ನಾಲ್ವರು ಆತ್ಮಹತ್ಯೆ ವಿಚಾರದಲ್ಲಿ ನಾನು ಜವಾಬ್ದಾರಿಯಿಂದ ನಡೆದುಕೊಂಡಿದ್ದೇನೆ: ಡಿ.ರವಿಶಂಕರ್‌

| Published : Jun 12 2024, 12:32 AM IST

ನಾಲ್ವರು ಆತ್ಮಹತ್ಯೆ ವಿಚಾರದಲ್ಲಿ ನಾನು ಜವಾಬ್ದಾರಿಯಿಂದ ನಡೆದುಕೊಂಡಿದ್ದೇನೆ: ಡಿ.ರವಿಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿಯೋರ್ವನ ಕಿರುಕುಳದಿಂದ ಮಹದೇವನಾಯಕನ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮಹದೇವನಾಯಕ ಮತ್ತು ಆತನ ಪುತ್ರಿ ಲೀಲಾವತಿ ಮೃತಪಟ್ಟಿದ್ದು, ಪತ್ನಿ ಗೌರಮ್ಮ ಅಪ್ರಾಪ್ತ ಬಾಲಕಿ ಬದುಕುಳಿದಿದ್ದು, ಈ ಪ್ರಕರಣದಲ್ಲಿ ಗ್ರಾಮದ ಮುಖಂಡರು ಮತ್ತು ನಾಯಕ ಸಮಾಜದ ಯಜಮಾನರ ಮಾತಿನಂತೆ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ತಾಲೂಕಿನ ಚಂದಗಾಲು ಗ್ರಾಮದ ನಾಯಕ ಸಮಾಜದ ಮಹದೇವನಾಯಕನ ಕುಟುಂಬದ ನಾಲ್ವರ ಆತ್ಮಹತ್ಯೆ ವಿಚಾರದಲ್ಲಿ ನಾನು ಕ್ಷೇತ್ರದ ಶಾಸಕ ಮತ್ತು ಸರ್ಕಾರದ ಪ್ರತಿನಿಧಿಯಾಗಿ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ವ್ಯಕ್ತಿಯೋರ್ವನ ಕಿರುಕುಳದಿಂದ ಮಹದೇವನಾಯಕನ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮಹದೇವನಾಯಕ ಮತ್ತು ಆತನ ಪುತ್ರಿ ಲೀಲಾವತಿ ಮೃತಪಟ್ಟಿದ್ದು, ಪತ್ನಿ ಗೌರಮ್ಮ ಅಪ್ರಾಪ್ತ ಬಾಲಕಿ ಬದುಕುಳಿದಿದ್ದು, ಈ ಪ್ರಕರಣದಲ್ಲಿ ಗ್ರಾಮದ ಮುಖಂಡರು ಮತ್ತು ನಾಯಕ ಸಮಾಜದ ಯಜಮಾನರ ಮಾತಿನಂತೆ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕುಟುಂಬಕ್ಕೆ ತೊಂದರೆ ನೀಡಿದ ಚೀರನಹಳ್ಳಿ ಗ್ರಾಮದ ಲೋಕೇಶ್ ವಿರುದ್ದ ಪೋಕ್ಸೋ, ಎಸ್ಸಿ, ಎಸ್ಟಿ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾಯ್ದೆಯಡಿ ಕೇಸು ದಾಖಲಿಸಿ, ಘಟನೆ ನಡೆದ ದಿನವೇ ಆತನನ್ನು ಬಂಧಿಸುವುದರ ಜತೆಗೆ ನಿರ್ಲಕ್ಷ್ಯವಹಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ ಪಿ.ಪಿ. ಸಂತೋಷ್, ಎಎಸ್‌.ಐ ಗಿರೀಶ್, ಮುಖ್ಯಪೇದೆ ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ ಎಂದರು.

