ಭಾನುವಾರ ಶೃಂಗೇರಿ ಪಟ್ಟಣ, ಶ್ರೀಮಠದಲ್ಲಿ ಜನಜಂಗುಳಿ
ಕನ್ನಡಪ್ರಭ ವಾರ್ತೆ, ಶೃಂಗೇರಿಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶೃಂಗೇರಿಗೆ ಕಳೆದ ಕೆಲ ದಿನಗಳಿಂದ ಪ್ರವಾಸಿಗರ ದಂಡು ಬರುತ್ತಿದ್ದು, ವಾರದ ಕೊನೆಯಾದ ದಿನವಾದ ಭಾನುವಾರ ಶೃಂಗೇರಿ ಪಟ್ಟಣ, ಶ್ರೀಮಠದಲ್ಲಿ ಜನಸಾಗರವೇ ಸೇರಿತ್ತು.
ಶನಿವಾರ ಸಂಜೆ ಶ್ರೀಮಠ, ಭಾರತೀ ಬೀದಿ, ಗಾಂಧಿ ಮೈದಾನ ಪ್ರವಾಸಿಗರಿಂದಲೇ ತುಂಬಿತುಳುಕಿತ್ತು. ಶ್ರೀ ಮಠದ ಮುಂಭಾಗದಿಂದ ಭಾರತೀ ಬೀದಿ, ಬೇಗಾನೆ ರಾಮಯ್ಯ ವೃತ್ತದಿಂದ ಸಂತೇ ಮಾರುಕಟ್ಟೆಯವರೆಗೂ ವಾಹನ ದಟ್ಟಣೆ ಇದ್ದರಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ಜಾಗವಿಲ್ಲದೇ ಪಟ್ಟಣದ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ವಾಹನಗಳು ನಿಲುಗಡೆ ಯಾಗುತ್ತಿರುವುದರಿಂದ ಪದೇ ಪದೇ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ಭಾನುವಾರ ಬೆಳಿಗ್ಗೆಯಿಂದಲೂ ಶ್ರೀಮಠದ ಆವರಣದಲ್ಲಿ ಭಕ್ತಗಣ ನೆರೆದಿತ್ತು. ಶ್ರೀ ಶಾರದಾಂಬಾ ದೇವಾಲಯ, ಶ್ರೀ ಶಂಕರಾಚಾರ್ಯ ದೇವಾಲಯ, ಶ್ರೀ ತೋರಣಗಣಪತಿ ದೇವಸ್ಥಾನ, ಶ್ರೀ ವಿದ್ಯಾಶಂಕರ ದೇವಾಲಯ. ನರಸಿಂಹವನದಲ್ಲಿ ಭಕ್ತರ ನೂಕುನುಗ್ಗಲು ಕಂಡುಬಂದಿತು. ಶ್ರೀಮಠದ ಬೋಜನಾ ಶಾಲೆಯಲ್ಲಿ ಫುಲ್ ರಶ್ ಆಗಿತ್ತು. ಪಟ್ಟಣದ ಭಾರತೀ ಬೀದಿ, ಗಾಂಧಿ ಮೈದಾನದಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು.
ಪ್ರವಾಸಿ ತಾಣವಾಗಿರುವ ಸಿರಿಮನೆ ಜಲಪಾತದಲ್ಲಿಯೂ ಪ್ರವಾಸಿಗರು ದಾಂಗುಡಿ ಇಟ್ಟಿದ್ದು ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶಂಕರಗಿರಿ, ಈಶ್ವರಿಗಿರಿ, ಮಳೆದೇವರು ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯ ಸೇರಿದಂತೆ ಪ್ರವಾಸಿ ತಾಣಗಳೆಲ್ಲೆ ಪ್ರವಾಸಿಗರರಿಂದ ಫುಲ್ ರಶ್ ಆಗಿತ್ತು.
24 ಶ್ರೀ ಚಿತ್ರ 1-ಶೃಂಗೇರಿ ಶ್ರೀಮಠದ ಆವರಣದಲ್ಲಿ ಭಾನುವಾರ ಭಕ್ತಗಣದ ನೂಕು ನುಗ್ಗಲು ಕಂಡುಬಂದಿತು.