ವಿಧಾನಸಭೆ : ನನಗೆ ಮೊದಲ ಬಾರಿಗೆ ದೇವೇಗೌಡ ಅವರು ಆರ್ಥಿಕ ಇಲಾಖೆ ನೀಡಿದಾಗ ಬೇಡ ಎಂದಿದ್ದೆ. ಆದರೆ, ನಂಬಿಕಸ್ಥ ಬೇಕು ಎಂಬ ಕಾರಣಕ್ಕಾಗಿ ಬಲವಂತವಾಗಿ ನನ್ನನ್ನು ವಿತ್ತ ಸಚಿವನನ್ನಾಗಿ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

1994ರಲ್ಲಿ ಮೊದಲ ಬಾರಿಗೆ ವಿತ್ತ ಸಚಿವರಾದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 1994ರಲ್ಲಿ ಮೊದಲ ಬಾರಿಗೆ ವಿತ್ತ ಸಚಿವರನ್ನಾಗಿ ಮಾಡಿದ್ದು ಯಾರು ಎಂಬ ಕುರಿತು ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

ಬಜೆಟ್‌ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು, ಸಿದ್ದರಾಮಯ್ಯ ಅವರನ್ನು ದೇವೇಗೌಡ ಅವರು ಹುಡುಕಿ ಮೊದಲ ಬಾರಿಗೆ ಆರ್ಥಿಕ ಇಲಾಖೆಯ ಹೊಣೆ ನೀಡಿದರು ಎಂದು ಹೇಳಿದರು.


ಕಂದಾಯ ಇಲಾಖೆ ನೀಡುವಂತೆ ಕೋರಿದ್ದೆ

ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 1994ರಲ್ಲಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾಲಪ್ಪ ಮೆಡಿಕಲ್‌ ಕಾಲೇಜಿನಲ್ಲಿ ನಾನು, ದೇವೇಗೌಡ, ಪಿಜಿಆರ್‌ ಸಿಂಧ್ಯಾ, ಆರ್‌.ಎಲ್‌.ಜಾಲಪ್ಪ ಅವರು ಸಚಿವ ಸಂಪುಟ ರಚನೆ ಕುರಿತು ಚರ್ಚೆ ಮಾಡುತ್ತಿದ್ದೆವು. ಆಗ ನಾನು ಕಂದಾಯ ಇಲಾಖೆ ನೀಡುವಂತೆ ಕೋರಿದ್ದೆ. ಆದರೆ, ಜಾಲಪ್ಪ ಅವರು ತಮಗೆ ಕಂದಾಯ ಇಲಾಖೆ ನೀಡುವಂತೆ ಪಟ್ಟು ಹಿಡಿದರು. ಕೊನೆಗೆ ದೇವೇಗೌಡ ಅವರು ಆರ್ಥಿಕ ಇಲಾಖೆ ವಹಿಸಿಕೊಳ್ಳುವಂತೆ ತಿಳಿಸಿದರು. ಆದರೆ, ನಾನು ಬೇಡ ಎಂದೆ. ಆದರೂ ನಂಬಿಕಸ್ಥಬೇಕು ಎಂದು ಬಲವಂತವಾಗಿ ನನಗೆ ಆರ್ಥಿಕ ಸಚಿವನನ್ನಾಗಿ ಮಾಡಿದರೂ ಎಂದು ಸ್ಮರಿಸಿದರು.

ಆಗ ಅಶೋಕ್‌, ಅದಕ್ಕಾಗಿಯಾದರೂ ನೀವು ದೇವೇಗೌಡರಿಗೆ ಧನ್ಯವಾದ ಹೇಳಬೇಕು ಎಂದು ಕಾಲೆಳೆದರು.