ಸಾರಾಂಶ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಮೇಲೆ ಪತಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲುನಲ್ಲಿ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪತ್ನಿ ಶಿಲ್ಪಾ ಮೇಲೆ ಪತಿ ಹರಷೋತ್ತಮ್ ಹಲ್ಲೆ ಮಾಡಿದ್ದಾನೆ. ಹರಷೋತ್ತಮ್ ಮಲ್ಲೇಶ್ವರಂನಲ್ಲಿರುವ ಪಿ.ಶ್ರೀನಿವಾಸ್ ಆ್ಯಂಡ್ ಕೋ ಕಚೇರಿಯಲ್ಲಿ ಅಕೌಂಟೆಂಟ್ ಆಗಿದ್ದಾನೆ. ದಂಪತಿ ಮತ್ತಿಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹರಷೋತ್ತಮ್ ಪ್ರತಿವಾರದ ಕೊನೆಯಲ್ಲಿ ತನ್ನ ಸ್ನೇಹಿತರನ್ನು ಮನೆಗೆ ಕರೆತಂದು ಪಾರ್ಟಿ ಮಾಡುತ್ತಿದ್ದ. ಸ್ನೇಹಿತರಿಗೆ ಮದ್ಯ ಸರ್ವ್ ಮಾಡುವಂತೆ ಪತ್ನಿ ಶಿಲ್ಪಾಳಿಗೆ ಬಲವಂತ ಮಾಡುತ್ತಿದ್ದ. ಅಲ್ಲದೆ ಮದ್ಯ ಸೇವಿಸುವಂತೆ ಒತ್ತಡ ಹೇರುತ್ತಿದ್ದ. ಮಗನ ಕೈಯಿಂದ ವಿಸ್ಕಿ ಬಾಟಲ್, ಗ್ಲಾಸ್ ತರಿಸಿಕೊಂಡು ಮದ್ಯ ಸೇವಿಸಿ, ಸ್ನೇಹಿತರ ಮುಂದೆಯೇ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ.
ತನ್ನ ಸಹೋದ್ಯೋಗಿ ಯೊಂದಿಗೆ ಆತ ಅಕ್ರಮ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆ ಮಾಡಿಕೊಳ್ಳಲು ನೀನು ಬಿಟ್ಟು ಹೋಗಬೇಕು ಎಂದು ಪತ್ನಿಗೆ ಒತ್ತಡ ಹೇರುತ್ತಿದ್ದ. ಒಪ್ಪದಿದ್ದಾಗ ಹಲ್ಲೆ ನಡೆಸಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಲವಂತ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.ಇದರಿಂದ ಮಾನಸಿಕವಾಗಿ ನೊಂದ ಶಿಲ್ಪಾ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ತಾಯಿ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು.
ಪರಸ್ತ್ರೀ ಜತೆ ಸಿಕ್ಕಿಬಿದ್ದ ಪತಿ:ಹರಷೋತ್ತಮ್ನಿಂದ ಶಿಲ್ಪಾ ದೂರವಿದ್ದು, ತವರು ಮನೆಯಲ್ಲಿ ವಾಸವಾಗಿದ್ದಾರೆ. ಶನಿವಾರ (ಜು.06) ಮಗನನ್ನು ನೋಡಲು ಗಂಡನ ಮನೆಗೆ ಹೋದಾಗ, ಆತ ಬೇರೊಂದು ಮಹಿಳೆಯೊಂದಿಗೆ ಇರುವುದನ್ನು ನೋಡಿದ್ದಾರೆ. ಇದರಿಂದ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಬಳಿಕ ಹರಷೋತ್ತಮ್ ಪತ್ನಿಯನ್ನು ಆಚೆ ತಳ್ಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.