ರಾಜಕಾರಣದಲ್ಲಿ ಢೋಂಗಿತನ ಬಹಳ ದಿನ ನಡೆಯದು

| Published : Jan 07 2025, 12:16 AM IST

ಸಾರಾಂಶ

ಸಿರಿಗೆರೆ ಸಮೀಪದ ಬೆನ್ನೂರು ವೃತ್ತದಲ್ಲಿ ಶಾಸಕ ಎಂ. ಚಂದ್ರಪ್ಪ65 ಕೋಟಿ ವೆಚ್ಚದ 13 ಕಿ.ಮೀ. ಕಾಂಕ್ರಿಟ್‌ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ರಾಜಕಾರಣದಲ್ಲಿ ಮತದಾರರ ಓಲೈಕೆಗೆ ಮಾಡುವ ಢೋಂಗಿತನ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಜನರ ಅಪೇಕ್ಷೆಗಳನ್ನು ಅರಿತು ಕೆಲಸ ಮಾಡುವ ರಾಜಕಾರಣಿ ಜನರ ಮನಸ್ಸಿನಲ್ಲಿ ಉಳಿಯುತ್ತಾನೆ ಎಂದು ಹೊಳಲ್ಕೆರೆ ಶಾಸಕ ಡಾ. ಎಂ.ಚಂದ್ರಪ್ಪ ಹೇಳಿದರು.

ಸಿರಿಗೆರೆ ಸಮೀಪದ ಬೆನ್ನೂರು ಸರ್ಕಲ್‌ನಲ್ಲಿ 65 ಕೋಟಿ ರು.ವೆಚ್ಚದ 13 ಕಿಮೀ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಜಕಾರಣಿಯಾದವನು ಜನರು ಮೆಚ್ಚುವ ಕೆಲಸ ಮಾಡಬೇಕು. ಜನರು ಅರ್ಜಿಗಳನ್ನು ಹಿಡಿದುಕೊಂಡು ಜನಪ್ರತಿನಿಧಿಯ ಮನೆ ಬಾಗಿಲಿಗೆ ಬರಬಾರದು. ಜನರ ಆಶೋತ್ತರಳು ಏನು, ಅವರ ಬೇಡಿಕೆಗಳೇನು ಎಂಬುದನ್ನು ಅರಿತು ತಾನೇ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಕ್ಷೇತ್ರದ ಜನರು ಬಾಗಿಲಿಗೆ ಬಂದು ಬೇಡಿಕೆಗಳನ್ನು ಸಲ್ಲಿಸುವ ತನಕ ಕಾಯದೆ ಪ್ರತಿ ಗ್ರಾಮದ ಬೇಡಿಕೆಗಳನ್ನು ಅರಿತು ಕಾರ್ಯಯೋಜನೆ ರೂಪಿಸಿ ಕೆಲಸ ಮಾಡುತ್ತಿದ್ದೇನೆ. ಆ ಕಾರಣದಿಂದಲೇ ಮತದಾರರು ನನ್ನನ್ನು ೫ ಬಾರಿ ಆಯ್ಕೆ ಮಾಡಿದ್ದಾರೆ ಎಂದರು.

ಸಮೀಪದ ಗೌರಮ್ಮನಹಳ್ಳಿ ಗ್ರಾಮದಲ್ಲಿ ಕೇವಲ ಮುಸ್ಲಿಂ ಬಾಂಧವರೇ ಇದ್ದಾರೆ. ಅವರಿಂದ ಕೇಳಿಸಿಕೊಳ್ಳದೆ ಅವರ ಗ್ರಾಮಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ದೊರಕಿಸಿಕೊಟ್ಟಿರುವೆ. ಜನಪ್ರತಿನಿಧಿಯಾದ ನಾನು ಯಾವುದೇ ಕೋಮು, ಧರ್ಮಗಳನ್ನು ನೋಡದೆ ಎಲ್ಲಾ ಸಮುದಾಯಗಳ ಹಿತದ ದೃಷ್ಟಿಯಿಂದ ಕೆಲಸ ಮಾಡಡಿರುವೆ ಎಂದರು.

