ಸಾರಾಂಶ
ಕನಕಪುರ: ರೂರಲ್ ಎಜುಕೇಶನ್ ಸೊಸೈಟಿ ಉಳಿಸಿ, ಬೆಳೆಸುವುದು ನನ್ನ ಕೆಲಸ, ಜನಸಾಮಾನ್ಯರ ಮಕ್ಕಳಿಗಾಗಿ ಈ ಸಂಸ್ಥೆಯಿಂದ ಕೃಷಿ ಕಾಲೇಜು ನಿರ್ಮಾಣವಾಗಿರುವುದು ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಮ್ಮೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಗಾಂಧಿ ಫಾರಂನಲ್ಲಿ ಸ್ಥಾಪನೆಯಾಗಲಿರುವ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನನಗೂ ಹಾಗೂ ಸಂಸ್ಥೆಯ ಅಧ್ಯಕ್ಷ ಶ್ರೀಕಂಠು ಅವರಿಗೆ ಸಂಸ್ಥೆಯ ಈ ಜಾಗ ಎಲ್ಲಿ ಒತ್ತುವರಿಯಾಗುತ್ತದೆಯೋ ಎನ್ನುವ ಆಂತಕವಿತ್ತು. ಈಗ ಸದರಿ ಜಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗುತ್ತಿರುವುದು ಸಮಾಧಾನ ಹಾಗೂ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಹಿಂದೆ ರೂರಲ್ ಎಜುಕೇಶನ್ ಸೊಸೈಟಿ ಅವರು ನನ್ನನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾ ಇರಲಿಲ್ಲ. ಈ ಹಿಂದೆ ಡಿ.ಲಿಂಗೇಗೌಡರು, ಚನ್ನಬಸವೇಗೌಡರ ಕಾಲದಿಂದಲೂ ಈ ಬಗ್ಗೆ ನಾನು ಹೇಳುತ್ತಾ ಬಂದಿದ್ದೆ, ಚನ್ನಬಸವೇಗೌಡರ ಕಾಲದಲ್ಲಿಯೇ ನರ್ಸಿಂಗ್ ಕಾಲೇಜು ಮಂಜೂರು ಆಗಿದ್ದರೂ ನನ್ನನ್ನು ಭೇಟಿ ಮಾಡಲು ಅವಮಾನ ಎಂದುಕೊಂಡು ಬಂದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಹೆಸರು ಬದಲಾವಣೆಯಿಂದ ಜನಜೀವನ ಬದಲಾವಣೆ:
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಕಾರಣಕ್ಕೆ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಈಗ ಅರ್ಥವಾಗುತ್ತಿದೆ. ಕೆಲವರು ಇದನ್ನು ಟೀಕೆ ಮಾಡುತ್ತಿದ್ದಾರೆ. ಅವರಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ, ನಾವು ನಮಗೆ ಇದ್ದ ಹೆಸರನ್ನು ಉಳಿಸಿಕೊಂಡಿದ್ದೇವೆಯೇ ಹೊರತು ಯಾರ ಹೆಸರನ್ನು ಕಿತ್ತುಕೊಂಡಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ನಾನು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ, ಸುರೇಶ್ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಈ ಸಂಸತ್ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಕರೆಯಲಾಗುತ್ತದೆ. ಎಲ್ಲಿಂದ ಎಲ್ಲಿಗೆ ಹೋದರು ಅಮೆರಿಕಾ ಎನ್ನುತ್ತಾರೋ ಹಾಗೆ ಅದೇ ರೀತಿ ಇದೂ ಕೂಡ ಬೆಂಗಳೂರು ಎಂದು ಕರೆಸಿಕೊಳ್ಳಬೇಕು ಎಂದು ಹೇಳಿದರು.