ಸಾರಾಂಶ
- ಯೋಗ ಶಿಕ್ಷಕರ ತರಬೇತಿ ಶಿಬಿರ ಸಮಾರೋಪದಲ್ಲಿ ಭವರ್ಲಾಲ್ ಆರ್ಯ । ಸಂಜೀವಿನಿ ಆಂಜನೇಯ ದೇಗುಲ ಆವರಣ ಕಾರ್ಯಕ್ರಮ
- - - ಕನ್ನಡಪ್ರಭ ವಾರ್ತೆ ದಾವಣಗೆರೆಯೋಗ ಬಲದಿಂದ ಆತ್ಮಬಲ ಹೆಚ್ಚಾಗುತ್ತದೆ. ಆತ್ಮ ಬಲದಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಯೋಗ ನಿರಂತರ ಅಭ್ಯಾಸದಿಂದ ಉತ್ತಮ ಆರೋಗ್ಯ ಜೊತೆಗೆ ಆಧ್ಯಾತ್ಮದ ಅನುಭವವಾಗುತ್ತದೆ ಎಂದು ಪತಂಜಲಿ ಯೋಗ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಭಾರ ಭವರ್ ಲಾಲ್ ಆರ್ಯ ಹೇಳಿದರು.
ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಸಂಜೀವಿನಿ ಆಂಜನೇಯ ದೇಗುಲ ಆವರಣದಲ್ಲಿ ಗುರುವಾರ ದಾವಣಗೆರೆ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕರ್ನಾಟಕವನ್ನು ಯೋಗಮಯ ಮಾಡುವುದು ಬಾಬಾ ರಾಮ್ದೇವ್ ಗುರೂಜಿ ಆಶಯವಾಗಿದೆ. ರಾಜ್ಯದಲ್ಲಿ 1500 ಯೋಗ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ. ಇಡೀ ದಾವಣಗೆರೆಯನ್ನು ಯೋಗಮಯವಾಗಿ ಮಾಡುವುದು ನನ್ನ ಅಶಯವಾಗಿದೆ. ಯೋಗ ಶಿಕ್ಷಕರ ತರಬೇತಿಯನ್ನು ದಾವಣಗೆರೆಯ ಈ ಶಕ್ತಿ ಕೇಂದ್ರದಿಂದ ಆರಂಭ ಮಾಡಲಾಗಿದೆ. ಸುಮಾರು 167 ಯೋಗ ಶಿಕ್ಷಕರನ್ನು ತಯಾರು ಮಾಡಲಾಗಿದೆ. ದಾವಣಗೆರೆಯ 45 ವಾರ್ಡ್ಗಳಲ್ಲಿ ಆಯಾ ವಾರ್ಡ್ಗಳ ಕಾರ್ಪೋರೇಟರ್ಗಳ ಸಹಕಾರದೊಂದಿಗೆ ಪ್ರಾರಂಭ ಮಾಡಬೇಕು ಎಂದರು.
ಯೋಗ ಶಿಬಿರದ ಕುರಿತು ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಹ ಆಸಕ್ತಿಯನ್ನು ತೋರಿದ್ದಾರೆ. ವಿರಾಟ್ ಯೋಗ ತರಬೇತಿ ಮೂಲಕ ಯಶಸ್ವಿಯಾಗಿ ನಡೆಯುವ ಭರವಸೆ ಇದೆ ಎಂದರು.ಯೋಗ ಎನ್ನುವುದು ತಪಸ್ಸು. ಇದರಲ್ಲಿ ಯಾವುದೇ ಜಾತಿ, ಧರ್ಮಗಳು ಇಲ್ಲ. ಯೋಗವನ್ನು ಎಲ್ಲರೂ ಕಲಿಯಬಹುದಾಗಿದೆ. ಯೋಗ ಶಿಕ್ಷಕರು ನಾನು ನನ್ನಿಂದಲೇ ಎಂಬ ಅಹಂಕಾರವನ್ನು ಬದಿಗಿರಿಸಿ, ತಾವು ಕಲಿತಿರುವ ಯೋಗವನ್ನು ಮತ್ತೊಬ್ಬರಿಗೆ ಕಲಿಸಿಕೊಡಬೇಕು. ಎಲ್ಲರಿಗೂ ಸಾಕಷ್ಟು ಒತ್ತಡದ ಜೀವನ ಇರುತ್ತದೆ. ಅದರ ಜೊತೆಯಲ್ಲಿ ಸಮಾಜಕ್ಕೆ ನಮ್ಮ ಕೊಡುಗೆಯೇನು ಎನ್ನುವುದು ಸಹ ಅರಿಯಬೇಕು ಎಂದರು.
ಯೋಗ ಶಿಬಿರದ ಅಧ್ಯಕ್ಷ ಸುನೀಲ್ಕುಮಾರ್ ಮಾತನಾಡಿ, ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಆಯೋಜನೆ ಮಾಡುವ ಸಂದರ್ಭದಲ್ಲಿ ಸಂಜೀವಿನಿ ಆಂಜನೇಯ ದೇಗುಲದ ಸಮಿತಿಯವರು ಸಾಕಷ್ಟು ಸಹಕಾರ ನೀಡಿದ್ದಾರೆ. ಯೋಗ ಶಿಬಿರದ ಆನ್ಲೈನ್ನಲ್ಲಿ ಸಹ ಸಾಕಷ್ಟು ತರಬೇತಿ ಪಡೆದುಕೊಂಡಿದ್ದು, ಪ್ರತಿದಿನವೂ ಉತ್ತಮ ತರಬೇತಿ ಪಡೆದುಕೊಂಡಿದ್ದಾರೆ ಎಂದರು.ಈ ಸಂದರ್ಭ ಹಿರಿಯ ಯೋಗ ಶಿಕ್ಷಕರಾದ ರುದ್ರಮುನಿಯಪ್ಪ, ಜಿಲ್ಲಾ ಪ್ರಭಾರಿ ಬಿ.ಕೆ. ನರಸಿಂಹಮೂರ್ತಿ, ಮಂಡಲ ಪ್ರಭಾರಿಗಳಾದ ಎನ್ಎಸ್. ಷಣ್ಮುಖ, ದೇಗುಲ ಸಮಿತಿ ಸದಸ್ಯ ಟಿ.ಹನುಮಂತಪ್ಪ, ಚನ್ನಗಿರಿಯ ಯೋಗ ಶಿಕ್ಷಕ ವಸಂತ್, ಸುಜಾತ, ಹೊನ್ನಾಳಿಯ ರುದ್ರೇಶ್, ಶ್ರೀಕಾಂತ್, ಮಂಜುಳಾ ಪಾಟೀಲ್, ಗುಹೇಶ್ವರ್. ಕಲ್ಯಾಣಿ, ಇಂದ್ರ, ವಿನೋದ, ಸವಿತಾ, ಸುನೀಲ್ಕುಮರ್, ಪ್ರಭಾ, ಅಂಜಲಿ ಇತರರು ಹಾಜರಿದ್ದರು.
- - - -27ಕೆಡಿವಿಜಿ37.ಜೆಪಿಜಿ:ದಾವಣಗೆರೆಯಲ್ಲಿ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪತಂಜಲಿ ಯೋಗ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಇತರರು ಇದ್ದರು.