ಕನ್ನಡಪ್ರಭ ವಾರ್ತೆ ಮುಧೋಳಮಾನವ ಕಳ್ಳ ಸಾಗಾಣಿಕೆ ಎಂದರೆ ವ್ಯಕ್ತಿಯನ್ನು ಬಲವಂತದಿಂದ, ಮೋಸದಿಂದ ಅಥವಾ ಶೋಷಣೆಗೆ ಗುರಿಪಡಿಸುವ ಉದ್ದೇಶದಿಂದ ಸ್ಥಳಾಂತರಿಸುವುದು. ಇದಕ್ಕೆ ಮಹಿಳೆಯರು, ಮಕ್ಕಳು ಹಾಗೂ ಶೋಷಿತ ವರ್ಗದವರು ಹೆಚ್ಚು ಬಲಿಯಾಗುತ್ತಾರೆ ಎಂದು ಮುಧೋಳ ನ್ಯಾಯಾಲಯದ ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಲ್.ಎಸ್.ಹುಕ್ಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮಾನವ ಕಳ್ಳ ಸಾಗಾಣಿಕೆ ಎಂದರೆ ವ್ಯಕ್ತಿಯನ್ನು ಬಲವಂತದಿಂದ, ಮೋಸದಿಂದ ಅಥವಾ ಶೋಷಣೆಗೆ ಗುರಿಪಡಿಸುವ ಉದ್ದೇಶದಿಂದ ಸ್ಥಳಾಂತರಿಸುವುದು. ಇದಕ್ಕೆ ಮಹಿಳೆಯರು, ಮಕ್ಕಳು ಹಾಗೂ ಶೋಷಿತ ವರ್ಗದವರು ಹೆಚ್ಚು ಬಲಿಯಾಗುತ್ತಾರೆ ಎಂದು ಮುಧೋಳ ನ್ಯಾಯಾಲಯದ ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಲ್.ಎಸ್.ಹುಕ್ಕೇರಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಹಾಗೂ ಎಸ್.ಆರ್.ಕಂಠಿ ಮಹಾವಿದ್ಯಾಲಯ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಕೆ ದಿನಾಚರಣೆ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವ ಕಳ್ಳ ಸಾಗಾಣಿಕೆ ಹೆಚ್ಚಾಗಿ ನಂಬಿಕೆ ಹಾಗೂ ಜ್ಞಾನದ ಕೊರತೆಯಿಂದ ಆಗುತ್ತಿವೆ. ಜನಸಾಮಾನ್ಯರು ಮಾನವ ಕಳ್ಳ ಸಾಗಾಣಿಕೆ ಕುರಿತು ಇರುವ ಕಾನೂನುಗಳ ಬಗ್ಗೆ ಅರಿವು ಹೊಂದಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ವಿ.ಕೆ.ಕತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನ ಹಕ್ಕು ವಂಚಿಸಿ ಕಳ್ಳ ಸಾಗಾಣಿಕೆ ಮಾಡುವುದು, ಶೋಷಿಸುವುದು ಅಕ್ಷಮ್ಯ ಅಪರಾಧ, ಇಂದಿನ ಸಮಾಜವನ್ನು ಬಾಧಿಸುತ್ತಿರುವ ಅತ್ಯಂತ ಭೀಕರ ಹಾಗೂ ಅಮಾನವೀಯ ಅಪರಾಧ ಇದಾಗಿದೆ. ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಸಮೂಹ ಚಟುವಟಿಕೆಗಳು ಶಾಲಾ ಮಟ್ಟದಿಂದಲೇ ಶಿಕ್ಷಣ ಹಾಗೂ ಕಟ್ಟುನಿಟ್ಟಾದ ಕ್ರಮಗಳ ಮೂಲಕ ಈ ಅಪರಾಧಗಳನ್ನು ತಡೆಹಿಡಿಯಲು ಸಾಧ್ಯ, ಸಮಾಜದಲ್ಲಿ ಹಲವರು ತಮ್ಮ ಮಕ್ಕಳನ್ನು ಬಿಕ್ಷಾಟನೆ ಮಾಡಿಸುವುದು, ಗೃಹ ಕೆಲಸ, ಮಾದಕ ವಸ್ತು ಸಾಗಾಣಿಕೆ ಮಾಡುವ ಮೂಲಕ ಅಪರಾಧ ಎಸಗುತ್ತಾರೆ ಅವರಿಗೆ ಸರಿಯಾಗಿ ಜ್ಞಾನ ಒದಗಿಸುವ ಮೂಲಕ ಮಾನವ ಕಳ್ಳ ಸಾಗಾಣಿಕೆ ನಿಯಂತ್ರಿಸಬೇಕಿದೆ. ದೇಶ ವಿದೇಶಗಳ ಸಮನ್ವಯತೆಯೊಂದಿಗೂ ಸಹ ಮಾನವ ಕಳ್ಳ ಸಾಗಾಣಿಕೆ ತಡೆಗೆ ಮುಂದಾಗಬಹುದಾಗಿದೆ ಎಂದರು.

