ಶೈಕ್ಷಣಿಕ, ಕೈಗಾರಿಕೆ, ಕ್ರೀಡಾಕೂಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೋಟೆಲ್ ಒಡೆಯರ ಸಂಘ ದೊಡ್ಡ ಕೊಡುಗೆ ನೀಡಿದೆ. ಆದರೆ, ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿ ಮೇಲೆ ಹೋಟೆಲ್‌ಗಳು ಬಹುದೊಡ್ಡ ಅನ್ಯಾಯ ಮಾಡುತ್ತಿವೆ.

ಗದಗ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಜಿಲ್ಲೆಯ ಹೋಟೆಲ್‌ಗಳ ಕೊಡುಗೆ ಅಪಾರವಾಗಿದೆ. ಜತೆಗೆ ಹೋಟೆಲ್‌ನಲ್ಲಿ ಕೆಲಸ ಮಾಡುವವರು ಬಹುದೊಡ್ಡ ಸೇವೆ ನೀಡುತ್ತಿದ್ದಾರೆ. ಇಬ್ಬರು ಹೈಕೊರ್ಟ್ ಜಡ್ಜ್‌ಗಳನ್ನು ನೀಡಿದ ಕೀರ್ತಿ ಹೋಟೆಲ್ ಒಡೆಯರ ಸಂಘಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ನಗರದ ಹೊಸ ಬಸ್ ನಿಲ್ದಾಣದ ಎದುರಿಗೆ ನೂತನ ಹೋಟೆಲ್ ಒಡೆಯರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಡಾ. ಉಮಾ ಹಾಗೂ ಜಸ್ಟಿಸ್ ಅಡಿಗ ಎನ್ನುವ ಇಬ್ಬರು ಹೈಕೋರ್ಟ್ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದು, ಇವರು ಹೋಟೆಲ್ ಉದ್ಯಮ ಕುಟುಂಬದಿಂದ ಬಂದವರಾಗಿದ್ದಾರೆ ಎಂದರು.

ಶೈಕ್ಷಣಿಕ, ಕೈಗಾರಿಕೆ, ಕ್ರೀಡಾಕೂಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೋಟೆಲ್ ಒಡೆಯರ ಸಂಘ ದೊಡ್ಡ ಕೊಡುಗೆ ನೀಡಿದೆ. ಆದರೆ, ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿ ಮೇಲೆ ಹೋಟೆಲ್‌ಗಳು ಬಹುದೊಡ್ಡ ಅನ್ಯಾಯ ಮಾಡುತ್ತಿವೆ. ರೊಟ್ಟಿ ಬದಲಾಗಿ ಇಡ್ಲಿ, ಮಿರ್ಚಿ ಬದಲಾಗಿ ಒಡೆಗಳಿಗೆ ಮಹತ್ವ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗದಗ ಆಹಾರ ಪದ್ಧತಿಯನ್ನು ಹೋಟೆಲ್‌ಗಳು ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಸಂಸ್ಕೃತಿ ರಕ್ಷಣೆ ಮಾಡಿದಂತಾಗುತ್ತದೆ. ಬೆಳಗ್ಗೆ ಪುರಿ ಹಾಗೂ ಬೆಟಗೇರಿ ಚಟ್ನಿ ನೆನಪಾಗುತ್ತಿತ್ತು. ಆದರೆ, ಇತ್ತೀಚೆಗೆ ಬೆಟಗೇರಿ ಚಟ್ನಿ ಪ್ರಭಾವ ತಗ್ಗಿದೆ. ನಮ್ಮ ಸಂಸ್ಕೃತಿಯ ಆಹಾರ ಪದ್ದತಿ ಉಳಿಸುವ ಕೆಲಸ ಆಗಬೇಕಿದೆ. ಆಹಾರ ಪದ್ಧತಿ ಕಾಪಾಡುವಲ್ಲಿ ಹೋಟೆಲ್ ಗಳ ಜವಾಬ್ದಾರಿ ದೊಡ್ಡದಿದೆ ಎಂದರು.

ಬೆಂಗಳೂರಿನ ಗಾಂಧಿನಗರ ಹತ್ತಿರದ ಕಾಮತ್ ಹೋಟೆಲ್‌ನಲ್ಲಿ ರೊಟ್ಟಿ ಮಾಡುವಂತೆ ಸಲಹೆ ನೀಡಿದ್ದೆ. ಇದಾದ ನಂತರ ಕೇವಲ ಮೂರು ತಿಂಗಳಲ್ಲಿ ರೊಟ್ಟಿ ನೀಡಲು ಕಾಮತ್ ಮುಂದಾಯಿತು. ಇದರ ಪರಿಣಾಮ ಬೆಂಗಳೂರಿನ ಎರಡ್ಮೂರು ಕಡೆ ರೊಟ್ಟಿ ಸೆಕ್ಷನ್ ತೆರೆಯಲಾಯಿತು. ನಮ್ಮ ಆಹಾರ ಸಂಸ್ಕೃತಿ ಉಳಿಸಿದರೆ ನಮ್ಮ ಗದಗ ಗೆ ಹೆಮ್ಮೆ ಬರುತ್ತದೆ ಎಂದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಎಚ್. ವಿಶ್ವನಾಥ ಶೆಟ್ಟಿ, ಬಿ.ಬಿ. ಅಸೂಟಿ, ಕೆ. ಸುಧಾಕರ ರಾವ್, ಬಿ. ರಾಜೀವ ಶೆಟ್ಟಿ ಸೇರಿದಂತೆ ಹಲವರು ಇದ್ದರು.