ಕನ್ನಡಪ್ರಭ ವಾರ್ತೆ ಬೆಂಗಳೂರು
‘ನಾನು ದೆಹಲಿಗೆ ಹೋಗೋದು ಬರೋದು ಇದ್ದೇ ಇರುತ್ತದೆ. ಅವರು ಕರೆದಾಗಲೆಲ್ಲ ಹೋಗುತ್ತೇನೆ, ನಾನು ಹೋಗದೇ ಮತ್ಯಾರು ಹೋಗಬೇಕು? ರಾಜ್ಯ ರಾಜಕೀಯದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಗೆ ಕರೆದಾಗಲೆಲ್ಲಾ ಹೋಗುತ್ತಿರುತ್ತೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಅದು ನನ್ನ ಕರ್ತವ್ಯ. ಇನ್ನು ಪ್ರಿಯಾಂಕಾ ಗಾಂಧಿ ಅವರೊಂದಿಗಿನ ಚರ್ಚೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ರಾಜ್ಯ ರಾಜಕೀಯದ ಬಗ್ಗೆ ಹಾಗೆಲ್ಲಾ ಎಲ್ಲೆಂದರಲ್ಲಿ ಚರ್ಚೆ ಮಾಡುವುದಿಲ್ಲ. ಅದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಅಮೆರಿಕ ವಿಧಿಸಿರುವ ತೆರಿಗೆ ವಿಚಾರವಾಗಿ ಪ್ರಧಾನಿ ಮೋದಿ ಅವರ ವಿರುದ್ಧದ ರಾಹುಲ್ಗಾಂಧಿ ಟೀಕೆ ಕುರಿತ ಪ್ರಶ್ನೆಗೆ, ‘ರಾಹುಲ್ ಗಾಂಧಿ ಅವರು ದೇಶದ ಹಿತಕ್ಕಾಗಿ ಏನು ಬೇಕೋ ಅದನ್ನು ಮಾಡುತ್ತಾರೆ ಹಾಗೂ ಮಾತಾಡುತ್ತಾರೆ. ಅಮೆರಿಕದ ಜತೆಗಿನ ತೆರಿಗೆ ಒಪ್ಪಂದ ದೇಶದ ರೈತನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಚರ್ಚೆ ಮಾಡುತ್ತಾರೆ’ ಎಂದರು.ಕ್ಷೇತ್ರದ ವಿಚಾರವಾಗಿ ಪರಂ, ಎಚ್ಡಿಕೆ ಭೇಟಿ-ಡಿಕೆಶಿಎಚ್.ಡಿ. ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್, ಪರಮೇಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ವಿಚಾರವಾಗಿ ಚರ್ಚೆ ಮಾಡಲು ಭೇಟಿಯಾಗಿರಬಹುದು. ರಾಜ್ಯ ಸಚಿವರು ಹಾಗೂ ಕೇಂದ್ರ ಸಚಿವರು ಭೇಟಿ ಮಾಡಿದ್ದಾರೆ ಎಂದಷ್ಟೇ ಹೇಳಿದರು.
ನರೇಗಾ ಉಳಿಸಿ ಸಮಾವೇಶದಲ್ಲಿ ಭಾಗಿ: ಕೋಲಾರ, ಚಿಕ್ಕಬಳ್ಳಾಪುರ ಎರಡೂ ಜಿಲ್ಲೆ ಸೇರಿ ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಮನರೇಗಾ ಉಳಿಸಿ ಸಮಾವೇಶ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಒಟ್ಟಾಗಿ ಭಾಗವಹಿಸುತ್ತಿದ್ದೇವೆ ಎಂದು ಇದೇ ವೇಳೆ ಶಿವಕುಮಾರ್ ಮಾಹಿತಿ ನೀಡಿದರು.
ಇದೇ ಸಮಾವೇಶದಲ್ಲಿ ಭಾಗವಹಿಸಲು ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸುತ್ತಿದ್ದಾರೆ. ಮನರೇಗಾ ರಕ್ಷಣೆಗೆ ಆಗ್ರಹಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲಾಗಿದೆ. ಬಾಕಿ ಇರುವ ಕ್ಷೇತ್ರಗಳಲ್ಲೂ ಮಾಡುತ್ತೇವೆ ಎಂದು ಹೇಳಿದರು.