ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ದೇಶದಲ್ಲಿ ಶೇಕಡಾ 72ರಷ್ಟು ಮಹಿಳೆಯರು ಮತ್ತು ಮಕ್ಕಳು ಮಾನವ ಕಳ್ಳ ಸಾಗಾಣಿಕೆ ದಂಧೆಗೆ ಬಲಿಯಾಗುತ್ತಿದ್ದಾರೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಸಿ.ರಾಜೇಂದ್ರ ಆತಂಕ ವ್ಯಕ್ತಪಡಿಸಿದರು.ಕುದೂರು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕುದೂರು ಗ್ರಾಮಪಂಚಾಯಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚಾರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಬೆದರಿಕೆ, ದಬ್ಬಾಳಿಕೆ ಮೂಲಕ ಕಳ್ಳಸಾಗಾಣಿಕೆ ಹೆಚ್ಚೆಚ್ಚು ಮಾಡುವ ತಂಡವೇ ಇದೆ. 2018ನೇ ಸಾಲಿನಲ್ಲಿ 67,134 ಮಕ್ಕಳು ಈ ದಂಧೆಗೆ ಬಲಿಯಾಗಿದ್ದಾರೆ. ಇಂತಹ ಅಂಕಿಸಂಖ್ಯೆಗಳು ಏರುಪೇರಾಗತ್ತಿರುತ್ತವೆಯೇ ಹೊರತು ಕಳ್ಳಸಾಗಾಣಿಕೆ ನಿಲ್ಲುತ್ತಿಲ್ಲ ಎಂದರು. ಹಣ ಸಂಪಾದನೆಗಾಗಿ, ಲೈಂಗಿಕ ಶೋಷಣೆಗಾಗಿ ಬಲತ್ಕಾರದ ಮದುವೆಗಾಗಿ, ಲಿಂಗಾನುಪಾತದ ವ್ಯತ್ಯಾಸದ ಜಾಗಗಳಲ್ಲಿ, ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕೂಲಿ, ಮನೆಕೆಲಸ, ಭಯೋತ್ಪಾದನೆ ಇಂತಹ ಕಾನೂನು ಬಾಹಿರ ಕೆಲಸಗಳಿಗಾಗಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಎಂದು ಹೇಳಿದರು.ಇಂತಹ ಕೃತ್ಯಗಳಿಗೆ ಬಲಿಯಾಗದಿರಬೇಕೆಂದರೆ ಮಕ್ಕಳು ಮತ್ತು ಮಹಿಳೆಯರು ಅಪರಿಚಿತರ ಜೊತೆಗೆ ಹೋಗಬಾರದು, ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೆ ಇರಬಾರದು, ರಸ್ತೆ ಬದಿಗಳಲ್ಲಿ ಒಬ್ಬೊಬ್ಬರೇ ನಿಲ್ಲಬಾರದು, ಏನಾದರೂ ತಿನಿಸು ಮತ್ತು ಇತರೆ ವಸ್ತುಗಳನ್ನು ಕೊಟ್ಟರೆ ಅದನ್ನು ತಿನ್ನುವುದಾಗಲಿ, ಮೂಸುವುದಾಗಲಿ ಮಾಡಬಾರದು. ಇದರಿಂದ ಪ್ರಜ್ಞೆ ತಪ್ಪಿಸಿ ಅಪಹರಣ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಪ್ರಾಥಮಿಕ ಎಚ್ಚರಿಕೆಗಳನ್ನು ವಹಿಸಿದ್ದೇ ಆದರೆ ಮಾನವ ಕಳ್ಳಸಾಗಾಣಿಕೆಗೆ ಅಂತಿಮ ಗೀತೆ ಹಾಡಬಹುದಾಗಿದೆ ಎಂದು ರಾಜೇಂದ್ರ ಹೇಳಿದರು.ವಕೀಲರಾದ ಪ್ರೇಮಕುಮಾರಿ ಮಾತನಾಡಿ, ಭಾರತದ ಕಾನೂನು ಅತ್ಯಂತ ಬಿಗಿಯಾಗಿದೆ. ಇಲ್ಲಿ ಯಾರೇ ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಸಾದ್ಯವಾಗುವುದಿಲ್ಲ. ಮಾನವ ಕಳ್ಳಸಾಗಾಣಿಕೆಗೆ ಕಾನೂನಿನಲ್ಲಿ ಕಠಿಣ ಕಾನೂನುಗಳಿವೆ ಎಂದು ಐಪಿಸಿ ಸೆಕ್ಷನ್ಗಳನ್ನು ಸಭೆಗೆ ವಿವರಿಸಿದರುಅಧ್ಯಕ್ಷತೆ ವಹಿಸಿದ್ದ ಗ್ರಾಮಪಂಚಾಯ್ತಿ ಅಧ್ಯಕ್ಷೆ ರೇಖಾ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಎಚ್ಚರಿಕೆಯ ಸಂದೇಶಗಳಿರುತ್ತವೆ. ಮುಂಜಾಗ್ರತೆ ವಹಿಸುವುದೊಂದೆ ಕಾನೂನು ಬಾಹಿರ ಚಟುವಟಿಕೆಗಳಿಗೆ ತಡೆಯೊಡ್ಡಲಲು ಸಾಧ್ಯವಾಗುವುದು ಎಂದು ಹೇಳಿದರು.
31ಕೆಆರ್ ಎಂಎನ್ 4.ಜೆಪಿಜಿಕುದೂರು ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚಾರಣೆಯಲ್ಲಿ ವಕೀಲರಾದ ಪ್ರೇಮಕುಮಾರಿ ಮಾತನಾಡಿದರು.