ಕಲಬುರಗಿ‌ ಅಭಿವೃದ್ಧಿಗೆ ಆಶೀರ್ವಾದ ಕೇಳಲು ಬಂದಿರುವೆ: ದೊಡ್ಡಮನಿ

| Published : Apr 19 2024, 01:05 AM IST

ಕಲಬುರಗಿ‌ ಅಭಿವೃದ್ಧಿಗೆ ಆಶೀರ್ವಾದ ಕೇಳಲು ಬಂದಿರುವೆ: ದೊಡ್ಡಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಲೋಕಸಭೆ ಕ್ಷೇತ್ರ ಪ್ರಮುಖ ಕ್ಷೇತ್ರವಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಇಲ್ಲಿಂದ ಆಯ್ಕೆಯಾಗಿ ಹೋಗಿದ್ದಾರೆ. ತಮ್ಮನ್ನು ಆಯ್ಕೆ ಮಾಡಿ ಕಳಿಸಿದರೆ ಸೇವೆ ಮಾಡುವುದಾಗಿ ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಕಲಬುರಗಿ ಲೋಕಸಭೆ ಕ್ಷೇತ್ರ ಪ್ರಮುಖ ಕ್ಷೇತ್ರವಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಇಲ್ಲಿಂದ ಆಯ್ಕೆಯಾಗಿ ಹೋಗಿದ್ದಾರೆ. ತಮ್ಮನ್ನು ಆಯ್ಕೆ ಮಾಡಿ ಕಳಿಸಿದರೆ ಸೇವೆ ಮಾಡುವುದಾಗಿ ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಅಫಜಲ್ಪುರ ಮತಕ್ಷೇತ್ರದ ಗೊಬ್ಬೂರು (ಬಿ) ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕನಸಿದ್ದು. ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ನನ್ನನ್ನು ಆಯ್ಕೆ ಮಾಡಿ ಕಳಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ದುಡಿಯುವುದಾಗಿ ಅವರು ಹೇಳಿದರು‌.

ಈ ಸಂದಬ್ಱದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ ಪಂಚ ಗ್ಯಾರಂಟಿ ಅನುಷ್ಠಾನ ನಮ್ಮ ಬದ್ಧತೆ ಎಂದರು. ಕಲಬುರಗಿ ಜಿಲ್ಲೆಗೆ ಮಂಜೂರಾಗಿದ್ದ ಪ್ರತ್ಯೇಕ ರೇಲ್ವೆ ವಲಯ, ನಿಮ್ಝ್, ಜವಳಿ ಪಾರ್ಕ್ ಯೋಜನೆಗಳು ಅನುಷ್ಠಾನಗೊಳ್ಳದೇ ವಾಪಸ್ ಹೋದವು. ಸಂಸದ ಉಮೇಶ್ ಜಾಧವ ಈ ಎಲ್ಲ ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ವಿಫಲರಾಗಿದ್ದಾರೆ. ಈ ಸಲ ಕಾಂಗ್ರೆಸ್ ಅಭ್ಯರ್ಥಿ ರಾಧಾ ಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು‌.

ಶಾಸಕರಾದ ಎಂ ವೈ ಪಾಟೀಲ್ ಮಾತನಾಡಿ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸಿದ್ದಾರೆ‌. ಅವರಿಗೆ ಅವಕಾಶ ನೀಡಬೇಡಿ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಕೇಂದ್ರದಲ್ಲಿ ಬಡವರ ಪರ ಸರ್ಕಾರ ಬರಲು ಆಶೀರ್ವಾದ ಮಾಡಿ‌ ಎಂದರು.

ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಮಾತನಾಡಿ ಬರೀ ಸುಳ್ಳು ಮೋಸವನ್ನೇ ಬಂಡವಾಳ ಮಾಡಿಕೊಂಡಿರುವ ಮೋದಿ ಜನವಿರೋಧಿ‌ ಆಡಳಿತ ನಡೆಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಲು ನಿರಾಕರಿಸಿರುವ ಮೋದಿ ಬಂಡವಾಳಶಾಹಿಗಳ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ತಮ್ಮ ಬಳಕೆಯ ವಸ್ತುಗಳಿಗೆ ಸಾರ್ವಜನಿಕರ ಹಣ ದುಂದು‌ವೆಚ್ಚ ಮಾಡುತ್ತಾ ದಿನಕ್ಕೆ ನಾಲ್ಕು ಬಟ್ಟೆ ಬದಲಾಯಿಸಿಕೊಂಡು ನಾಟಕವಾಡುತ್ತಿದ್ದಾರೆ. ಅವರು ಮತ್ತೊಮ್ಮೆ ಗೆದ್ದು ಬಂದರೆ ಮುಂದೆ ದೇಶದಲ್ಲಿ ಚುನಾವಣೆಗಳೇ ನಡೆಯಲ್ಲ. ನಾಗಪುರದ ನಿರ್ದೇಶನದಂತೆ ರಾಷ್ಟ್ರ ನಡೆಯುತ್ತದೆ. ಹಾಗಾಗದಂತೆ ನೀವೆಲ್ಲ ತಡೆಯಬೇಕು ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಅರುಣ್ ಪಾಟೀಲ, ಮಶಾಕ್ ಪಟೇಲ್, ರಾಜಗೋಪಾಲರೆಡ್ಡಿ, ರಾಜೇಂದ್ರ ಪಾಟೀಲ್ , ಲಚ್ಚಪ್ಪ ಜಮಾದಾರ ಸೇರಿದಂತೆ ಹಲವರಿದ್ದರು.ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ ಮೋದಿ ಬಡವರ ರೈತರ ಪರವಾಗಿಲ್ಲ. ಅವರು ಈ ದೇಶದ ಶ್ರೀಮಂತರ ಪರವಾಗಿದ್ದಾರೆ. ರೈತರ ಸಾಲ ಮನ್ನಾ ಮಾಡುವಂತೆ ಕೇಳಿದರೂ ರೈತರ ಪರ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ದೂರಿದರು. ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಜನ ಪರ ಕಾಳಜಿಯ ವ್ಯಕ್ತಿ ರಾಧಾಕೃಷ್ಣ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.