ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಂಗೀತ ಚಿಕಿತ್ಸೆ ಅರಿವು ಈಗ ಎಲ್ಲೆಡೆಯೂ ಮೂಡಿದ್ದು, ಮನಸ್ಸು ಸಮಾಧಾನದಿಂದಿದ್ದಾಗ ಯಾವ ರೋಗ-ರುಜಿನಗಳೂ ಕಾಡುವುದಿಲ್ಲ ಎಂದು ಸುಗಮ ಸಂಗೀತ ಶಿಕ್ಷಕಿ ಸುಜಾತಾ ತೆಕ್ಕೂರು ತಿಳಿಸಿದರು.

ನಗರದ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿ ಏರ್ಪಡಿಸಿದ್ದ `ಸಂಗೀತ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿ ಸಂಗೀತ ಕೇಳುವಿಕೆ, ಅದರ ಉಪಾಸನೆ ಸಂಜೀವಿನಿ ಇದ್ದಂತೆ ಎಂದರು.

ಸಂಗೀತವಿಲ್ಲದೇ ಇದ್ದಿದ್ದರೆ ಬದುಕಿನ ಸ್ವರೂಪವೇ ಬದಲಾಗಿರುತ್ತಿತ್ತು. ಬಾಲ್ಯದಲ್ಲಿ ವೈಕುಂಠಪುರ ಸೂರ್ಯ ನಾರಾಯಣ ಮೇಷ್ಟ್ರ ಪ್ರೋತ್ಸಾಹದಿಂದ ವೇದಿಕೆ ಹತ್ತಿ ಹಾಡಲು ಆರಂಭಿಸಿದ ನನಗೆ ಈಗ ಸಂಗೀತವೇ ಬದುಕಾಗಿದೆ. ಚಿಕ್ಕವಳಿರುವಾಗಲೇ ನಾಗರಾಜರಾವ್‌ ಕಲ್ಕಟ್ಟೆ, ಶಿವಮೊಗ್ಗದ ಶಾಂತಾ ಶೆಟ್ಟಿಅವರನ್ನು ಕರೆಸಿ ನಮ್ಮ ಪುಟ್ಟ ಹಳ್ಳಿಯ ಶಾಲಾ ಮಕ್ಕಳಿಗೆ ಸುಗಮ ಸಂಗೀತ ತರಬೇತಿ ಕೊಡಿಸಿದ್ದೆ. ಇವುಗಳೆಲ್ಲ ಹಾಡಿನಲ್ಲಿನ ಸಾಹಿತ್ಯ ಸಕಾರಾತ್ಮಕವಾಗಿ ಸಮಾಜ ನೋಡುವುದು ಹೇಗೆ ಎಂದು ಕಲಿಸಿತು ಎಂದು ಹೇಳಿದರು.

ಪತಿ ಬೆಂಬಲದ ಜೊತೆಗೆ ಸಾಂಸ್ಕಂತಿಕ ಸಂಘಟಕರಾಗಿದ್ದ ಕೂಡ್ಲುಮಕ್ಕಿ ನಾಗೇಶ್‌ ಪ್ರೋತ್ಸಾಹದಿಂದ ಇದೀಗ ದೇಶದ ಬೇರೆ ಬೇರೆ ಭಾಗದ ಕನ್ನಡಿಗರು ಕೂಡ ನನ್ನ ಬಳಿ ಆನ್‌ಲೈನ್ ನಲ್ಲಿ ವಿವಿಧ ಗೀತೆಗಳನ್ನು ಕಲಿಯುತ್ತಿದ್ದಾರೆ ಎಂದು ತಿಳಿಸಿದರು.ಭರತ ಕಲಾ ಕ್ಷೇತ್ರದ ಪ್ರಧಾನ ಗುರು ವೀಣಾ ಅರವಿಂದ್ ಮಾತನಾಡಿ, ಭಾವಗೀತೆಗಳು ಪ್ರತಿ ಮನುಷ್ಯರ ಹೃದಯದೊಂದಿಗೆ ಮಾತನಾಡುತ್ತವೆ. ಸುಜಾತಾ ಅವರಂಥವರು ಅದನ್ನು ಜನಸಾಮಾನ್ಯರಿಗೂ ಕಲಿಸುತ್ತಾ ತಮ್ಮ ಬದುಕನ್ನು ಸಾರ್ಥಕಗೊಳಿಸಿ ಕೊಳ್ಳುತ್ತಿದ್ದಾರೆ ಎಂದರು. ಸಂಸ್ಕಂತಿ ಚಿಂತಕ ಅರವಿಂದ್‌ಕುಮಾರ್ ಮಾತನಾಡಿ, ಕಲಾವಿದರು ಅಭಿಮಾನಿಗಳಿಗೆ ಹತ್ತಿರವಾದಷ್ಟೂ ಕಲೆಯ ಮಹತ್ವ ಅರಿವಾಗುತ್ತದೆ. ಅದರಲ್ಲೂ ಸಂಗೀತ ಮಾನವೀಯ ಬಂಧ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದರು. ಬೇಲೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಸುನೀತಾ, ಕೆಂಪನಹಳ್ಳಿ ಶಿಕ್ಷಕಿ ಕಮಲಾಕ್ಷಿ, ಕಲ್ಕಟ್ಟೆ ಪುಸ್ತಕದ ಮನೆಯರೇಖಾ ನಾಗರಾಜರಾವ್, ನಾಗರಾಜರಾವ್‌ ಕಲ್ಕಟ್ಟೆ ಕೇದಾರ್, ಭರತನಾಟ್ಯಕಲಾವಿದೆ ಚಿನ್ಮಯಿ ರಮೇಶ್, ಬಾಲ ಕಲಾವಿದೆ ಮೈತ್ರಿ ರಮೇಶ್ ಉಪಸ್ಥಿತರಿದ್ದರು.