ಬಿಜೆಪಿ ಇತಿಹಾಸದ ಬಗ್ಗೆ ಕಾಗೇರಿಯಿಂದ ನಾನು ಕಲಿಯುವ ಅಗತ್ಯ ಇಲ್ಲ: ಶಾಸಕ ಶಿವರಾಮ ಹೆಬ್ಬಾರ

| Published : May 31 2025, 12:37 AM IST

ಬಿಜೆಪಿ ಇತಿಹಾಸದ ಬಗ್ಗೆ ಕಾಗೇರಿಯಿಂದ ನಾನು ಕಲಿಯುವ ಅಗತ್ಯ ಇಲ್ಲ: ಶಾಸಕ ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಇತಿಹಾಸದ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ನಾನು ಕಲಿತುಕೊಳ್ಳಬೇಕಾದ ಅಗತ್ಯತೆ ಇಲ್ಲ.

ಶಿರಸಿ: ಬಿಜೆಪಿ ಇತಿಹಾಸದ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ನಾನು ಕಲಿತುಕೊಳ್ಳಬೇಕಾದ ಅಗತ್ಯತೆ ಇಲ್ಲ. ಕಾಗೇರಿ ರಾಜಕೀಯ ಕ್ಷೇತ್ರಕ್ಕೆ ಬರುವ ಪೂರ್ವದಲ್ಲಿಯೇ ನಾನು ಬಿಜೆಪಿಯ ಜಿಲ್ಲಾಧ್ಯಕ್ಷನಾಗಿದ್ದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದರು.

ಅವರು ಶುಕ್ರವಾರ ತಾಲೂಕಿನ ಬನವಾಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂಸದ ಕಾಗೇರಿ, ಶಿವರಾಮ ಹೆಬ್ಬಾರ್ ಅವರಾಗಿಯೇ ರಾಜೀನಾಮೆ ನೀಡಬೇಕಿತ್ತು ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾರ್ ಬಿಜೆಪಿಯಿಂದ ಉಚ್ಛಾಟಿಸಿದ್ದಕ್ಕೆ ಮುಂದೇನು? ಎಂಬ ಬಗ್ಗೆ ತುರ್ತಾಗಿ ನಿರ್ಣಯ ಸ್ವೀಕರಿಸಬೇಕಾದ ಅವಶ್ಯಕತೆ ನನಗಿಲ್ಲ. ೨೦೨೮ರವರೆಗೂ ಸಮಯವಿದ್ದು, ಚರ್ಚಿಸಿ, ಚಿಂತಿಸಿದ ಬಳಿಕವೇ ನಿರ್ಧಾರ ಕೈಗೊಳ್ಳುತ್ತೇನೆ. ಬೇರೆ ಯಾರೂ ರಾಜಕೀಯದಲ್ಲಿ ಬೆಳೆಯಬಾರದು ಎಂಬ ಮನಸ್ಥಿತಿ ಕಾಗೇರಿ ಅವರದ್ದು. ತ್ವರಿತವಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಪ್ರತಿಕ್ರಿಯಿಸದೇ ಬಿಡುವುದಿಲ್ಲ. ಜಿಲ್ಲೆಯಲ್ಲಿ ಇಷ್ಟು ವರ್ಷಗಳ ಕಾಲ ಏನೆಲ್ಲ ರಾಜಕೀಯ ಬೆಳವಣಿಗೆ ನಡೆದಿದೆ, ಯಾರು ಯಾರನ್ನು ಬೆಳೆಸಿದ್ದಾರೆ, ಯಾರು ತಾವೇ ಬೆಳೆದಿದ್ದಾರೆ? ನನಗೆ ಗೊತ್ತಿಲ್ಲದ ಇತಿಹಾಸ ಇಲ್ಲ. ನಾನು ಮಂತ್ರಿ ಆಗಿದ್ದಾಗ ಕಾಗೇರಿ ಸ್ಪೀಕರ್ ಆಗಿದ್ದರು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ ಸಂಸದ ಶಶಿ ತರೂರು ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಕಾಂಗ್ರೆಸ್ ಸಂಸದರಾಗಿ ಬಿಜೆಪಿ ಒಲವು ಹೊಂದಿದ್ದಾರೆ. ಈ ಬಗ್ಗೆ ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ನಾನು ಬಿಜೆಪಿಗೆ ಬಂದಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಿದ್ದನ್ನು ಮತ್ತೆ ಮತ್ತೆ ಚರ್ಚೆ ಮಾಡಿ ಪ್ರಯೋಜನವಿಲ್ಲ. ಈಗ ಎಲ್ಲವೂ ಮುಗಿದ ಅಧ್ಯಾಯ. ಕೆಡಿಸಿಸಿ ಬ್ಯಾಂಕ್ ಸಹಕಾರಿ ವ್ಯವಸ್ಥೆಯ್ಲಲಿದ್ದು, ಇಲ್ಲಿ ರಾಜಕೀಯ ಬೆರೆಸಲು ನಾನು ಸಿದ್ಧನಿಲ್ಲ. ಐದು ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯುವುದು ಸಾಮಾನ್ಯ. ಈಗ ಅವಧಿ ಮುಕ್ತಾಯವಾಗುತ್ತಿದ್ದು, ನವೆಂಬರ್‌ನಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಕೆಡಿಸಿಸಿ ಬ್ಯಾಂಕ್‌ನಲ್ಲಿ ರಾಜಕೀಯಕ್ಕೆ ಆಸ್ಪದ ನೀಡುವುದಿಲ್ಲ ಎಂದರು.