಸುನಿತಾ, ಮೇರಿ ಉಪಸ್ಥಿತರಿದ್ದರು.