ಕನಕಗಿರಿ: 14 ವರ್ಷದೊಳಗಿನ ಎಲ್ಲ ಮಕ್ಕಳು ಎಚ್ಪಿವಿ ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಕನಕಾಚಲಪತಿ ಜಾತ್ರೆಯ ಮಿಠಾಯಿ ಅಂಗಡಿಯೊಂದರಲ್ಲಿ ಪೋಸ್ಟರ್ ಅಂಟಿಸಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಜಾತ್ರಾ ವಿಶೇಷವಾಗಿ ಸ್ಥಳೀಯ ಮಂಗಳೂರು ಮಿಠಾಯಿ ಅಂಗಡಿಯಲ್ಲಿ ದೇಶ,ರಾಜ್ಯ,ಜಿಲ್ಲೆ,ಸ್ಥಳೀಯ ಸ್ಮಾರಕಗಳ ಹಾಗೂ ಸಾಮಾಜಿಕ ಕಳಕಳಿಯುಳ್ಳ ನುಡಿಮುತ್ತು, ಗಾಧೆಗಳನ್ನು ಇಲ್ಲಿ ಅಂಟಿಸುವ ಮೂಲಕ ಜನರನ್ನು ಸೆಳೆಯಲಾಗುತ್ತಿತ್ತು.ಈ ವರ್ಷ ರಾಷ್ಟ್ರದ್ಯಂತ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಎಚ್ಪಿವಿ ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಮಾ. 13ರಿಂದ ಅಭಿಯಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಚ್ಪಿವಿ ಅಭಿಯಾನಕ್ಕೆ ಸಾರ್ವಜನಿಕರಿಂದ ಸ್ಪಂಧನೆ ಸಿಗಲಿ ಎನ್ನುವ ಕಾರಣಕ್ಕೆ ಈ ಬಾರಿಯ ಕನಕರಾಯ ಜಾತ್ರೆಯ ಮಿಠಾಯಿ ಅಂಗಡಿಯಲ್ಲಿ ಹೊಸ ಆಯಾಮದ ಜಾಗೃತಿಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯಿಂದ ಅಂಗಡಿ ಮಾಲೀಕ ಖಾಸಿಂಸಾಬ್ ಮಂಗಳೂರು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಯ ಜಾಗೃತಿ ಪೋಸ್ಟ್ ಅಳವಡಿಸಿದ್ದಾರೆ.ಭಾರತೀಯ ಸಂಸ್ಕೃತಿ, ಪರಂಪರೆ ಉಳಿವಿಗೆ ಹೆಣ್ಣು ಮಕ್ಕಳು ತನ್ನದೆ ಕೊಡುಗೆ ನೀಡುತ್ತಿದ್ದು, ಅವಿವಾಹಿತ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಮಾರಕವಾಗಿ ಕಾಡುತ್ತಿದೆ.ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಪಿವಿ ಲಸಿಕೆ ಅಭಿಯಾನ ಆರಂಭಿಸಿ ಹೆಣ್ಣು ಮಕ್ಕಳ ಜೀವ ಉಳಿಸುವ ದೀಶೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.ಅದರಂತೆ ನಾವೆಲ್ಲರೂ ಸಹ 14 ವರ್ಷದೊಳಗಿನ ಎಲ್ಲ ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ ಹಾಕಿ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮ ತಡೆಗೆ ಕೈಜೋಡಿಸಬೇಕೆನ್ನುವ ಮಿಠಾಯಿ ಅಂಗಡಿ ಮಾಲೀಕನ ಧ್ಯೇಯಕ್ಕೆ ಆರೋಗ್ಯ ಇಲಾಖೆ ಶ್ಲಾಘಿಸಿದೆ.