ಸಾರಾಂಶ
ಹರಪನಹಳ್ಳಿ: ಚುನಾವಣೆ ಬಿರುಗಾಳಿಗೆ ಮೈಯೊಡ್ಡಿ ಗೆದ್ದು ಬಂದಿದ್ದೇನೆ. ಜನರ ಪ್ರೀತಿ, ವಿಶ್ವಾಸ ಇದ್ದರೆ ಮುಂದೆ ಎಲ್ಲವನ್ನು ಗೆಲ್ಲಬಹುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ತಾಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಮಂಜೂರಾದ ₹65 ಲಕ್ಷ ಅನುದಾನದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನೂತನ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಬುಧವಾರ ಮಾತನಾಡಿದರು.
ನಾನು ಚುನಾವಣೆ ಬಿರುಗಾಳಿಯಲ್ಲಿ ಗೆದ್ದು ಕಳೆದ ಎರಡು ವರ್ಷದಲ್ಲಿ ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನಗೆ ಸ್ವಲ್ಪ ಸಮಯ ಕೊಡಿ. ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.ತಾಲೂಕಿನ ಚಿರಸ್ತಹಳ್ಳಿ, ಸತ್ತೂರು, ನಿಟ್ಟೂರು ಗ್ರಾಮಗಳಿಗೆ ಆರೋಗ್ಯ ಇಲಾಖೆಯಿಂದ ಮೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಮಂಜೂರಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಶಾಸಕರ ಇಚ್ಛಾಶಕ್ತಿಯಿಂದಾಗಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭರಪೂರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪಕ್ಕದ ತಾಲೂಕಿಗೆ ಹೋಲಿಸಿದರೆ ನಮ್ಮ ಹರಪನಹಳ್ಳಿ ತಾಲೂಕು ಅಭಿವೃದ್ಧಿಯಲ್ಲಿ ಮುಂದಿದೆ ಎಂದು ಹೇಳಿದರು.371ಜೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕ್ಷೇತ್ರದ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಮಾತನಾಡಿ, ರಾಜ್ಯದಲ್ಲಿ ಹರಪನಹಳ್ಳಿ ತಾಲೂಕು ಅಭಿವೃದ್ಧಿಯಲ್ಲಿ ನಂಬರ್ ಒನ್ ಇದೆ. ನಮ್ಮ ಶಾಸಕರು ಕ್ಷೇತ್ರದ ಮತದಾರರಿಗೆ ಕೊಟ್ಟ ಮಾತಿನಂತೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಪುರಸಭೆ ಸದಸ್ಯ ಲಾಟಿ ದಾದಪೀರ, ಗಣೇಶ, ಟಿಎಚ್ಒ ಡಾ.ಪೃಥ್ವಿ, ಗ್ರಾಪಂ ಸದಸ್ಯರಾದ ಚನ್ನಮಲ್ಲಿಕಾರ್ಜುನಸ್ವಾಮಿ, ಲಿಂಬ್ಯಾನಾಯ್ಕ್, ಪಿಡಿಒ ಕೆ.ಆನಂದ ನಾಯಕ್, ವೈದ್ಯೆ ವಿನೂತ, ಮತ್ತೂರ ಬಸವರಾಜ, ಎಚ್.ಟಿ. ಹನುಮಂತ, ಸೋಮು, ಎಲ್.ಮಂಜ್ಯಾನಾಯ್ಕ್, ಹಾರಕನಾಳು ಬಸವರಾಜ, ದಾದಾಪುರ ಮೃತ್ಯುಂಜಯ, ವಿಜಯಕುಮಾರ್ ಸೇರಿದಂತೆ ಮತ್ತಿತರರು ಇದ್ದರು.