ಭ್ರಷ್ಟರ ಪಾಲಿಗೆ ನಾನು ಡಾಬರ್ ಮನ್ ನಾಯಿನೇ!

| Published : Sep 15 2025, 01:00 AM IST

ಭ್ರಷ್ಟರ ಪಾಲಿಗೆ ನಾನು ಡಾಬರ್ ಮನ್ ನಾಯಿನೇ!
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಪಮೇರಿಯನ್‌ ನಾಯಿಮರಿಗಳಂತೆ ಜಿಲ್ಲಾ ಉಸ್ತುವಾರಿ ಸಚಿವರ ಹಿಂದೆ ಸುತ್ತುತ್ತಿದ್ದಾರೆಂದು ನಾನು ಹೇಳಿದ್ದು, ಇದರಿಂದ ಎಸ್‌ಪಿ ಉಮಾ ಪ್ರಶಾಂತ್‌ಗೆ ಬೇಸರವಾಗಿದ್ದರೆ ನಾನೇನೂ ಮಾಡಲಾಗುವುದಿಲ್ಲ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.

- ಸಚಿವ ಮಲ್ಲಿಕಾರ್ಜುನ ಹೇಳಿಕೆಗೆ ಬಿಜೆಪಿ ಶಾಸಕ ಬಿ.ಪಿ.ಹರೀಶ ತಿರುಗೇಟು - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಅಧಿಕಾರಿಗಳು ಪಮೇರಿಯನ್‌ ನಾಯಿಮರಿಗಳಂತೆ ಜಿಲ್ಲಾ ಉಸ್ತುವಾರಿ ಸಚಿವರ ಹಿಂದೆ ಸುತ್ತುತ್ತಿದ್ದಾರೆಂದು ನಾನು ಹೇಳಿದ್ದು, ಇದರಿಂದ ಎಸ್‌ಪಿ ಉಮಾ ಪ್ರಶಾಂತ್‌ಗೆ ಬೇಸರವಾಗಿದ್ದರೆ ನಾನೇನೂ ಮಾಡಲಾಗುವುದಿಲ್ಲ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ. ಎಸ್‌ಪಿಗೆ ನಾನು ಪಮೇರಿಯನ್ ನಾಯಿ ಅಂತಾ ಹೇ‍ಳಿಲ್ಲ. ಅಧಿಕಾರಿಗಳು ಸಚಿವರ ಹಿಂದೆ ಪಮೇರಿಯನ್‌ ನಾಯಿಮರಿಗಳಂತೆ ಸುತ್ತುತ್ತಾರೆಂದು ಹೇಳಿದ್ದೆ ಎಂದರು.

ಶಾಮನೂರು ಕುಟುಂಬದ ಅಕ್ರಮಗಳ ಬಗ್ಗೆ ನಾನು ಸದನದ ಒಳಗೂ, ಹೊರಗೂ ಮಾತನಾಡಿದ್ದೆ. ಹರಿಹರ ತಾಲೂಕಿನ ಚಿಕ್ಕಬಿದರಿ, ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಶಾಮನೂರು ಮನೆತನದವರು ರೈತರ ಜಮೀನು ಕಿತ್ತುಕೊಂಡಿದ್ದನ್ನು ಪ್ರಶ್ನಿಸಿದ್ದೆ. ಹಾಗಾಗಿ, ಇದೇ ದ್ವೇಷಕ್ಕೆ ಸಚಿವ ಮಲ್ಲಿಕಾರ್ಜುನ ಅಧಿಕಾರಿಗಳನ್ನು ಬಳಸಿ, ನನ್ನ ಮೇಲೆ ಎಫ್ಐಆರ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ವಿಜಯಕುಮಾರ ಕೊಂಡಜ್ಜಿ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೂ, ನಾನೇ ಹೊಡೆದು ಸಾಯಿಸಿದ್ದೇನೆ ಎಂಬುದಾಗಿ ಎಫ್ಐಆರ್ ಮಾಡಿಸಿದ್ದರು. ಈಗ ಎಸ್‌ಪಿ ಬಳಸಿಕೊಂಡು ನನ್ನ ಮೇಲೆ ಕೇಸ್ ಮಾಡಿಸಿದ್ದಾರೆ. ನನ್ನನ್ನು ಡಾಬರ್ ಮನ್ ನಾಯಿನಾ ಅಂತಾ ಸಚಿವ ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ. ನಾನು ಭ್ರಷ್ಟರ ಪಾಲಿಗೆ ಡಾಬರ್ ಮನ್ ನಾಯಿನೇ. ಸಚಿವರಿಗೆ ಸ್ವಲ್ಪ ಹುಷಾರಾಗಿರಲು ಹೇಳಿ. ಡಾಬರ್ ಮನ್ ನಾಯಿಯು ಬಾಯಿ ಹಾಕಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹರೀಶ್‌ ತಿರುಗೇಟು ನೀಡಿದರು.

- - -

(ಕೋಟ್‌) ನಾನು ಯಾವುದನ್ನೂ ಅಷ್ಟು ಸುಲಭಕ್ಕೆ ಬಿಡುವ ಮನುಷ್ಯನಂತೂ ಅಲ್ಲ. ಈ ಹಿಂದೆ ಜಿಂಕೆ ಕೇಸ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಒಳಒಪ್ಪಂದ ಮಾಡಿಕೊಂಡು, ಉಳಿದುಕೊಂಡರು. ಶಾಮನೂರು ಕುಟುಂಬದ ವಿರುದ್ಧ ಹೋರಾಟ ಮಾಡಿ ಗೆದ್ದಿದ್ದೇನೆ. ನನ್ನ ಹೋರಾಟ ನಿರಂತರ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

- ಬಿ.ಪಿ.ಹರೀಶ, ಶಾಸಕ, ಹರಿಹರ ಕ್ಷೇತ್ರ.

- - -

-14ಕೆಡಿವಿಜಿ9: ಬಿ.ಪಿ.ಹರೀಶ.