ಸಾರಾಂಶ
ಪಿಯು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ಮಂಗಳೂರು ಪಿಯು ಕಾಲೇಜಿಗೆ ಹೆಮ್ಮೆಯ ವಿಚಾರ ಎಂದು ನಾಡಪ್ರಭು ಕೆಂಪೇಗೌಡ ವೇದಿಕೆಯ ರಾಜ್ಯಾಧ್ಯಕ್ಷ ಕಾಳೇನಹಳ್ಳಿ ಆನಂದ್ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಮಂಗಳೂರು ಪಿಯು ಕಾಲೇಜಿನ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಕಷ್ಪಪಟ್ಟು ಓದುವುದಕ್ಕಿಂತ ಹೆಚ್ಚಾಗಿ ಇಷ್ಟ ಪಟ್ಟು ಓದುವುದು ಅತಿ ಮುಖ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಮತ್ತು ತಮಗೆ ಜನ್ಮ ನೀಡಿದ ತಂದೆ ತಾಯಿ, ತಮ್ಮ ಊರಿಗೆ ಹೆಮ್ಮೆ ಬರುವ ಹಾಗೆ ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆಗುವ ಮೂಲಕ ಈ ತಾಲೂಕಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.ಯಾವುದೇ ವಿದ್ಯಾರ್ಥಿಗಳಾಗಲಿ ಕಾಟಾಚಾರಕ್ಕೆ ವಿದ್ಯಾಭ್ಯಾಸವನ್ನು ಮಾಡಬಾರದು. ಪ್ರತಿಯೊಬ್ಬರೂ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿದರೆ ಈ ಸಮಾಜದಲ್ಲಿ ಅತ್ಯುತ್ತಮವಾದ ಸ್ಥಾನವನ್ನು ಪಡೆದು ಎಲ್ಲರಿಂದಲೂ ಪ್ರಸಂಸೆಗೆ ಪಾತ್ರರಾಗಬಹುದು, ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರಮುಖ ಆದ್ಯತೆ ಕೊಟ್ಟು ಅತ್ಯುನ್ನತ ಮಟ್ಟದ ಅಂಕಗಳನ್ನು ಪಡೆದು ರಾಜ್ಯದ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕು ಎಂದರು.
ಮಂಗಳೂರು ಪಿಯು ಕಾಲೇಜಿನ ಫಲಿತಾಂಶ ಅತ್ಯುನ್ನತ ಶ್ರೇಣಿ ೮೪, (ಡಿಸ್ಟಿಂಕ್ಷನ್) ಪ್ರಥಮ ಶ್ರೇಣಿ - ೯೮, ದ್ವಿತೀಯ ಶ್ರೇಣಿ - ೬ ಮಂದಿ ತೇರ್ಗಡೆ ಹೊಂದಿದ್ದಾರೆ. ಚನ್ನರಾಯಪಟ್ಟಣ ಮಂಗಳೂರು ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶಮಂತ್ ಎಚ್.ಬಿ. ೫೮೫ ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸತತವಾಗಿ ಐದು ವರ್ಷಗಳಿಂದಲೂ ನೂರು ಪ್ರತಿಶತ ಫಲಿತಾಂಶ ಬಂದಿದೆ, ವಿಜ್ಞಾನ ವಿಭಾಗದಲ್ಲಿ ಶಶಾಂಕ್ ಎನ್.ಆರ್. ೫೮೦ ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ೫೭೯ ಅಂಕಗಳನ್ನು ಪಡೆದ ಸಂದೀಪ್ ಗೌಡ ದ್ವಿತೀಯ ಟಾಪರ್ ಆಗಿದ್ದಾರೆ, ೫೭೮ ಅಂಕಗಳನ್ನು ಪಡೆದ ರೋಹಿಣಿ ತೃತೀಯ ಟಾಪರ್ ಆಗಿದ್ದಾರೆ, ವಿಜ್ಞಾನ ವಿಭಾಗದಲ್ಲಿ ಒಟ್ಟು ೬೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ,ವಿಜ್ಞಾನ ವಿಭಾಗದಲ್ಲಿ ಶೇಕಡ ೯೯ ಫಲಿತಾಂಶ ಬಂದಿದೆ. ಕಳೆದ ೫ ವರ್ಷಗಳಿಂದಲೂ ಸತತವಾಗಿ ಉತ್ತಮ ಫಲಿತಾಂಶ ನೀಡುತ್ತಿರುವ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಜೆ.ಎಸ್.ಪ್ರದೀಪ್ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ವಸಂತಕುಮಾರ್, ದೀಪಾ, ಯೋಗೇಶ್, ಇತರರು ಹಾಜರಿದ್ದರು.
ಚನ್ನರಾಯಪಟ್ಟಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.