ಇದರ ಜತೆಗೆ ಇಡೀ ಪ್ರಕರಣದ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ದೊರೆಯುವ ಎಲ್ಲ ಪರಿಹಾರವನ್ನು ಕೊಡಿಸಲು ಗಮನಹರಿಸಿದ್ದು, ಮೃತಪಟ್ಟ ಮಹದೇವನಾಯಕ ಮತ್ತು ಪುತ್ರಿ ಲೀಲಾವತಿ ಅವರಿಗೆ ಈಗ ತಲಾ 4.15 ಲಕ್ಷ ರು. ಪರಿಹಾರದ ಚೆಕ್ ಕೊಡಿಸಿದ್ದು, ಆ ನಂತರ 4.15 ಲಕ್ಷ ಮೊತ್ತದ ಚೆಕ್ ಕೊಡಿಸಿ ಇತರ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಪರಿಹಾರದ ಜತೆಗೆ ವೈಯಕ್ತಿಕವಾಗಿಯು 2 ಲಕ್ಷ ಹಣ ಕೊಟ್ಟಿದ್ದು, ಇದರೊಂದಿಗೆ ಕಾಂಗ್ರೆಸ್ ಪುರಸಭೆ ಸದಸ್ಯ ಶಿವುನಾಯಕ್ ಅವರು 25 ಸಾವಿರ ನೀಡಿದ್ದು, ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿರುವ ಇಬ್ಬರ ಹೆಚ್ಚಿನ ಚಿಕಿತ್ಸೆಗೆ ನಾನೇ 25 ಸಾವಿರ ಸಹಾಯ ಮಾಡಿದ್ದು, ಮುಂದಿನ ಎಲ್ಲ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ಇದರಲ್ಲಿ ಯಾವುದೇ ರಾಜಕೀಯ ಬೆರೆಸಿಲ್ಲ ಎಂದು ನುಡಿದರು.

ಘಟನೆ ನಡೆದ ಕ್ಷಣದಿಂದ ಈವರೆಗೂ ನಾನು ಶಾಸಕನಾಗಿ ಜವಾಬ್ದಾರಿಯಿಂದ ವರ್ತಿಸಿದ್ದು ಇದಕ್ಕೆ ಸರ್ವರ ಸಹಕಾರವನ್ನು ಪಡೆದಿದ್ದೇನೆ ಮತ್ತು ಇದು ನನ್ನ ಕರ್ತವ್ಯವಾಗಿದ್ದು, ಇಂತಹ ವಿಚಾರಗಳಲ್ಲಿಯೂ ರಾಜಕೀಯ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕೊಡಲೆಂದು ಹಾರೈಸಿದರು.