ಈಗಾಗಲೇ ರಾಮನಗರ ಕ್ಷೇತ್ರಕ್ಕೆ 1 ಸಾವಿರ ಕೋಟಿಯಷ್ಟು ಅನುದಾನ ನೀಡಲಾಗಿದೆ, ಚನ್ನಪಟ್ಟಣ ಉಪ ಚುನಾವಣೆ ವೇಳೆ 300 ಕೋಟಿಗೂ ಹೆಚ್ಚು ಹಣ ಕ್ಷೇತ್ರಕ್ಕೆ ನೀಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲನಿಲಯವನ್ನು ಪ್ರಾರಂಭ ಮಾಡಲಾಗಿದೆ. ಹಾರೋಹಳ್ಳಿ, ಕೋಡಹಳ್ಳಿ, ಸಾತನೂರು, ಕನಕಪುರ ಮುಖ್ಯರಸ್ತೆಗಳನ್ನು ಅಗಲ ಮಾಡಿ ಅಭಿವೃದ್ಧಿಪಡಿಸಿದ ಪರಿಣಾಮ ಆಸ್ತಿಯ ಮೌಲ್ಯ ಹೆಚ್ಚಾಗಿದೆರಸ್ತೆ ಅಗಲೀಕರಣ ಮಾಡಿದಷ್ಟು ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಪಿ.ಜಿ.ಆರ್.ಸಿಂಧ್ಯಾ ಅವರು ಮತಗಳು ಹೋಗುತ್ತವೆ ಎಂದು ರಸ್ತೆ ಅಗಲೀಕರಣ ಮಾಡಿರಲಿಲ್ಲ. 500 ಮತಗಳನ್ನು ನೋಡಲು ಹೋದರೆ 5 ಸಾವಿರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಉತ್ತಮವಾದ ಕೃಷಿ ಕಾಲೇಜು ನಿರ್ಮಾಣವಾಗುತ್ತಿದೆ. ತುಂಡು, ತುಂಡು ಕಾಮಗಾರಿ ಮಾಡಲು ಹೋಗಬೇಡಿ, ಈಗಲೇ 500 ವಿದ್ಯಾರ್ಥಿ ಸಾಮರ್ಥ್ಯದ ಹಾಸ್ಟಲ್, ಆಡಳಿತ ಭವನ ನಿರ್ಮಾಣವೂ ಆಗಲಿ ಎಂದು ಸಲಹೆ ನೀಡುತ್ತೇನೆ. ಸಾಲ ಸೌಲಭ್ಯ ದೊರೆಯಲಿಲ್ಲ ಎಂದರೆ ನಾನು ಸಾಲ ಕೊಡಿಸುತ್ತೇನೆ. ಈಗಾಗಲೇ ನಾನು ಕಟ್ಟಡ ವಾಸ್ತುಶಿಲ್ಪಿಗಳ ಬಳಿ ಕಟ್ಟಡ ವಿನ್ಯಾಸ ಹೇಗಿರಬೇಕು ಎಂದು ಚರ್ಚೆ ನಡೆಸಿ ಬದಲಾವಣೆ ಸೂಚಿಸಿದ್ದೇನೆ ಎಂದರು.ವಸತಿ ಅಕ್ರಮ ಸುಳ್ಳು:ದುಡ್ಡು ಪಡೆದು ಮನೆ ನೀಡಿದ್ದಾರೆ ಎನ್ನುವ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇದೆಲ್ಲವೂ ಸುಳ್ಳು. ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲಾಗುತ್ತದೆಯೇ? ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನೀಡಬೇಕೋ ಆಯಾಯ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತಾರೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ " ಎಂದು ಪ್ರಶ್ನಿಸಿದ ಅವರು ಬಿ.ಆರ್. ಪಾಟೀಲ್ ಅವರಿಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ ನಾನು ಅವರ ಬಳಿ ಮಾತನಾಡುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ. ಸುಧಾಮ್ ದಾಸ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಆರ್ಇಎಸ್ ಅಧ್ಯಕ್ಷ ಎಚ್ ಕೆ ಶ್ರೀಕಂಠ, ಮುಖಂಡರಾದ ಈಶ್ವರ್, ಅಶೋಕ್, ಹರೀಶ್ ಕುಮಾರ್, ಮಾಜಿ ಶಾಸಕ ಕೆ.ರಾಜು ಸೇರಿದಂತೆ ಹಲವು ಮುಖಂಡರು ಹಾಗೂ ಆರ್ಇಎಸ್ ಸಂಸ್ಥೆಯ ನಿರ್ದೇಶಕರು, ಉಪನ್ಯಾಸಕರು ಸೇರಿದಂತೆ ಸಾರ್ವಜನಿಕ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಹಾರೋಹಳ್ಳಿ ಬಳಿಯ ಗಾಂಧಿಫಾರಂನಲ್ಲಿ ಎಸ್ ಕರಿಯಪ್ಪ ಕೃಷಿ ಕಾಲೇಜು ಕಟ್ಟಡ ಕಾಮಗಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ಮಾಡಿದರು.