ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಕಾರ್ಯಕ್ರಮಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿವೆ. ಶಿವಶಂಕರರೆಡ್ಡಿ ಹಣದಿಂದ ರಾಜಕೀಯ ಮಾಡಿದವರಲ್ಲ, ತಾಲೂಕು ಆಡಳಿತ ಅಧೋಗತಿಗೆ ಹೋಗಿದೆ, ಜನಸಾಮಾನ್ಯರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ .
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಹೋಬಳಿಯ ಹಲವು ಗ್ರಾಮಗಳಿಗೆ ರಸ್ತೆ, ಸಮುದಾಯ ಭವನ, ಬಸ್ ವ್ಯವಸ್ಥೆ, ಸಿ.ಸಿ ರಸ್ತೆಗಳನ್ನು ಮಾಡಿಸಿದ್ದೇನೆ. ನಾನು ಜನರ ಮಧ್ಯೆ ಇರುವವನು, ಬೇರೆಯವರಂತೆ ಸಂಪತ್ತು ಆಕ್ರಮಿಸಿಕೊಳ್ಳುವವನಲ್ಲ ಎಂದು ಮಾಜಿ ಶಾಸಕ ಹಾಗೂ ಎನ್.ಎಚ್.ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.ತಾಲೂಕಿನ ಡಿ.ಪಾಳ್ಯ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಕಾರ್ಯಕ್ರಮಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿವೆ. ನಾವು ಹಿಂದೂಗಳೇ, ನಮ್ಮ ತಂದೆ ತಾಯಿಗಳು ನಮಗೆ ಸಂಸ್ಕಾರ ಹೇಳಿಕೊಟ್ಟಿದ್ದಾರೆ, ಹಿಂದೂ ಧರ್ಮಕ್ಕೆ 5000 ವರ್ಷಗಳ ಇತಿಹಾಸವಿದೆ, ಬಿಜೆಪಿಗೆ 23 ವರ್ಷಗಳ ಇತಿಹಾಸವಿದೆ. ರಾಜಕಾರಣ ಎಂದರೆ ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರ ಜೊತೆ ನಾವು ನಿಲ್ಲಬೇಕು, ಪ್ರತಿಯೊಂದು ಮತಕ್ಕೂ ತುಂಬಾ ಬೆಲೆ ಇದೆ, ಇಪ್ಪತ್ತೈದು ವರ್ಷಗಳಲ್ಲಿ ನಾನು ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಸೀರೆ ಮತ್ತು ಕ್ಯಾಲೆಂಡರ್ ನೀಡಿ ರಾಜಕೀಯ ಮಾಡುವವ ನಾನಲ್ಲ, ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಮತಕ್ಕೆ ಬೆಲೆ ಕಟ್ಟಲು ಆಗಲ್ಲ, ಐನೂರು ಮತ್ತು ಸಾವಿರ ರು.ಗಳಿಗೆ ಮತ ಮಾರಿಕೊಳ್ಳಬೇಡಿ, ಮಾರಿಕೊಂಡರೆ ಈಗ ಇರುವ ಶಾಸಕರ ಬಳಿ ಕೂಲಿ ಆಳುಗಳ ತರ ನಿಂತು ಕೊಳ್ಳಬೇಕು, ಕೆಲವರು ಮೇಸ್ತ್ರಿಗಳ ತರ ಇದ್ದಾರೆ, ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದು ಇಲ್ಲ. ಈಗಿನ ಶಾಸಕರು ಎಷ್ಟು ಬಾರಿ ಹಳ್ಳಿಗಳಿಗೆ ಬಂದಿದ್ದಾರೆ, ನಾನು ಕೂಡ ಸೀರೆ ಕೊಟ್ಟು ರಾಜಕೀಯ ಮಾಡಬೇಕಾ, ನಿಮ್ಮ ಕಷ್ಟಗಳಿಗೆ ಸ್ಪಂದಿಸಬೇಕು. ಹಳ್ಳಿಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ನಾವು ಒಬ್ಬರೇ ಒಂದು, ಉಳಿದ ಗಿರಾಕಿಗಳೆಲ್ಲ ಒಂದು ಎಂದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, 2008ರವರೆಗೂ ನಗರಗೆರೆ ಮತ್ತು ಡಿ.ಪಾಳ್ಯ ಹೋಬಳಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದವು. ಆದರೆ ಶಿವಶಂಕರರೆಡ್ಡಿ ಆಗ ಶಾಸಕರಾದ ಮೇಲೆ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಡಿ, ಅವರು ಬಡವರು, ಕಾರ್ಮಿಕರು, ರೈತರ ಪರವಾಗಿ ಶ್ರಮಿಸಿದವರು, 25 ವರ್ಷಗಳ ಹಿಂದೆ ಯಾವುದೇ ಚುನಾವಣೆ ಆಗಬೇಕಾದರೆ ಗ್ರಾಮಗಳಲ್ಲಿ ಕೂತು ಒಳ್ಳೆಯವರನ್ನು ಆಯ್ಕೆ ಮಾಡಲು ಹೇಳುತ್ತಿದ್ದರು. ಪ್ರಸ್ತುತ ತಾಲೂಕಿನಲ್ಲಿ ಹಣದ ರಾಜಕೀಯ ನಡೆಯುತ್ತಿದೆ ಎಂದರು.
