ದೊಡ್ಡಬಳ್ಳಾಪುರ: ಶಿಸ್ತುಬದ್ದ ಜೀವನಶೈಲಿ ಮತ್ತು ನಿರಂತರ ದೈಹಿಕ, ಮಾನಸಿಕ ಚಟುವಟಿಕೆಗಳು ಆರೋಗ್ಯಯುತ ಬದುಕಿನ ಮಾರ್ಗದರ್ಶಿ ಸೂತ್ರಗಳಾಗಿರುತ್ತವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್‌ ವಿಭಾಗದ ಮುಖ್ಯಸ್ಥ ಡಾ.ಅರುಣ್‌ಕುಮಾರ್‌ ಹೇಳಿದರು

ದೊಡ್ಡಬಳ್ಳಾಪುರ: ಶಿಸ್ತುಬದ್ದ ಜೀವನಶೈಲಿ ಮತ್ತು ನಿರಂತರ ದೈಹಿಕ, ಮಾನಸಿಕ ಚಟುವಟಿಕೆಗಳು ಆರೋಗ್ಯಯುತ ಬದುಕಿನ ಮಾರ್ಗದರ್ಶಿ ಸೂತ್ರಗಳಾಗಿರುತ್ತವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್‌ ವಿಭಾಗದ ಮುಖ್ಯಸ್ಥ ಡಾ.ಅರುಣ್‌ಕುಮಾರ್‌ ಹೇಳಿದರು.

ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ನೇತೃತ್ವದಲ್ಲಿ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಶುಕ್ರವಾರ ಆಯೋಜಿಸಿದ್ದ ಪೀಡಿಯಾಟ್ರಿಕ್ ಕ್ಯಾನ್ಸರ್ (ಮಕ್ಕಳ ಕ್ಯಾನ್ಸರ್) ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅನಿಯಂತ್ರಿತ ಜೀವಕೋಶದ ಬೆಳವಣಿಗೆಯಿಂದ ಉಂಟಾಗುವ ಅಪರೂಪದ ಕಾಯಿಲೆ ಇದಾಗಿದೆ. ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಅತ್ಯಂತ ಸಾಮಾನ್ಯವಾಗಿದೆ, ನಂತರದ ಸ್ಥಾನಗಳಲ್ಲಿ ಲಿಂಫೋಮಾ ಮತ್ತು ಮೆದುಳಿನ ಗಡ್ಡೆಗಳಿವೆ. ಇವುಗಳಲ್ಲಿ ಶೇ.90ರಷ್ಟು ಅನುವಂಶಿಕವಲ್ಲ, ಆದರೆ ಆನುವಂಶಿಕ ರೂಪಾಂತರಗಳು ರೋಗಕ್ಕೆ ಕಾರಣವಾಗಬಹುದು. ಸಕಾಲಿಕ ಚಿಕಿತ್ಸೆ, ಕಿಮೋಥೆರಪಿ ಮತ್ತು ಆರೈಕೆಯೊಂದಿಗೆ ಸಂಪೂರ್ಣ ಗುಣಮುಖರಾಗಬಹುದು ಎಂದು ತಿಳಿಸಿದರು.

ಲ್ಯುಕೇಮಿಯಾ ಮಕ್ಕಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ರಕ್ತದ ಕ್ಯಾನ್ಸರ್. ಇದು ಅಸ್ಥಿ ಮಜ್ಜೆಯಲ್ಲಿ ಪ್ರಾರಂಭವಾಗಿ, ಬಿಳಿ ರಕ್ತ ಕಣಗಳ ಅಸಹಜ ಬೆಳವಣಿಗೆಗೆ ಕಾರಣವಾಗುತ್ತದೆ. ಲಿಂಫೋಮಾ, ಬ್ರೈನ್ ಟ್ಯೂಮರ್, ನ್ಯೂರೋಬ್ಲಾಸ್ಟೋಮಾ ಮತ್ತು ವಿಲ್ಮ್ಸ್ ಟ್ಯೂಮರ್ ಇತ್ಯಾದಿಗಳು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ದೀರ್ಘಕಾಲದ ಜ್ವರ, ಆಗಾಗ್ಗೆ ಜ್ವರ ಬರುವುದು, ರಕ್ತಹೀನತೆ, ಸುಸ್ತು, ಬಿಳಿಚಿಕೊಳ್ಳುವುದು, ತೂಕ ಇಳಿಕೆ, ರಕ್ತಸ್ರಾವ, ಊತ ಇತ್ಯಾದಿಗಳನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ಕ್ಯಾನ್ಸರ್‌ ಸಾಂಕ್ರಾಮಿಕ ರೋಗವಲ್ಲ. ಜೀವನಶೈಲಿ ಈ ರೋಗದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಅಸ್ಥಿ ಮಜ್ಜೆ ಕಸಿ ಮುಂತಾದ ಚಿಕಿತ್ಸಾವಿಧಾನಗಳಿವೆ ಎಂದರು.

ಎಚ್‌ಪಿವಿ ಲಸಿಕೆ ಜಾಗೃತಿ:

9 ರಿಂದ 14 ವರ್ಷದ ಮಕ್ಕಳಿಗೆ ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ -ಎಚ್‌ಪಿವಿ ಲಸಿಕೆಯನ್ನು ಹಾಕಿಸುವುದು ಅಗತ್ಯ. ಇದು ಸಂಭವನೀಯ ಕ್ಯಾನ್ಸರ್‌ ಅನ್ನು ತಡೆಗಟ್ಟಬಹುದು. ಇದೀಗ ಭಾರತ ಸರ್ಕಾರ ಈ ಲಸಿಕೆಯನ್ನು ಸಾರ್ವತ್ರೀಕರಣಗೊಳಿಸುವ ಅಭಿಯಾನ ಆರಂಭಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಮಲ್ಟಿಪಲ್‌ 317ರ ಮಾಜಿ ಅಧ್ಯಕ್ಷ ಬಿ.ಎಸ್.ರಾಜಶೇಖರಯ್ಯ, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, 317ಎಫ್‌ನ ಮಕ್ಕಳ ಕ್ಯಾನ್ಸರ್‌ ವಿಭಾಗದ ಜಿಲ್ಲಾ ಸಂಯೋಜಕರಾದ ಡಾ.ಸಿ.ವಿ.ಗೀತಾ, ಮಾನಸಿಕ ಆರೋಗ್ಯ ಜಿಲ್ಲಾ ಸಂಯೋಜಕ ಜಿ.ಅನುಪಮ, ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯಕಾರ್ತಿಕ್‌, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಸ್‌ಡಿಯುಐಎಂ ಪ್ರಾಂಶುಪಾಲ ಡಾ.ಗೌರಪ್ಪ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಲಯನ್ಸ್‌ ಕಾರ್ಯದರ್ಶಿ ಎ.ಎಸ್.ಸುಮ, ಖಜಾಂಚಿ ಕೆ.ಸಿ.ನಾಗರಾಜ್‌, ಕೆ.ವಿ.ಪ್ರಸನ್ನಕುಮಾರ್, ಲಕ್ಷ್ಮೀಶ್ರೀನಿವಾಸ್, ಅರುಂಧತಿ ಮತ್ತಿತರರು ಉಪಸ್ಥಿತರಿದ್ದರು.

27ಕೆಡಿಬಿಪಿ1-

ದೊಡ್ಡಬಳ್ಳಾಪುರದ ಆರ್‌ಎಲ್‌ಜೆಐಟಿ ಮತ್ತು ಎಸ್‌ಡಿಯುಐಎಂನಲ್ಲಿ ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನಿಂದ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮ ನಡೆಯಿತು.