ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡು ಹೋಬಳಿಯ ಕೆಸಗೋಡು ಗ್ರಾಮದಲ್ಲಿ ಪತ್ನಿಯನ್ನು ಕೊಲೆಗೈದು ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಮೃತ ಮಹಿಳೆಯ ಶವಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.ಮೃತ ಗೃಹಿಣಿಯನ್ನು ಗಗನ (35) ಎಂದು ಗುರುತಿಸಲಾಗಿದ್ದು, ಅವರು ಹಳೇಬೀಡು ಹೋಬಳಿಯ ಸಾಣೇನಹಳ್ಳಿ ಗ್ರಾಮದವರಾಗಿದ್ದಾರೆ. ಪತಿ ರಘು (41) ಕೆಸಗೋಡು ಗ್ರಾಮದ ನಿವಾಸಿಯಾಗಿದ್ದು, ಘಟನೆಯ ಬಳಿಕ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗಂಡನ ಮೃತದೇಹ ಪತ್ತೆಯಾಗಿದೆ. ಗಗನ ಮತ್ತು ರಘು ಸುಮಾರು 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ 12 ವರ್ಷದ ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇವರು ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದು, ಎಂಎಲ್‌ಸಿ ಸಿ.ಟಿ. ರವಿ ಅವರ ನಿವಾಸದ ಹಿಂಭಾಗದ ಪ್ರದೇಶದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಶುಕ್ರವಾರ ಮಧ್ಯಾಹ್ನ ರಘು ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಕೆಸಗೋಡು ಗ್ರಾಮಕ್ಕೆ ತೆರಳಿದ್ದರು. ಸಂಜೆ ಸುಮಾರು 6.30 ಗಂಟೆಗೆ ಗ್ರಾಮಕ್ಕೆ ಬಂದಿದ್ದಾನೆ ಎನ್ನಲಾಗಿದೆ. ಬಳಿಕ ತನ್ನ ಕೆಲ ಸಂಬಂಧಿಕರಿಗೆ ವಿಡಿಯೋ ಕರೆ ಮಾಡಿ, ಪತ್ನಿಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.ಪತ್ನಿಯನ್ನು ಕಾರಿನಲ್ಲೇ ಕೊಲೆಗೈದು, ಬಳಿಕ ಯಗಚಿ ಅಥವಾ ವಾಟೆ ಹೊಳೆ ನಾಲೆಗೆ ಮೃತದೇಹವನ್ನು ಎಸೆದಿರುವ ಶಂಕೆ ವ್ಯಕ್ತವಾಗಿದೆ. ನಂತರ ಕೆಸಗೋಡು ಗ್ರಾಮಕ್ಕೆ ಬಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಪತ್ನಿಯ ಮೃತ ದೇಹಕ್ಕಾಗಿ ಶೋಧನಾ ಕಾರ್ಯ ಮುಂದುವರಿದಿದೆ.