ರಾಜ್ಯ ಕಾಂಗ್ರೆಸ್ ಪ. ಪಂಗಡ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್‌ ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಚಂದಗಾಲು ಗ್ರಾಪಂ ಅಧ್ಯಕ್ಷ ಸತೀಶ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯರಾದ ಶಿವುನಾಯಕ್, ಪ್ರಕಾಶ್, ಸೈಯದ್‌ ಸಿದ್ದಿಕ್, ಕೆ.ಎಸ್. ಶಂಕರ್, ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಜಿಲ್ಲಾ ನಿರ್ದೇಶಕ ಡಿ.ಜೆ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಎಸ್‌ಟಿ ವಿಭಾಗದ ತಾಲೂಕು ಅಧ್ಯಕ್ಷ ಮಹದೇವನಾಯಕ, ನಗರಾಧ್ಯಕ್ಷ ಎಂ.ಜೆ. ರಮೇಶ್, ವಕ್ತಾರ ಸೈಯದ್‌ಜಾಬೀರ್, ತಾಪಂ ಮಾಜಿ ಸದಸ್ಯ ನಂಜುಂಡ ಇದ್ದರು.ಶವವನ್ನು ಮುಂದಿಟ್ಟುಕೊಂಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ: ಡಿ. ರವಿಶಂಕರ್‌ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಶವವನ್ನು ಮುಂದಿಟ್ಟುಕೊಂಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ. ಅದು ಪ್ರಚಾರಕ್ಕಾಗಿ ರಾಜಕೀಯ ಮಾಡುವವರ ಜಾಯಮಾನ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ವಿರುದ್ಧ ಶಾಸಕ ಡಿ.ರವಿಶಂಕರ್ ಪರೋಕ್ಷ ವಾಗ್ದಾಳಿ ನಡೆಸಿದರು.ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ಅವರು ಅನಗತ್ಯವಾಗಿ ಕೆಟ್ಟ ರಾಜಕಾರಣ ಮಾಡುತ್ತಿದ್ದು, ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ, ಈ ಹಿಂದೆ ನೀವು ಶಾಸಕರಾಗಿದ್ದ 15 ವರ್ಷಗಳ ಅವಧಿಯಲ್ಲಿ ಇಂತಹ ಹತ್ತಾರು ಘಟನೆಗಳು ನಡೆದಿದ್ದವು, ಆಗ ನಾವು ನಿಮಗೆ ಸಹಕಾರ ನೀಡಿರಲಿಲ್ಲವೇ ಎಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆದಿತ್ತು ಎಂದು ಸಾ.ರಾ.ಮಹೇಶ್ ಆರೋಪಿಸಿದ್ದು, ಇದು ಸಾಬೀತಾದರೆ ನಾನು ನನ್ನ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಲಿದ್ದು, ಇದಕ್ಕೆ ಸೂಕ್ತ ಸಾಕ್ಷ್ಯಾಧಾರ ನೀಡಲು ನೀವು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಹತ್ತು ವರ್ಷದ ಹಿಂದೆ ಯುವಕನೋರ್ವನ ಕೊಲೆಯಾಗಿ ಗ್ರಾಮವೇ ಹೊತ್ತಿ ಉರಿಯುತ್ತಿದ್ದಾಗ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಲು ಸಹಕಾರ ನೀಡಿದ್ದೆ, ಆದರೆ ಈಗ ನೀವು ಮಾಡುತ್ತಿರುವ ಕೆಲಸವಾದರೂ ಏನೆಂದು ಕೇಳಿದ ಅವರು, ಇದರ ಜತೆಗೆ ಸಿದ್ದಾಪುರ ಮತ್ತು ನಾರಾಯಣಪುರ ಗ್ರಾಮದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಬೇಕು ಎಂದು ಮಾಜಿ ಸಚಿವರನ್ನು ಕುಟುಕಿದರು.

ಸೋಮವಾರ ಮಧ್ಯಾಹ್ನ ಮೃತ ಮಹದೇವನಾಯಕನ ಶವದ ಮುಂದೆ ಗಿಮಿಕ್ ರಾಜಕಾರಣ ಮಾಡಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ನಾನು ಮಾತನಾಡಿ ಬರೆಯಿಸಿದ್ದ ಪರಿಹಾರದ ಚೆಕ್ಕನ್ನು ಅಧಿಕಾರಿಗಳಿಗೆ ಬೆದರಿಸಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡರ ಮೂಲಕ ಕೊಡಿಸಿದ್ದು ಎಷ್ಟು ಸರಿ ಎಂದು ಕೇಳಿದರು.ಮೃತ ಕುಟುಂಬಕ್ಕೆ ಪರಿಹಾರದ ಚೆಕ್ ಕೊಡಿಸಲು ನೀವೇನು ಕ್ಷೇತ್ರದ ಶಾಸಕರೋ ಅಥವಾ ಉನ್ನತ ಅಧಿಕಾರಿಯೋ ಎಂದ ಅವರು, ಮುಂದಾದರೂ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಿ ಇಲ್ಲವಾದರೆ ನನಗೆ ಕೆಲಸ ಮಾಡುವುದು ಗೊತ್ತಿದೆ ಎಂದರು.