ಮನೆ ಗೋಡೆ ಕುಸಿತ: ರೈತ ಕುಟುಂಬ ಪಾರು

| Published : Jul 21 2024, 01:24 AM IST

ಸಾರಾಂಶ

ಹನೂರಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗನೂರು ಗ್ರಾಮದ ರೈತ ಸಣ್ಣ ಗೋವಿಂದ ಅವರ ಮನೆ ಗೋಡೆ ಕುಸಿದು ಬಿದ್ದಿರುವುದು.

ಕನ್ನಡಪ್ರಭ ವಾರ್ತೆ ಹನೂರು

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ರೈತ ಕುಟುಂಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.

ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗನೂರು ಗ್ರಾಮದ ರೈತ ಮುತ್ತಯ್ಯ ಅವರ ಮಗನಾದ ಸಣ್ಣ ಗೋವಿಂದ ಅವರ ಮನೆ ಗೋಡೆ ತಡೆ ರಾತ್ರಿ ಮಳೆಯಿಂದಾಗಿ ಮನೆಯ ಹೊರಭಾಗಕ್ಕೆ ಗೋಡೆ ಕುಸಿದು ಬಿದ್ದ ಕಾರಣ ಮಲಗಿದ್ದ ಇಬ್ಬರು ಪ್ರಾಣ ಪಾಯದಿಂದ ಪಾರಾಗಿದ್ದಾರೆ.

ಆತಂಕಕ್ಕೀಡಾದ ರೈತ ಕುಟುಂಬ:

ನಿರಂತರವಾಗಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣಿನ ಗೋಡೆ ಮಳೆಯ ನೀರಿನಲ್ಲಿ ನೆನೆದು ಶುಕ್ರವಾರ ರಾತ್ರಿ ಸಣ್ಣ ಗೋವಿಂದ ಮತ್ತು ಅವರ ಪತ್ನಿ ಬಸಮ್ಮ ಊಟ ಮಾಡಿ ಮಲಗಿದ್ದ ವೇಳೆ ತಡರಾತ್ರಿ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು ಆಹಾರ ಪದಾರ್ಥಗಳು ಇನ್ನಿತರ ಬಟ್ಟೆ ಬರೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಪರಿಹಾರಕ್ಕೆ ಆಗ್ರಹ:

ಕಡು ಬಡತನದ ರೈತ ಕುಟುಂಬ ಸಣ್ಣ ಗೋವಿಂದ ಅವರ ಮನೆ ಗೋಡೆ ತಡೆ ರಾತ್ರಿ ಕುಸಿದು ಬಿದ್ದ ಕಾರಣ ಮನೆಯ ವಸ್ತುಗಳು ಹಾನಿಯಾಗಿದೆ. ಪತಿ-ಪತ್ನಿ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇರುವ ಮನೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ ಜಿಲ್ಲಾಡಳಿತ ಪ್ರಕೃತಿ ವಿಕೋಪದಡಿ ಸೂಕ್ತ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಒತ್ತಾಯಿಸಿದ್ದಾರೆ.