ಕನ್ನಡಪ್ರಭ ವಾರ್ತೆ ಬೆಳಗಾವಿ
ದೈಹಿಕ ಶಿಕ್ಷಣ ಶಿಕ್ಷಕರ ಶ್ರೇಯೋಭಿವೃದ್ದಿಗಾಗಿ ವೈದ್ಯನಾಥ ವರದಿಯನ್ನು ಕ್ಯಾಬಿನೆಟ್ಗೆ ಸಲ್ಲಿಸಿ ₹ 9 ಕೋಟಿ ಅನುದಾನದಲ್ಲಿ ವರದಿ ಜಾರಿಗೊಳಿಸಲು ನಾನು ಶ್ರಮಿಸಿದ್ದೇನೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ತರಬೇತಿ ಸಂಸ್ಥೆ ಡಯಟ್ ಮಣ್ಣೂರು, ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ನಡೆದ ವಿಭಾಗ ಮಟ್ಟದ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯನಾಥ ವರದಿಯು ದೈಹಿಕ ಶಿಕ್ಷಣ ಶಿಕ್ಷಕರ ಅಭಿವೃದ್ಧಿಗೆ ಪೂರಕವಾಗಿದೆ. ವೈದ್ಯನಾಥ ವರದಿ ಜಾರಿಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಬದಲಾವಣೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದರೂ, ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಗಮನ ಹರಿಸುತ್ತೇನೆ. ಇನ್ನೂ ನಮ್ಮ ಕಾಲಾವಧಿಯಲ್ಲಿ ಸಿದ್ಧಪಡಿಸಿದ 6 ರಿಂದ 10 ನೇ ತರಗತಿವರೆಗಿನ ದೈಹಿಕ ಶಿಕ್ಷಣ ಪುಸ್ತಕ ಹೆಸರು ಬದಲಾವಣೆ ಮಾಡಬಾರದೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿ-2 ನವ ದೆಹಲಿ ಪ್ರಕಾಶ್ ಹುಕ್ಕೇರಿ, ಗಿರೀಶ್ ವೆಂಕಟರಮಣ ನಾಯಕ್, ಎಲ್.ಬಿ.ನಾಯಿಕ ಮುಂತಾದರು ಹಾಜರಿದ್ದರು.