- ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಶೀಲನೆ, ಪರಿಹಾರದಿಂದ ಕಾರ್ಮಿಕರಿಗೆ ಅನುಕೂಲ: ಬಸಣ್ಣ ನಾಯಕಕನ್ನಡಪ್ರಭ ವಾರ್ತೆ ಹುಣಸಗಿ
ಗ್ರಾಮೀಣ ಯೋಜನೆಯಡಿ ಗ್ರಾಮೀಣ ಜನರಿಗೆ ಆಕುಶಲ ಕೆಲಸವನ್ನು ಒದಗಿಸಲು ಆ.15ರಿಂದ ಸೆಪ್ಟೆಂಬರ್ 15ರವರೆಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಗಳಲ್ಲಿ ಜಾಬ್ ಕಾರ್ಡ್ ಮೇಳವನ್ನು ಹಮ್ಮಿಕೊಳ್ಳುತ್ತಿದ್ದು, ಜಾಬ್ ಕಾರ್ಡ್ ಇಲ್ಲದ ಅರ್ಹ ಫಲಾನುಭವಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಕೃಷಿ ಚಟುವಟಿಕೆ ನಡೆಯದೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಡಿಮೆಯಾಗಿ ಜನರು ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ವಿಬಿ-ಜಿ ರಾಮ್ಜಿ ಯೋಜನೆಯಡಿ ಸ್ವ-ಗ್ರಾಮದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಕೆಲಸಕ್ಕಾಗಿ ನಗರ ಪ್ರದೇಶಗಳತ್ತ ವಲಸೆ ಹೊಗುವುದನ್ನು ತಡೆಯಬಹುದಾಗಿದೆ.
ಕೂಲಿಕಾರರಿಗೆ ಸ್ಥಳಿಯವಾಗಿ ಕೆಲಸ ನೀಡಲು ಜುಲೈ 1ರಿಂದ ಜಾರಿಗೆ ಬಂದ ಹೊಸ ವಿಬಿ - ಜಿರಾಮ್ ಜಿ ಯೋಜನೆಯಡಿ ನೋಂದಾಯಿತ ಹಾಗೂ ಇ-ಕೆವೈಸಿ ಪೂರ್ಣಗೊಂಡ ಕೂಲಿಕಾರರಿಗೆ ಕೆಲಸ ಕೊಡಲಾಗುತ್ತಿದೆ. ಜುಲೈ ತಿಂಗಳ ಸಾಧನೆ ಆಶಾದಾಯಕವಾಗಿಲ್ಲ, ತಾಲೂಕಿನ ನೋಂದಾಯಿತ 40075 ಕೂಲಿಕಾರರಲ್ಲಿ 2132 ಸಾವಿರ ಜನರು ಮಾತ್ರ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಹೆಚ್ಚಿನ ಸಂಖ್ಯೆಯ ಕೂಲಿಕಾರರನ್ನು ಯೋಜನೆಯಡಿ ತೊಡಗಿಸಿ ಕೊಳ್ಳಲು, ಮನೆ ಭೇಟಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆ ಹೆಚ್ಚಿಸಲು ಹಾಗೂ ಪ್ರತಿದಿನ ಕನಿಷ್ಠ 2500 ಮಾನವ ದಿನಗಳನ್ನು ಸೃಜಿಸುವ ಮೂಲಕ ತಿಂಗಳಲ್ಲಿ 75 ಸಾವಿರ ಮಾನವ ದಿನಗಳ ಸೃಜನೆ ಗುರಿ ಸಾಧಿಸಲು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾ ಲಯದ ನಿರ್ದೇಶನದಂತೆ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಭಿಯಾನದ ಪ್ರಮುಖ ಉದ್ದೇಶ:
ಗ್ರಾಮೀಣ ಜನರ. ಭಾಗವಹಿಸುವಿಕೆ ಹೆಚ್ಚಿಸಲು ಯೋಜನೆಯಡಿ ಲಭ್ಯವಿರುವ ಅಕುಶಲ ಕೆಲಸ ಹಾಗೂ ವೈಯಕ್ತಿಕ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಜೀವನೋಪಾಯ ಭದ್ರತೆಗೆ ಉದ್ಯೋಗ ಸೃಜನೆ ಮಾಡು ವುದು. ಬರ ನಿರ್ವಹಣೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಅನುಷ್ಠಾನಿಸಿ ಕೂಲಿಕಾರರ ವಲಸೆ ತಡೆಯುವುದಾಗಿದೆ ಎಂದು ವಿವರಿಸಿದ್ದಾರೆ.
ಜಾಬ್ ಕಾರ್ಡ್ ಮಹತ್ವ:ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ನೀಡಲಾಗುತ್ತಿದೆ. ಜಾಬ್ ಕಾರ್ಡ್ ಪಡೆದ ಕುಟುಂಬಕ್ಕೆ, ಕುಟುಂಬದ ಜೀವಿತಾವಧಿಯಲ್ಲಿ 5 ಲಕ್ಷ ರೂ.ಗಳ ಮಿತಿಯಲ್ಲಿ ನೀಡುವ ಆರ್ಥಿಕ ಸಹಾಯಧನದಲ್ಲಿ ಮೇಕೆ, ದನದ, ಹಂದಿ, ಕೋಳಿ ಶೆಡ್ ಹಾಗೂ ಕೃಷಿ ಹೊಂಡ, ಎರೆಹುಳು ಘಟಕ, ಇಂಗು ಗುಂಡಿ, ತೋಟಗಾರಿಕೆ, ರೇಷ್ಮೆ ಸೇರಿ ಇತರೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ, ಪ್ರತಿ ವರ್ಷ 125 ದಿನ ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
-16ವೈಡಿಆರ್6 : ಬಸಣ್ಣ ನಾಯಕ್, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯ್ತಿ, ಹುಣಸಗಿ.