ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು/ಉಡುಪಿಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಆರ್ಎಸ್ಎಸ್ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿದ್ದಾರೆ, ಆದ್ದರಿಂದ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್ ) ವತಿಯಿಂದ ಕಾಪು ಹಾಗೂ ದ.ಕ. ಜಿಲ್ಲೆಯ ಪುತ್ತೂರು ಹಾಗೂ ಉಪ್ಪಿನಂಗಡಿ ಠಾಣೆಗಳಿಗೆ ಪ್ರತ್ಯೇಕ ದೂರು ನೀಡಲಾಗಿದೆ.ಡಾ.ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಿದ್ದಾರೆ ಮತ್ತು ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಕಾಪುವಿನಲ್ಲಿ ದೂರು ನೀಡುವ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲ, ಕಾರ್ಯದರ್ಶಿ ಹಾಜಿರ ಉಚ್ಚಿಲ, ಕಾಪು ಘಟಕದ ಕಾರ್ಯದರ್ಶಿ ನೌಶಿನ್ ಮತ್ತು ಕಾಪು ಘಟಕದ ಪದಾಧಿಕಾರಿಯಾದ ವಹಿದಾ ಶರೀಫ್ ಇದ್ದರು.ಪುತ್ತೂರು ನಗರ ಠಾಣೆಯಲ್ಲೂ ಸಂಘಟನೆ ವತಿಯಿಂದ ದೂರು ನೀಡಲಾಗಿದ್ದು, ಈ ಸಂದರ್ಭ ಸಂಘಟನೆಯ ಅಧ್ಯಕ್ಷೆ ಝಾಹಿದಾ ಸಾಗರ್ ಮತ್ತಿತರರು ಇದ್ದರು.ಬಂಟ್ವಾಳದಲ್ಲಿ ದೂರು ದಾಖಲುಬಂಟ್ವಾಳ: ಮಹಿಳೆಯರನ್ನು ತುಚ್ಚವಾಗಿ ಅವಮಾನಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವುಮೆನ್ ಇಂಡಿಯಾ ಮೂಮೆಂಟ್ ಸಂಘಟನೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿ ಮತ್ತು ವಿಚ್ಚೇದಿತ ಮಹಿಳೆಯರಿಗೆ ಕಳಂಕ ಹಚ್ಚುವ ಹಾಗು ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡುವ ಜೊತೆಗೆ ಅಸಭ್ಯ ಭಾಷೆಯಲ್ಲಿ ಮಹಿಳೆಯರ ಲೈಂಗಿಕ ಜೀವನ ಮತ್ತು ಕೌಟುಂಬಿಕ ಜೀವನವನ್ನು ಕೀಳಾಗಿ ಬಿಂಬಿಸಿದ ಹಾಗೂ ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರುವಂತಹ ಮಾತುಗಳನ್ನು ಆಡಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಶಮೀಮ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.ಈ ಸಂದರ್ಭ ಡಬ್ಲ್ಯುಐಎಂ ಜಿಲ್ಲಾಧ್ಯಕ್ಷರಾದ ನೌರಿನ್ ಆಲಂಪಾಡಿ, ಡಬ್ಲ್ಯುಐಎಂ ಜಿಲ್ಲಾ ಉಪಾಧ್ಯಕ್ಷರಾದ ಝಹನಾ ಬಂಟ್ವಾಳ ಉಪಸ್ಥಿತರಿದ್ದರು.ಕಲ್ಲಡ್ಕ ಭಟ್ ಮೇಲೆ ಕೇಸು ದಾಖಲು: ವಿಹಿಂಪ ಖಂಡನೆಮಂಗಳೂರು: ಶ್ರೀರಂಗಪಟ್ಟಣದಲ್ಲಿ ಹನುಮಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಪ್ರಭಾಕರ ಭಟ್ ಅವರ ಮೇಲೆ ಕೇಸು ದಾಖಲಿಸಿದ್ದು ಖಂಡನೀಯ. ತ್ರಿವಳಿ ತಲಾಕ್ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯ ಹಕ್ಕು ಕೇಂದ್ರ ಸರ್ಕಾರ ನೀಡಿದ್ದನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಪ್ರಭಾಕರ್ ಭಟ್ ಮೇಲೆ ಕೇಸು ದಾಖಲಿಸುವ ಮೂಲಕ ಸಂಘ ಮತ್ತು ಹಿಂದೂ ಸಂಘಟನೆಗಳನ್ನು ದಮನಿಸುವ ಸಂಚು ಇದಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿದೆ. ಡಾ. ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಹಾಕಿರುವ ಕೇಸನ್ನು ವಾಪಸು ಪಡೆಯಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.