ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಶ್ರದ್ಧೆಯನ್ನು ಇಟ್ಟುಕೊಂಡಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ಲೇಖಕಿ ಡಿ. ಶಬ್ರಿನಾ ಅಭಿಪ್ರಾಯಪಟ್ಟರು.

ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು 12ನೇ ಶತಮಾನದಲ್ಲಿ ವಚನಗಳ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ನೂರಾರು ವಚನಗಳನ್ನು ಬರೆಯುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಸಮಾಜದ ಇತರರನ್ನೂ ಅಪ್ಪಿಕೊಳ್ಳುವ ತಾಯ್ತನದ ಹೃದಯ ಶ್ರಿಮಂತಿಕೆ ಬಸವಣ್ಣನವರಲ್ಲಿ ಇತ್ತು ಎಂದು ವಿವರಿಸಿದರು.

ಪ್ರತಿಯೊಬ್ಬ ಮನುಷ್ಯನಿಗೂ ಸಪ್ತಶೀಲಗಳು ಬಹಳ ಮುಖ್ಯವಾದವುಗಳು. ಕಾಯ, ಮಾತು, ಮನಸ್ಸು ಶುದ್ಧವಾಗಿರಬೇಕು. ಜಾತಿ, ಲಿಂಗ, ವರ್ಣಗಳ ಹೆಸರಲ್ಲಿ ಇತರರನ್ನು ಶೋಷಿಸುವುದು ತಪ್ಪು ಎಂಬ ಸಂದೇಶವ ಬಸವಣ್ಣ ಬೀರಿದ್ದರು. ವೈದಿಕಶಾಹಿಗಳ ತಾರತಮ್ಯಗಳು ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ಅಲ್ಲೋಲಕಲ್ಲೋಲ ಮಾಡಿರುವುದನ್ನು ಮನಗಂಡ ಬಸವಣ್ಣ ಸಮಾಜವನ್ನು ಪರಿವರ್ತನೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡಿದರು. ಇಂತಹ ಸಮಾಜ ಸುಧಾರಕನ ಆಶಯಗಳು ಇಂದಿಗೂ ಎಂದೆಂದಿಗೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಲಿವೆ. ಅನುಭವ ಮಂಟಪದ ಮೂಲಕ ವಿವಿಧ ಜಾತಿಯ ಶರಣ ಶರಣೆಯರನ್ನು ತಮ್ಮ ಪರಿವರ್ತನೆಯ ಹಾದಿಗೆ ತಂದು ಹೊಸ ಕ್ರಾಂತಿಯನ್ನೇ ಉಂಟು ಮಾಡಿದ ಸಾಮಾಜಿಕ ಸುಧಾರಣೆಯ ಹರಿಕಾರ ಎಂದು ಶಬ್ರಿನಾ ಬಣ್ಣಿಸಿದರು.

ಮನುಷ್ಯ ಸಂಬಂಧಗಳು ನಾವುಗಳಾಡುವ ಮಾತುಗಳ ಮೇಲೆ ನಿಂತಿರುತ್ತದೆ ಎಂಬುದನ್ನು ಅರಿತು ಮಾತನಾಡುವುದನ್ನು ಕಲಿತುಕೊಳ್ಳಬೇಕು. ಬಸವಣ್ಣ ಕಂಡಂತಹ ಕನಸುಗಳು ಇಂದಿಗೂ ಈಡೇರಿಲ್ಲ. ಸಮಸಮಾಜದ ಪರಿಕಲ್ಪನೆಯನ್ನು ಸಮಾಜಕ್ಕೆ ಕೊಟ್ಟು ಹೋದ ಬಸವಣ್ಣನ ಆಶಯಗಳು ಈಡೇರಬೇಕಾದರೆ ಎಲ್ಲರೂ ಒಂದೇ ಎಂಬ ಮನೋಭಾವನೆ ಮೂಡಬೇಕಿದೆ ಎಂದು ತಿಳಿಸಿದರು.


ಪದ್ಮ ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನ್ನಪೂರ್ಣ ಪ್ರಕಾಶ್, ಶಿಲ್ಪಾ ಪ್ರಕಾಶ್, ಸತೀಶ್ ಬಾಬು, ವಿ. ಮಂಜುನಾಥ್, ಕೆ.ಎಂ. ಜಗದೀಶ್, ವಿಜಿಯೇಂದ್ರ, ಎನ್.ಎಸ್. ಶಂಕರ್, ಮಾತೃಶ್ರೀ ಮಂಜುನಾಥ್, ಕಿರಣ್ ಶಂಕರ್,ಕೆ. ಬಸವರಾಜ್, ಸಿ. ನಾಗರಾಜ್, ಕೆ.ಪಿ. ಲೋಕೇಶ್, ವೃಷಬೇಂದ್ರಪ್ಪ ಮತ್ತಿತರರು ಇದ್ದರು.