1994ರಲ್ಲಿ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾಗ ಲಕ್ಷ್ಮೀಸಾಗರ–ಬಳಿಗಟ್ಟೆಗೆ ರಸ್ತೆ ಇರಲಿಲ್ಲ. ಸಂಜೆ ಹೊತ್ತಿನಲ್ಲಿ ಕಾಲುನಡಿಗೆಯಲ್ಲಿ ಹೋಗಿ ಮತಯಾಚನೆ ಮಾಡಿದ್ದೆ. ಈಗ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ರಸ್ತೆ ಮಾಡಿರುವೆ. ಜನರು ಈ ಕಾರಣದಿಂದ ನನಗೆ ರಸ್ತೆರಾಜ ಎಂದು ಕರೆಯುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

1994ರಲ್ಲಿ ರಾಜ್ಯದ ಬಜೆಟ್‌ ಗಾತ್ರ 22ಸಾವಿರ ಕೋಟಿ ಇತ್ತು. ನೌಕರರ ವೇತನ ಸೌಲಭ್ಯಕ್ಕೆ 18000 ಕೋಟಿ ಖರ್ಚಾಗುತ್ತಿತ್ತು. ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲೂ ಆಗ ಅನುದಾನ ಇರುತ್ತಿರಲಿಲ್ಲ. ಅಂತಹ ಸ್ಥಿತಿಯಲ್ಲಿಯೂ ೩೮೬ ಹಳ್ಳಿಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಂಡಿರುವೆ ಎಂದು ವಿವರಿಸಿದರು.

ಈಗ ಬೆನ್ನೂರು ವೃತ್ತದಿಂದ ಸಾಸಲು ವೃತ್ತದವರೆಗೆ 110 ಕೋಟಿ ರು. ವೆಚ್ಚದ ಸಿಸಿ ನಿರ್ಮಾಣ ಆಗುತ್ತಿದೆ. ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು, ತರಳಬಾಳು ಶ್ರೀಗಳ ಕೃಪೆಯಿಂದ ಭರಮಸಾಗರ ಸುತ್ತಲಿನ ಕೆರೆಗಳಿಗೆ ನೀರು ಬಂದಿದೆ. ಅದಕ್ಕೆ ಪೂರಕವಾಗಿ ವಿದ್ಯುತ್‌ ಒದಗಿಸಲು ದೊಡ್ಡ ಯೋಜನೆಯನ್ನು ಸಿದ್ದಗೊಳಿಸಿದೆ. ಅಜ್ಜಪ್ಪನಹಳ್ಳಿಯಲ್ಲಿ ವಿದ್ಯುತ್‌ ಕೇಂದ್ರ ಚಾಲನೆಗೊಂಡಾಗ ರೈತರ ವಿದ್ಯುತ್‌ ತೊಂದರೆ ನೀಗುವುದು ಎಂದರು.

*ಕುಡಿಯುವ ನೀರಿಗೆ 65 ಕೋಟಿ

ಸೂಳೆಕೆರೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಸೌಕರ್ಯ ಇಲ್ಲದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ 65 ಕೋಟಿ ರು.ಅನುದಾನ ಒದಗಿಸಲಾಗಿದೆ. ಅದೇ ರೀತಿ ಆಸ್ಪತ್ರೆ, ಶಾಲೆ, ಗ್ರಾಮಗಳ ರಸ್ತೆಗಳಿಗೂ ಅನುದಾನ ಒದಗಿಸಿರುವೆ ಎಂದರು.

ಈ ವೇಳೆ ಚಿಕ್ಕಬೆನ್ನೂರು ಜಿ.ಬಿ.ತೀರ್ಥಪ್ಪ, ಮುತ್ತುಗದೂರು ರುದ್ರಪ್ಪ, ಕೋಗುಂಡೆ ಮಂಜುನಾಥ್‌, ಕೆ.ಬಿ. ಮೋಹನ್‌, ಯುವ ಮೋರ್ಚಾ ಅಧ್ಯಕ್ಷ ಶೈಲೇಶ್‌ ಕುಮಾರ್‌, ಸಿ.ಆರ್.‌ ನಾಗರಾಜ್‌, ಓಬವ್ವನಾಗತಿಹಳ್ಳಿ ಮಂಜುನಾಥ್‌ ಮಾತನಾಡಿದರು. ಡಿವಿಎಸ್ ಪ್ರವೀಣ್‌ಕುಮಾರ್‌, ಸಿರಿಗೆರೆ ಗ್ರಾಪಂ ಅಧ್ಯಕ್ಷೆ ರೂಪಾ, ಅಳಗವಾಡಿ ಗ್ರಾಪಂ ಅಧ್ಯಕ್ಷೆ ಕಮಲಾಕ್ಷಿ, ಚಿಕ್ಕಬೆನ್ನೂರು ಗ್ರಾಪಂ ಅಧ್ಯಕ್ಷ ಕೆಂಚನಗೌಡ, ಶಿವಮೊಗ್ಗ ನಿವೃತ್ತ ಎಇಇ ಜಗದೀಶ್‌, ಸಿರಿಗೆರೆ ಪಿಡಿಒ ಹನ್ಸಿರಾ ಬಾನು, ಹಿರೇಬೆನ್ನೂರು ನಾಗರಾಜು ಸೇರಿ ಅನೇಕರಿದ್ದರು.