ಕನಕಗಿರಿ: ಕಳೆದ ಮೂರು ದಿನಗಳಿಂದ ಮಧ್ಯಾಹ್ನದ ಬಿಸಿಯೂಟ ಬಂದ್ ಆಗಿದ್ದ ಪಟ್ಟಣದ ಶಿವಯೋಗಿ ಚನ್ನಮಲ್ಲ ಹಾಗೂ ರುದ್ರಸ್ವಾಮಿ ಪ್ರೌಢ ಶಾಲೆಗೆ ಆಹಾರ ಧಾನ್ಯ ಸರಬರಾಜು ಆಗಿದ್ದು, ಗುರುವಾರ (ಜು.30) ರಿಂದ ಮತ್ತೆ ಮಧ್ಯಾಹ್ನ ಬಿಸಿಯೂಟ ಆರಂಭವಾದ ಹಿನ್ನೆಲೆ ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಬಿಸಿಯೂಟ ಸ್ಥಗಿತವಾಗಿರುವ ಕುರಿತು ಜು. ೩೦ರಂದು ಶಿವಯೋಗಿ ಚನ್ನಮಲ್ಲ, ರುದ್ರಸ್ವಾಮಿ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಬಂದ್ ಎನ್ನುವ ಶಿರ್ಷಿಕೆಯಡಿ ಕನ್ನಡಪ್ರಭ ವಿಸ್ತೃತ ವರದಿ ಪ್ರಕಟವಾದ ಬೆನ್ನಲ್ಲೆ ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರೋಷಣ್ಣ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. ಶಾಲಾ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಡುಗೆ ಮಾಡುವ ಸ್ಥಳ ವೀಕ್ಷಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಡುಗೆ ಸಹಾಯಕಿಯರಿಗೆ ಸೂಚಿಸಿದರು.

ಸದರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಎರಡು ವಿಭಾಗದಲ್ಲಿ ಸುಮಾರು ೭೦೦ವಿದ್ಯಾರ್ಥಿಗಳು ಓದುತ್ತಿದ್ದು, ದಿನಕ್ಕೆ ೭೫ ಕೆಜಿ ಅಕ್ಕಿ ಅಗತ್ಯವಿದೆ. ಸದ್ಯ ೩೨.೫೦ ಕ್ವಿಂಟಲ್ ಅಕ್ಕಿ, ೪.೫೦ ಕ್ವಿಂಟಲ್ ಬೇಳೆ, ೧೨೩ ಕೆಜಿ ಕೆನೆ ಭರಿತ ಹಾಲಿನಪುಡಿ, ೩.೫೦ ಕ್ವಿಂಟಲ್ ಗೋಧಿ, ೮೦ ಕೆಜಿ ಎಣ್ಣೆ ಸರಬರಾಜು ಮಾಡಲಾಗಿದ್ದು, ಪಡಿತರ ಕಡಿಮೆಯಾಗುವ ಮೊದಲೇ ನಮಗೆ ಬೇಡಿಕೆಯ ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಆಹಾರ ಧಾನ್ಯವಿದ್ದು, ಎಲ್ಲಿ ಅಗತ್ಯವಾಗಿ ರೇಷನ್ ಬೇಕು ಎನ್ನುವುದನ್ನು ಮಾಹಿತಿ ಪಡೆದು ಶಾಲೆಗೆ ಕಳುಹಿಸಲಾಗುತ್ತಿದೆ. ಮತ್ತೊಮ್ಮೆ ಇಂತಹ ತಪ್ಪು ಆಗದಂತೆ ಜಾಗೃತಿ ವಹಿಸಬೇಕೆಂದು ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಕನ್ನಡಪ್ರಭಕ್ಕೆ ಧನ್ಯವಾದ ಅರ್ಪಿಸಿದ ಪಾಲಕರು : ಶಾಲೆಯ ಏಳುನೂರು ಮಕ್ಕಳು ಮಧ್ಯಾಹ್ನದ ಬಿಸಿಯೂಟದಿಂದ ಕಳೆದ ಮೂರು ದಿನಗಳಿಂದ ವಂಚಿತವಾದ ಸುದ್ದಿ ಕನ್ನಡಪ್ರಭ ಸುದ್ದಿ ಪ್ರಕಟಿಸಿದ ಹಿನ್ನೆಲೆ ಪಾಲಕರು ಧನ್ಯವಾದ ಅರ್ಪಿಸಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮರುದಿನವೇ ಬಿಸಿಯೂಟ ಆರಂಭಿಸಿದ್ದಾರೆ. ಪತ್ರಿಕೆಯಲ್ಲಿ ವರದಿ ಬರದಿದ್ದರೆ ಮಧ್ಯಾಹ್ನ ಬಿಸಿಯೂಟ ಇನ್ನೂ ತಡವಾಗುತ್ತಿತ್ತು. ಕನ್ನಡಪ್ರಭ ಸುದ್ದಿಯಿಂದ ಮಕ್ಕಳಿಗೆ ಮರುದಿನವೇ ಬಿಸಿಯೂಟ ದೊರೆತಂತಾಗಿದೆ ಎಂದು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.