ಶಿವಶಂಕರರೆಡ್ಡಿ ಸೋತಿದ್ದರೂ ತಾಲೂಕಿನಲ್ಲಿ ತಮ್ಮ ಸೇವಾ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಸೀರೆ, ಕ್ಯಾಲೆಂಡರ್ ನಿಮ್ಮ ಹೊಟ್ಟೆ ತುಂಬಿಸುವುದಿಲ್ಲ, ಸರ್ಕಾರ ನಿಮಗೆ ಸವಲತ್ತುಗಳನ್ನು ನೀಡುತ್ತಿದೆ, ಸೋತಿದ್ದು ಶಿವಶಂಕರರೆಡ್ಡಿಗೆ ನಷ್ಟವಾಗಿಲ್ಲ, ಕ್ಷೇತ್ರಕ್ಕೆ ನಷ್ಟವಾಗಿದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಿವಶಂಕರರೆಡ್ಡಿ ನೇತೃತ್ವದಲ್ಲಿ ನಡೆಯುತ್ತವೆ ಎಂದರು.ಮುಖಂಡ ಖಾದರ್ ಸುಬಾನ್ ಖಾನ್ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಕಾರ್ಯಕ್ರಮಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿವೆ. ಶಿವಶಂಕರರೆಡ್ಡಿ ಹಣದಿಂದ ರಾಜಕೀಯ ಮಾಡಿದವರಲ್ಲ, ತಾಲೂಕು ಆಡಳಿತ ಅಧೋಗತಿಗೆ ಹೋಗಿದೆ, ಜನಸಾಮಾನ್ಯರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಅಶ್ವತ್ಥನಾರಾಯಣಗೌಡ, ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ಆನಂದ್, ಅರುಂಧತಿ, ಗಂಗಾಧರಪ್ಪ, ರಮೇಶನಾಯಕ, ರಾಂಬಾಬು, ತಾರಾನಾಥ್, ಕರೇತಿಮ್ಮಯ್ಯ, ಮೈಲಾರಿ, ಗೋಪಿನಾಥ್, ರಫೀಕ್, ನಾಗೇಶ್, ವೆಂಕಟಾದ್ರಿ, ಮಂಜುನಾಥ, ಗಂಗರಾಜು, ಶ್ರೀನಿವಾಸರೆಡ್ಡಿ, ರೇಣುಕಮ್ಮ, ನಿರಂಜನ್, ದೀಪಾಂಶು, ಹನುಮಾನ್, ವಿಶ್ವನಾಥ್, ರಾಮಾಂಜಿನಮ್ಮ, ಲಕ್ಷ್ಮಯ್ಯ, ಶಾಮ್ ಸುಂದರ್, ಕಂಬಕ್ಕ ವೆಂಕಟೇಶ್, ಶಾಹಿದ್ ಅಹಮದ್, ನಾರಾಯಣಸ್ವಾಮಿ, ನವೀನ್ , ಆನಂದರೆಡ್ಡಿ ಮತ್ತು ಪಕ್ಷದ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.