ಅಪರಾಧ ವಿಭಾಗದ ಪಿಎಸ್ಐ ಪ್ರಕಾಶ ಮುರನಾಳ ಮಾತನಾಡಿ ಮಾನವ ಕಳ್ಳಸಾಗಾಣಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿ ನಡೆಯುತ್ತಿದೆ, ಅಪ್ರಾಪ್ತರು, ಮಹಿಳೆಯರು ಮತ್ತು ಯುವಕರು ಈ ಸಮಸ್ಯೆಗೆ ಒಳಗಾಗುತ್ತಿರುವುದು ಅತ್ಯಂತ ನೋವಿನ ಸಂಗತಿ, ದಂಧೆಯಾಗಿ ಮಾರ್ಪಾಟಾಗಿರುವ ಈ ಜಾಲದಲ್ಲಿ ಅಮಾಯಕ ಜೀವಗಳು ಮೋಸದ ಬಲೆಗೆ ಬಿದ್ದು, ಅದರಿಂದ ಬಿಡಿಸಿಕೊಂಡು ಹೊರ ಬರಲಾಗದೆ ನರಳಾಡುತ್ತಿವೆ. ಮಾನವ ಕಳ್ಳಸಾಗಾಣಿಕೆ ಮತ್ತು ಮಾರಾಟ ದೇಶದಲ್ಲಿ ಶಿಕ್ಷಾರ್ಹ ಅಪರಾಧ ಮತ್ತು ಹೀನ ಕೃತ್ಯ, ಮಾನವ ಕಳ್ಳಸಾಗಣೆ ತಡೆ ಮತ್ತು ನಿಷೇಧ ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತದೆ, ಇಂತಹ ಕಠಿಣ ಕಾಯ್ದೆ ಇದ್ದರೂ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ನಾಚಿಕೆಗೇಡಿತನ ಎಂದರು.

ಸಹಾಯಕ ಸರ್ಕಾರಿ ವಕೀಲೆ ತೇಜಶ್ವಿನಿ ಮಠಪತಿ ಮಾತನಾಡಿ, ಈಗ ಪ್ರತಿಯೊರ್ವ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದು ಅನಿವಾರ್ಯ ಮತ್ತು ಅವಶ್ಯಕ. ಆದರೆ, ಬೆರೆಯೊಂದಕ್ಕೆ ಬಳಕೆ ಮಾಡುವುದರಿಂದ ಏನೇನು ತೊಂದರೆ ಮತ್ತು ಅವಗಡಗಳು ಆಗಲಿವೆ ಎಂಬುವುದನ್ನು ವಿವರಿಸಿದರು.

ಬಿ.ಆರ್.ಸಿ ಸಂಗಮೇಶ ನೀಲಗುಂದ ಮಾತನಾಡಿದರು. ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಆರ್.ಜರಕುಂಟಿ, ಐಕ್ಯೂಎಸಿ ಸಂಯೋಜಕ ಅಜ್ಜಪ್ಪ ಕಡೂರ, ಡಾ.ಮೃತ್ಯುಂಜಯ ಗವಿಮಠ, ಉಪನ್ಯಾಸಕರಾದ ಡಾ.ಎಂ.ಕೆ.ಗವಿಮಠ, ಮಹಾಂತೇಶ ಹಿರೇಮಠ, ವಿ.ಎಂ.ಕಿತ್ತೂರ ಇದ್ದರು. ವಿದ್ಯಾರ್ಥಿನಿ ಪ್ರೀತಿ ದೊಡಮನಿ ಪ್ರಾರ್ಥಿಸಿದರು.

----

ಕೋಟ್‌....

ಮಾನವ ಕಳ್ಳ ಸಾಗಾಣಿಕೆ ಎಂಬುದು ಸಮಾಜಕ್ಕೆ ಅಂಟಿದ ಪಿಡುಗು, ಇದರ ನಿವಾರಣೆಗೆ ಜಾಗೃತಿ ಅಗತ್ಯವಾಗಿದೆ. ಮಾನವ ಕಳ್ಳ ಸಾಗಾಣಿಕೆ ಮಾಡುವುದು ಅಕ್ಷಮ್ಯ ಅಪರಾಧ, ದೇಶ ವಿದೇಶ ಗಳಿಂದ ಆಗಮಿಸಿ ಹೆಣ್ಣು ಮಕ್ಕಳನ್ನು ಹಣ ಕೊಟ್ಟು ಮದುವೆ ಮಾಡಿಕೊಂಡು ಹೋಗುವವರ ಮೇಲೆ ನಿಗಾ ವಹಿಸಬೇಕು, ಇದು ಮೋಸದ ಜಾಲವಾಗಿರುವುದು, ಮಾನವ ಕಳ್ಳ ಸಾಗಾಣಿಕೆ ಮಾಡುವುದರ ಮೂಲಕ ಮಾನವನ ಅಂಗಾಂಗ ತೆಗೆದು ಇತರರಿಗೆ ಮಾರುವುದು, ಇದರಿಂದ ಸಮಾಜಘಾತಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಅಪರಾಧವೆಸಗುತ್ತಾರೆ. ಈ ಜಾಲವನ್ನು ಸಾರ್ವಜನಿಕರು ಗಮನಿಸಿ ಮಾಹಿತಿಯನ್ನು ಹತ್ತಿರದ ಪೊಲೀಸ್‌ ಠಾಣೆಗೆ ನೀಡುವ ಮೂಲಕ ಮಾನವ ಕಳ್ಳ ಸಾಗಾಣಿಕೆ ತಡೆಯಲು ಸಾರ್ವಜನಿಕರು ಭಾಗಿಯಾಗಬೇಕು.

-ಎಲ್.ಎಸ್.ಹುಕ್ಕೇರಿ, ನ್ಯಾಯಾಧೀಶ