ಸಾರಾಂಶ
ನರಗುಂದ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-32ರಲ್ಲಿ ಹುಯಿಲಗೋಳ ನಾರಾಯಣರಾಯರ ಬದುಕು ಮತ್ತು ಹೋರಾಟ ವಿಷಯದ ಕುರಿತು ಸಾಹಿತಿ ವೀರನಗೌಡ ಮರಿಗೌಡ್ರ ಮಾತನಾಡಿದರು.
ನರಗುಂದ: ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕವಿತೆ ಕರ್ನಾಟಕ ಏಕೀಕರಣವಾದರೂ ಇಂದಿಗೂ ಸಮಗ್ರ ಕರ್ನಾಟಕದ ನಿರ್ಮಾಣದ ಆಶಯವನ್ನು ವ್ಯಕ್ತಪಡಿಸುತ್ತದೆ. ಇದನ್ನು ರಚಿಸಿದ ಹುಯಿಲಗೋಳ ನಾರಾಯಣರಾಯರು ಬರೆದಿರುವ ಈ ಹಾಡು ಇನ್ನೂ ಹಸಿರಾಗಿದೆ. ಅದು ಸರ್ವಕಾಲಕ್ಕೂ ಕನ್ನಡ ನಾಡಿನಲ್ಲಿ ಬೇಡಿಕೆಯ ಕನ್ನಡಾಭಿಮಾನದ ಸಂಕೇತವಾಗಿದೆ ಎಂದು ಸಾಹಿತಿ ವೀರನಗೌಡ ಮರಿಗೌಡ್ರ ಹೇಳಿದರು.
ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-32ರಲ್ಲಿ ಹುಯಿಲಗೋಳ ನಾರಾಯಣರಾಯರ ಬದುಕು ಮತ್ತು ಹೋರಾಟ ವಿಷಯದ ಕುರಿತು ಮಾತನಾಡಿದರು.1924ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದ ಅವರ ಗೀತೆ ಕನ್ನಡಿಗರ ನಾಡಗೀತೆಯಾಗಿತ್ತು. ಕನ್ನಡ ನಾಡ ನುಡಿಯ ಧೀಮಂತ ಸೇವೆಯ ಪ್ರವೃತ್ತಿ ನಾರಾಯಣರಾಯರಲ್ಲಿ ಬೆಳೆದು ಬರಲು ಅವರಲ್ಲಿಯ ಅನುವಂಶಿಕ ಗುಣವೇ ಕಾರಣ. ಕನ್ನಡ ಭಾಷಾಭಿವೃದ್ಧಿಗಾಗಿ ನಾನೂ ಏನಾದರೂ ಸೇವೆ ಮಾಡಲೇಬೇಕು, ಕನ್ನಡಮ್ಮನ ಕೀರ್ತಿ ದಿಗಂತದಲ್ಲಿ ಹಬ್ಬಬೇಕು. ಕರ್ನಾಟಕ ಏಕೀಕರಣವಾಗಲೆಬೇಕು ಎಂದು ಪಣತೊಟ್ಟಿದ್ದರು ಎಂದರು.ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡ ಕುಲಕೋಟಿಯನ್ನು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕಾವ್ಯ-ಕಹಳೆಯಿಂದ ಕೂಗಿ ಜಾಗೃತ ಮಾಡಿದ ಕವಿಪುಂಗವ ಹುಯಿಲಗೋಳ ನಾರಾಯಣರಾಯರು. ಏಕೀಕರಣಕ್ಕೆ ಹೋರಾಟ ನಡೆದಾಗ ಕನ್ನಡಿಗರಲ್ಲಿ ಸದಭಿಮಾನದ ಕಾವು ತುಂಬಿದ ಈ ಹಾಡು ಅಂದಿನ ತಾರಕ ಮಂತ್ರವಾಗಿತ್ತು. ಅವರ ಕಾವ್ಯಶಕ್ತಿಗೆ ನಮ್ಮದೊಂದು ನಮನ ಎಂದು ಅವರು ಹೇಳಿದರು.
ಮಾದಾರ ಚೆನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಎಸ್. ಸಾಲಿಮಠ ಮಾತನಾಡಿ, ನಾರಾಯಣರಾಯರು ಧಾರವಾಡದಲ್ಲಿರುವಾಗ ಮುದವೀಡು ಕೃಷ್ಣರಾಯರ ಧ್ಯೇಯ-ಧೋರಣೆಗಳಿಂದ ವಿಶೇಷವಾಗಿ ಪ್ರಭಾವಿತರಾಗಿದ್ದರು. ಅವರು ಬರೆದ ಅನೇಕ ಹೃದಯ ಮಿಡಿಯುವ ಹಾಡುಗಳು ಕನ್ನಡದ ಜನರಲ್ಲಿ ಅಭಿಮಾನದ ಕಿಡಿಯೆಬ್ಬಿಸಿ ಕನ್ನಡದ ಏಕೀಕರಣಕ್ಕೆ ಹೋರಾಡುವ ಮನೋಸ್ಥೈರ್ಯ, ಛಲವನ್ನು ನೀಡಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯಎಂ.ಎಲ್. ಪತಂಗ, ಅಬೂಬಕರ ನಾಲಬಂದ, ಮಹಾಂತೇಶ ಹಿರೇಮಠ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.