ಸಾರಾಂಶ
ಸಧ್ಯ ನಾನು ಮೌನವಾಗಿದ್ದೇನೆ ಸಮಯ ಬಂದಾಗ ಮೌನ ಮುರಿಯುತ್ತೇನೆ. ಲೋಕಸಭಾ ಚುನಾವಣೆಗೆ ನಾನೂ ಅಕಾಂಕ್ಷಿ. ಇಲ್ಲಿ ನಾನೇನು ಸನ್ಯಾಸಿ ಇದ್ದೇನಾ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.
ಬೀದರ್: ಸಧ್ಯ ನಾನು ಮೌನವಾಗಿದ್ದೇನೆ ಸಮಯ ಬಂದಾಗ ಮೌನ ಮುರಿಯುತ್ತೇನೆ. ಲೋಕಸಭಾ ಚುನಾವಣೆಗೆ ನಾನೂ ಅಕಾಂಕ್ಷಿ. ಇಲ್ಲಿ ನಾನೇನು ಸನ್ಯಾಸಿ ಇದ್ದೇನಾ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತಿರ್ಮಾನ ತೆಗೆದುಕೊಳ್ಳುತ್ತದೆ ಹೀಗಾಗಿ ಈಗಲೇ ಏನು ಹೇಳುವುದು ಸರಿಯಲ್ಲ ಎಂದರು.ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು 9 ತಿಂಗಳಾಯಿತು. ನನಗೆ ಯಾವುದೇ ಅಧಿಕಾರ ನೀಡಿಲ್ಲ. ಪಕ್ಷದಲ್ಲಿ ಕೂಡ ಯಾವುದೇ ಹುದ್ದೆ ಇಲ್ಲ ಎಂಬ ಬೇಸರವನ್ನು ಹೊರಹಾಕಿದಂತೆ ಮಾತನಾಡಿದ ಮಾಜಿ ಸಚಿವ ಪಾಟೀಲ್, ಭಗವಂತ ಖೂಬಾ ವಿರುದ್ಧ ತೋಡೆ ತಟ್ಟುತ್ತೇನೆ ಎಂದು ಹೇಳಿದ್ದರ ಕುರಿತು ಉತ್ತರಿಸಿ, ಈಗಲೂ ಅದಕ್ಕೆ ನಾನು ಬದ್ಧ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ಖುದ್ದು ಅವರ ಬಗ್ಗೆ ನೋಡಿಕೊಳ್ಳಲಿ. ಅವರ ಪಕ್ಷದ ಶಾಸಕರಾದ ಪ್ರಭು ಚವ್ಹಾಣ್, ಈಶ್ವರ ಸಿಂಗ ಠಾಕೂರ್ ಸೇರಿದಂತೆ ಇನ್ನಿತರರು ಅವರಿಗೆ ವಿರೋಧಿಸುತ್ತಿದ್ದಾರೆ. ಇಂಥದ್ದರಲ್ಲಿ ಕಾಂಗ್ರೆಸ್ಸಿನವರ ಬಗ್ಗೆ ಮಾತಾಡುವುದಕ್ಕೂ ಮುನ್ನ ಅವರ ಪಕ್ಷದವರೇ ಮಾತನಾಡುತ್ತಿದ್ದಾರೆ ಅದರ ಬಗ್ಗೆ ಯೋಚಿಸಲಿ ಎಂದು ರಾಜಶೇಖರ ಪಾಟೀಲ್ ಹೇಳಿದರು.