ಸಾರಾಂಶ
ನ್ಯಾಯ ಒದಗಿಸಿ ಎಂದು ಕೆಎಸ್ಆರ್ಟಿಸಿ ಸಿಬ್ಬಂದಿ ಮನವಿಕನ್ನಡಪ್ರಭ ವಾರ್ತೆ ಹೊಸದುರ್ಗ ಬಿಎಂಟಿಸಿ ಸಿಬ್ಬಂದಿಗೆ ನಿರ್ದಿಷ್ಟ ಮಾರ್ಗ ನೀಡಲು, ಉತ್ತಮ ಗುಣಮಟ್ಟದ ಬಸ್ಸುಗಳನ್ನು ಒದಗಿಸಲು ಹಾಗೂ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ 7 ಜನರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತು ಮಾಡಿದ ಬೆನ್ನಲ್ಲೇ, ಇಂಥದ್ದೊಂದು ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಹೊಸದುರ್ಗ ಕೆಎಸ್ಆರ್ಟಿಸಿ ಡಿಪೋದಲ್ಲಿ ಲಂಚಾವತಾರದ ಸದ್ದು ಕೇಳಿ ಬಂದಿದೆ.
ಇಲ್ಲಿನ ಕೆ.ಎಸ್.ಆರ್.ಟಿ.ಸಿ ಡಿಪೋ ಅಧಿಕಾರಿಯೊಬ್ಬ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಸಿಬ್ಬಂದಿಯಿಂದ ಲಂಚ ಪಡೆಯುತ್ತಿರುವುದಾಗಿ ಮತ್ತು ಅವರ ಕಿರುಕುಳಕ್ಕೆ ಬೇಸತ್ತು ನಮಗೆ ನ್ಯಾಯ ಒದಗಿಸಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ಸಂದೇಶವೊಂದು ವಾಟ್ಪ್ಸಾ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.ಪ್ರತಿ ತಿಂಗಳು ಮಾಮೂಲಿ ಕೊಡಬೇಕು. ಇಲ್ಲದಿದ್ದರೆ ಕಿರುಕುಳ ನೀಡುತ್ತಾರೆ. ಸುಮಾರು 300 ರಿಂದ 500 ರು. ವರೆಗೂ ಲಂಚ ಕೇಳುತ್ತಾರೆ. ನಾವು ಗೈರಾಗದೇ ಕೆಲಸಕ್ಕೆ ಹಾಜರಾದರೂ ಬಲವಂತದಿಂದ ನಮ್ಮಿಂದ ಹಣ ಕೇಳುತ್ತಾರೆ. ಹಣ ಕೊಡದಿದ್ದರೆ ಮಾರ್ಗ ನೀಡದೆ ಬೆಳಗ್ಗೆಯಿಂದ ಸಂಜೆಯವರೆಗೂ ಡಿಪೋದಲ್ಲೇ ಕೂರಿಸಿಕೊಳ್ಳುತ್ತಾರೆ. ಸತಾಯಿಸಿದ ನಂತರ ಹಾಜರಾತಿ ಪುಸ್ತಕದಲ್ಲಿ ರಜೆ ಹಾಕುತ್ತಾರೆ. ಈ ಬಗ್ಗೆ ಅವರ ಬಳಿ ನ್ಯಾಯ ಕೇಳಿದರೆ, ನಾನು ಸ್ಥಳೀಯ ನಿವಾಸಿ, ನನ್ನನ್ನು ಯಾರೂ ಏನೂ ಮಾಡಲಾರರು. ಸಾಕ್ಷಿಗಳನ್ನು ಇಟ್ಟುಕೊಂಡು ದೂರು ಕೊಟ್ಟರೂ ನನ್ನ ಮೇಲೆ ಯಾವ ಮೇಲಧಿಕಾರಿ ಏನೂ ಮಾಡಲಾಗದು. ಏಕೆಂದರೆ ನಾನು ಅವರಿಗೆಲ್ಲಾ ಮಾಮೂಲಿ ಕೊಡುತ್ತೇನೆ ಎಂದು ಧಮ್ಕಿ ಹಾಕುವ ಮೂಲಕ ನ್ಯಾಯ ಕೇಳಿದವರಿಗೆ ಹೆದರಿಸುತ್ತಾರೆ ಎಂದು ಕೆಲವು ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ. ಅನೇಕ ಚಾಲಕರು ಮತ್ತು ಕಂಡಕ್ಟರ್ ಗಳಿಂದ ಲಂಚದ ಹಣ ವರ್ಗಾವಣೆಯಾಗಿದ್ದು, ಎಲ್ಲಾ ಫೋನ್-ಪೇ ಸಾಕ್ಷಿಗಳ ಸ್ಕ್ರೀನ್ ಶಾಟ್ ದಾಖಲಾತಿಗಳು ದೊರತಿವೆ. ಹಾಗಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಇನ್ನೂ ಅನೇಕ ಡಿಪೋ ಡ್ರೈವರ್ ಮತ್ತು ಕಂಡಕ್ಟರ್ ಗಳ ಫೋನ್ ಪೇ ಗಳನ್ನು ಸಂಪೂರ್ಣವಾಗಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಅಧಿಕಾರಿ ವಿರುದ್ಧ ಹಲವಾರು ದೂರುಗಳಿವೆ. ಆದರೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೆಂಗಳೂರಿನ ಕೇಂದ್ರ ಕಚೇರಿಯ ಮೇಲಧಿಕಾರಿಗಳು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ. ---------------------
ಸಿಬ್ಬಂದಿಯಿಂದ ಹಣ ಕೇಳುತ್ತಿರುವ ಬಗ್ಗೆ ನಮಗೂ ಮಾಹಿತಿ ಬಂದಿದ್ದು, ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ನಮ್ಮ ಸೆಕ್ಯೂರಿಟಿ ಆಫೀಸರ್ನ್ನು ಹೊಸದುರ್ಗ ಡಿಪೋಗೆ ಕಳಿಸಿದ್ದೇವೆ. ಅವರ ವರದಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು.- ಸಿದ್ದೇಶ್ ಹೆಬ್ಬಾಳ್ಕರ್, ಚಿತ್ರದುರ್ಗ ವಿಭಾಗದ ಡಿಸಿ