ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳೆದ ತಿಂಗಳು ರಸ್ತೆ ಅಪಘಾತದಿಂದಾಗಿ ಗಾಯಗೊಂಡು ವಿಶ್ರಾಂತಿಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಛತ್ರಪತಿ ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ತುರಮರಿ ಗ್ರಾಮದಲ್ಲಿ ನಡೆದ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಜೈ ಶ್ರೀರಾಮ ಘೋಷಣೆ ಕೂಗಿದರು.ನಿಮ್ಮೆಲ್ಲರ ಸಹಕಾರ, ಪ್ರಾರ್ಥನೆಯ ಫಲವಾಗಿ ಇಂದು ಸಂಪೂರ್ಣ ಗುಣಮುಖನಾಗಿದ್ದೇನೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿ ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅಲ್ಲಿ ಈಗ ದೇಶವಷ್ಟೆ ಅಲ್ಲ, ವಿದೇಶದಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಸಾರ್ಥಕವಾಗಿದೆ ಎಂದರು.ಇಲ್ಲಿ ನಿಮ್ಮೆಲ್ಲರ ಉತ್ಸಾಹ, ಭಕ್ತಿ ನೋಡಿ ಖುಷಿಯಾಗಿದೆ. ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತವಾಗಿ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ. ಕ್ಷೇತ್ರದ ಎಲ್ಲ ಗ್ರಾಮಗಳ, ಸರ್ವ ಜನಾಂಗಗಳ ಹಿತ ದೃಷ್ಟಿಯಿಂದ ಎಲ್ಲ ಮಹನೀಯರ ಮೂರ್ತಿಗಳ ಪ್ರತಿಷ್ಠಾಪನೆಗೆ ಮಹತ್ವ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಯುವರಾಜ್ ಕದಂ, ಜಯವಂತ ಬಾಳೇಕುಂದ್ರಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಸಿದ್ದಪ್ಪ ಕಾಂಬಳೆ, ಅಶೋಕ ಚೌಗುಲೆ, ವೈಶಾಲಿ ಖಂಡೇಕರ್, ನಾಗರಾಜ ಜಾಧವ್, ಆರ್.ಎಂ.ಚೌಗುಲೆ, ರವಿ ಕೊಕಿತಕರ್, ಚಂದ್ರಕಾಂತ ಜಾಧವ್, ರಾಜು ಜಾಧವ್, ಎನ್.ಬಿ.ಖಂಡೇಕರ್, ಚಾಂಗದೇವ್ ಬೆಳಗಾಂವ್ಕರ್, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.