ಸಾರಾಂಶ
ಹುಬ್ಬಳ್ಳಿ: ಪತ್ನಿಯ ಕಿರುಕುಳ ತಾಳಲಾರದೇ ಪತಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಭಾನುವಾರ ನಡೆದಿದ್ದು, ಆತನ ಕೊನೆಯ ಆಸೆಯಂತೆ ಶವಪೆಟ್ಟಿಗೆಯ ಮೇಲೆ "ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆನು " ಎನ್ನುವ ಒಕ್ಕಣಿಕೆ ಬರೆಸುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಪೀಟರ್ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದೆ. ಅದರಲ್ಲಿ "ಡ್ಯಾಡಿ ಆಯಾಮ್ ಸ್ಸಾರಿ, ಪಿಂಕಿ (ಪತ್ನಿ) ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆತ್ " ಎಂದು ಬರೆದಿದ್ದಾನೆ. ಅಲ್ಲದೇ ನನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ನನ್ನ ಸಾವಿಗೆ ಕಾರಣ ಎಂದು ಬರೆಯಿಸುವಂತೆ ಮೃತ ಪೀಟರ್ ಮನವಿ ಮಾಡಿದ್ದರಂತೆ. ಹೀಗಾಗಿ ಶವದ ಪೆಟ್ಟಿಗೆ ಮೇಲೆ "ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆ " ಎಂದು ಬರೆಸುವ ಮೂಲಕ ಕುಟುಂಬಸ್ಥರು ಪೀಟರ್ನ ಕೊನೆ ಆಸೆ ಈಡೇರಿಸಿದ್ದಾರೆ.
₹ 20 ಲಕ್ಷಕ್ಕೆ ಬೇಡಿಕೆ:
ಮೃತ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಪಿಂಕಿ ಖಾಸಗಿ ಶಾಲಾ ಶಿಕ್ಷಕಿಯಾಗಿದ್ದಾರೆ. ಇವರಿಬ್ಬರು ಕಳೆದ ಏಳೆಂಟು ತಿಂಗಳಿಂದ ಬೇರೆ ಬೇರೆಯಾಗಿಯೇ ಜೀವನ ನಡೆಸುತ್ತಿದ್ದರು. ಪತ್ನಿ ವಿಚ್ಛೇದನಕ್ಕೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು ಜೀವನಾಂಶವಾಗಿ ₹ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮಗನೊಂದಿಗೆ ಜಗಳ ಮಾಡುತ್ತಿದ್ದಳು. ಹೀಗಾಗಿ ನನ್ನ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಓಬಯ್ಯ ಹಾಗೈ, ತಾಯಿ ರುಬಿಕಮ್ಮ ಆರೋಪಿಸಿದ್ದಾರೆ. ಪಿಂಕಿ ಹಾಗೂ ಅವರ ಕುಂಟುಂಬದವರನ್ನು ಬಂಧಿಸಿ ಶಿಕ್ಷೆ ನೀಡುವ ಮೂಲಕ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.