ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಹಾನ್ ಮಾನವತವಾದಿ ಹಾಗೂ ಸಮಾಜ ಸುಧಾರಕ ಬಸವಣ್ಣನವರ ಆದರ್ಶ ಮೈಗೂಡಿಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಜಗಜ್ಯೋತಿ ಶ್ರೀಬಸವಣ್ಣರ ಜಯಂತ್ಯುತ್ಸವದಲ್ಲಿ ಮಾತನಾಡಿ, ಗೌತಮ ಬುದ್ಧನ ನಂತರ ಬಸವಣ್ಣನವರು ಅತ್ಯಂತ ವೇಗವಾಗಿ ಸಮಾಜ ಸುಧಾರಣೆ ಕಾರ್ಯಗಳಿಗೆ ಚಾಲನೆ ನೀಡಿದವರು ಎಂದರು.
ಆಗಿನ ಕಾಲದಲ್ಲಿ ಸಮಾನತೆಗಾಗಿ ಅಂತರ್ಜಾತಿ ವಿವಾಹಗಳನ್ನು ಕೈಗೊಂಡರು. ಆದರೆ, ಈಗಲೂ ಸಹ ಜಾತಿ ಪದ್ಧತಿ ಜಾರಿಯಲ್ಲಿ ಇರುವುದು ದುರಂತ. ಸರ್ಕಾರ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಹಲವು ಕಾರ್ಯ ಕೈಗೊಂಡಿದ್ದು, ಎಲ್ಲರೂ ಸರ್ಕಾರದ ಜೊತೆಗೆ ಕೈಜೋಡಿಸಿ ಬಸವಣ್ಣ ಕಂಡ ಕನಸನ್ನು ನನಸು ಮಾಡಬೇಕು ಎಂದರು.ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ರಾಜಕಾರಣಿಗಳು ಅದನ್ನು 68 ಬಾರಿ ತಿದ್ದುಪಡಿ ಮಾಡಿದರು. ಆದರೆ, ಬಸವಣ್ಣ ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಸಂವಿಧಾನವನ್ನು ಬರೆದು ಸಮಾಜ ತಿದ್ದುವ ಕಾರ್ಯ ಮಾಡಿದರು. ಅವುಗಳನ್ನು ಮಾತ್ರ ಯಾರು ಬದಲಾಯಿಸಲು ಹಾಗೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದರು.
ತಾಲೂಕಿನ ಕಾಪನಹಳ್ಳಿ ಗವೀಮಠದ ಸ್ವತಂತ್ರ ಚನ್ನವೀರ ಸಿದ್ದಲಿಂಗ ಶ್ರೀಗಳು ಬಸವ ಧರ್ಮಸಾರವನ್ನು ತಿಳಿಸಿದರು. ಉಪನ್ಯಾಸಕ ಮಹೇಶ್ ಬಸವಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಮುಖ್ಯ ವೇದಿಕೆಯವರೆಗೆ ಪ್ರಮುಖ ರಸ್ತೆಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಲಂಕೃತ ತೆರದ ವಾಹನದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.ಗ್ರೇಡ್ 2 ತಹಸೀಲ್ದಾರ್ ಬಿ.ಆರ್.ಲೋಕೇಶ್, ತಾಪಂ ಇಒ ಕೆ.ಸುಷ್ಮಾ, ಸಿಡಿಪಿಒ ಅರುಣ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಸೆಸ್ಕ್ ಇಇ ಎಚ್.ಕೆ.ರಮೇಶ್, ಎಇಇ ಪುಟ್ಟಸ್ವಾಮಿ, ಕಂದಾಯ ನಿರೀಕ್ಷಕರಾದ ಜ್ಞಾನೇಶ್, ಚಂದ್ರಕಲಾ, ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಸರ್ವೇ ಇಲಾಖೆ ಸಿದ್ದಯ್ಯ, ಪೊಲೀಸ್ ನಿರೀಕ್ಷಕರಾದ ಆನಂದೇಗೌಡ, ಸುಮಾರಾಣಿ ಸೇರಿದಂತೆ, ತಾಲೂಕು ವೀರಶೈವ ಸಮಾಜದ ಮುಖಂಡರಾದ ತೊಂಟಪ್ಪಶೆಟ್ಟಿ, ವಕೀಲ ವಿ.ಆರ್.ಧನಂಜಯ, ಸಾಸಲು ಈರಪ್ಪ, ಬ್ಯಾಂಕ್ ಪರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ್, ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಸೇರಿದಂತೆ ಹಲವರಿದ್ದರು.